ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮುಂದಿರುವ ಸವಾಲುಗಳು
ಬೆಂಗಳೂರು, ಆಗಸ್ಟ್ 21 : ನಳಿನ್ ಕುಮಾರ್ ಕಟೀಲ್ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡದ ಸಂಸದ ಬಿಜೆಪಿ ಸರ್ಕಾರವಿರುವ ರಾಜ್ಯದ ಪ್ರಮುಖ ಹುದ್ದೆಗೆ ಏರಿದ್ದು, ಹಲವು ಸವಾಲುಗಳು ಅವರ ಮುಂದಿದೆ.
ಸಂಸದರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವುದು ಬಿಜೆಪಿಗೆ ಹೊಸದೇನಲ್ಲ. ಹಲವು ರಾಜ್ಯಗಳಲ್ಲಿ ಇಂತಹ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ ಪಕ್ಷದ ನಾಯಕರಿಂದ ಚಾಣಾಕ್ಷ ಎಂದೇ ಕರೆಸಿಕೊಳ್ಳುವ ಅಮಿತ್ ಶಾ.
ಪಕ್ಷ ಸಂಘಟನೆಗೆ ಮೊದಲ ಆದ್ಯತೆ : ನಳಿನ್ ಕುಮಾರ್ ಕಟೀಲ್
ಕೆಜೆಪಿ ಕಟ್ಟಿ ಒಂದು ಚುನಾವಣೆ ಎದುರಿಸಿ ಪುನಃ ಬಿಜೆಪಿಗೆ ಬಂದ ಯಡಿಯೂರಪ್ಪ ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆ, ವಿವಿಧ ಉಪ ಚುನಾವಣೆಗಳನ್ನು ಯಡಿಯೂರಪ್ಪ ಸಮರ್ಥವಾಗಿ ಎದುರಿಸಿದ್ದರು.
ಬಿಜೆಪಿ ಹೊಸ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪರಿಚಯ
ಮೈತ್ರಿ ಸರ್ಕಾರ ಪತನಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ನಾಯಕರ ಹೆಸರು ಕೇಳಿ ಬಂದರೂ ಅಂತಿಮವಾಗಿ ಪಕ್ಷ ಪ್ರಭಾವ ಹೊಂದಿರುವ ಕರಾವಳಿ ಭಾಗದ ನಾಯಕನಿಗೆ ಪಕ್ಷವನ್ನು ರಾಜ್ಯದಲ್ಲಿ ಮುನ್ನೆಡೆಸುವ ಹೊಣೆ ವಹಿಸಲಾಗಿದೆ.
ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ಬಂಡಾಯ ಶಮನ ಮಾಡುವುದು
ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಕೆಲವು ಹಿರಿಯ ಶಾಸಕರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಅಸಮಾಧಾನ ಬಗೆಹರಿಸುವುದು ಮೊದಲ ಸವಾಲು ಆಗಿದೆ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ.
ಸಮನ್ವಯತೆ ಸಾಧಿಸುವುದು
ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಸಾಧಿಸುವ ಸವಾಲು ರಾಜ್ಯಾಧ್ಯಕ್ಷರ ಮುಂದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಪಕ್ಷ ಆದ್ಯತೆ ನೀಡಬೇಕಾಗುತ್ತದೆ. ಕಾರ್ಯಕರ್ತರು ಸಹ ಸರ್ಕಾರದ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.
ಉಪ ಚುನಾವಣೆ ಎದುರಿಸುವುದು
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾಂಗ್ರೆಸ್ನ 14 ಮತ್ತು ಜೆಡಿಎಸ್ನ 3 ಶಾಸಕರು ಕಾರಣ. ಎಲ್ಲಾ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ್ದು ಆ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗುವ ನಿರೀಕ್ಷೆ ಇದೆ. ಉಪ ಚುನಾವಣೆ ಘೋಷಣೆಯಾದರೆ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸರ್ಕಾರವನ್ನು ಸುಭದ್ರಗೊಳಿಸಬೇಕು.
ಅನರ್ಹ ಶಾಸಕರ ವಿಶ್ವಾಸಗಳಿಸುವುದು
ಕಾಂಗ್ರೆಸ್, ಜೆಡಿಎಸ್ ಅನರ್ಹ ಶಾಸಕರ ಬಿಜೆಪಿ ನಾಯಕರ ಮೇಲೆ ವಿಶ್ವಾಸವಿಟ್ಟುಕೊಂಡಿದ್ದಾರೆ. ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷದ ನಾಯಕರು ಅಸಮಾಧಾನಗೊಳ್ಳದಂತೆ 17 ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದು ಅವರ ಮುಂದಿರುವ ದೊಡ್ಡ ಸವಾಲಾಗಿದೆ.