ಎಚ್.ಡಿ.ಕುಮಾರಸ್ವಾಮಿ ಸರ್ಕಾರ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳು!
Recommended Video
ಬೆಂಗಳೂರು, ಆಗಸ್ಟ್ 22 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಕಳೆಯಲಿದೆ. ಮೇ 23ರಂದು ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಹೈಡ್ರಾಮ ನಡೆಯಿತು. 104 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಸರ್ಕಾರ ರಚಿಸಿತು. ಬಿ.ಎಸ್.ಯುಡಿಯೂರಪ್ಪ ಸರ್ಕಾರ ರಚನೆ ಮಾಡಿದರು. ಎರಡು ದಿನದಲ್ಲಿ ಬಹುಮತವಿಲ್ಲದೆ ಸರ್ಕಾರ ಪತನಗೊಂಡಿತು.
ಕುಮಾರಸ್ವಾಮಿ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿವೆ. ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದ್ದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ಗೆ ಉಪ ಮುಖ್ಯಮಂತ್ರಿ ಪಟ್ಟ ಸಿಕ್ಕಿದ್ದು, ಡಾ.ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ.
ಅಂಕಿ-ಅಂಶ: ಒಟ್ಟು ಎಷ್ಟು ರೈತರ ಎಷ್ಟು ಮೊತ್ತದ ಸಾಲಮನ್ನಾ ಆಗಲಿದೆ
ಆಗಸ್ಟ್ 23ಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆಯುತ್ತದೆ. ಈ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ವಿರೋಧ ಪಕ್ಷ ಬಿಜೆಪಿ ಹೇಳುತ್ತಲೇ ಇದೆ. ವಿರೋಧ ಪಕ್ಷದ ಮಾತಿಗೆ ಸೆಡ್ಡು ಹೊಡೆಯುವಂತೆ ಕಾಂಗ್ರೆಸ್-ಜೆಡಿಎಸ್ ಸಮನ್ವಯದಿಂದ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿವೆ. 3 ತಿಂಗಳಿನಲ್ಲಿ ಸರ್ಕಾರ ಎದುರಿಸಿದ ಸವಾಲುಗಳೇನು? ಚಿತ್ರಗಳಲ್ಲಿದೆ ಮಾಹಿತಿ....
ಸಂಪುಟ ರಚನೆ ವಿಸ್ತರಣೆ
ಎಚ್.ಡಿ.ಕುಮಾರಸ್ವಾಮಿ ಮುಂದೆ ಮೊದಲು ಬಂದ ಸವಾಲು ಸಂಪುಟ ರಚನೆ. ಹಲವಾರು ಸುತ್ತಿನ ಸಭೆಗಳನ್ನು ಮಾಡಿ, ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿ ಸಂಪುಟಕ್ಕೆ ಯಾರು ಸೇರಬೇಕು? ಎಂದು ಕುಮಾರಸ್ವಾಮಿ ತೀರ್ಮಾನ ಮಾಡಿದರು.
ಕಾಂಗ್ರೆಸ್ನ 14 ಮತ್ತು ಜೆಡಿಎಸ್ನ 9 ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟವನ್ನು ಸೇರಿದರು. ಸರ್ಕಾರಕ್ಕೆ ಬೆಂಬಲ ನೀಡಿದ ಬಿಎಸ್ಪಿ, ಕೆಪಿಜೆಪಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಬಳಿಕ ಖಾತೆ ಹಂಚಿಕೆಯಲ್ಲಿಯೂ ಹಲವು ಸವಾಲುಗಳು ಎದುರಾದವು. ಅಂತಿಮವಾಗಿ ಖಾತೆ ಹಂಚಿಕೆ ನಡೆಸಿ ಸರ್ಕಾರದ ಕೆಲಸಕ್ಕೆ ಚಾಲನೆ ನೀಡಲಾಯಿತು.
ಸಾಲಮನ್ನಾದ ಸವಾಲು
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ರೈತರ ಸಂಪೂರ್ಣ ಸಾಲಮನ್ನಾದ ಕುರಿತು ಚರ್ಚೆ ಆರಂಭವಾಯಿತು. 24 ಗಂಟೆಯಲ್ಲಿ ಸಾಲ ಮನ್ನಾ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿದವು. ರೈತರು, ಬ್ಯಾಂಕ್ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ಹಲವು ಸಭೆಗಳನ್ನು ನಡೆಸಿದರು.
ಅಂತಿಮವಾಗಿ 2018-19ನೇ ಸಾಲಿನ ಬಜೆಟ್ನಲ್ಲಿ 34 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದರು. ರೈತರ ಸಾಲಮನ್ನಾ ವಿಚಾರದಲ್ಲಿ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯಲಿದೆ.
ಬಜೆಟ್ ಮಂಡನೆ ಸವಾಲು
ಹಣಕಾಸು ಸಚಿವರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಎದುರಿಸಿದ ಸವಾಲುಗಳಲ್ಲಿ ಬಜೆಟ್ ಮಂಡನೆಯೂ ಒಂದು. 2018-19ನೇ ಸಾಲಿನ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಿದರು. 2,14,488 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿತ್ತು.
ಬಜೆಟ್ನಲ್ಲಿ ಹಾಸನ, ಮಂಡ್ಯ, ಮೈಸೂರು ಭಾಗಕ್ಕೆ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ಇದು ಸರ್ಕಾರ ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ.
ಕೊಡಗು ಪ್ರವಾಹ
ಮೇ ನಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಜೂನ್ನಲ್ಲಿ ಮುಂಗಾರು ಆರಂಭಗೊಂಡು ಉತ್ತಮ ಮಳೆಯಾಯಿತು. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾದವು. ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿ ಆಯಿತು. ಕುಮಾರಸ್ವಾಮಿ ಅವರು ದಂಪತಿ ಸಮೇತರಾಗಿ ಕೆಎಆರ್ಎಸ್ಗೆ ಬಾಗಿನ ಸಲ್ಲಿಸಿ ಬಂದರು.
ಆದರೆ, ಕೊಡಗು, ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಮಳೆ ಭಾರೀ ನಷ್ಟವನ್ನು ಉಂಟು ಮಾಡಿತು. ಕೊಡಗಿನಲ್ಲಿ ಮಳೆ, ಪ್ರವಾಹ, ಗುಡ್ಡ ಕುಸಿತದಿಂದ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದರು. ಪರಿಹಾರ ಕಾರ್ಯ ಕೈಗೊಳ್ಳುವುದು ದೊಡ್ಡ ಸವಾಲು ಆಯಿತು. ಕುಮಾರಸ್ವಾಮಿ ಅವರು 2 ದಿನಗಳ ಕಾಲ ಕೊಡಗಿನಲ್ಲಿ ಪ್ರವಾಸ ಕೈಗೊಂಡು ಪರಿಹಾರ ಕಾರ್ಯದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದಾಯಿ ವಿವಾದ
ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ. ಅತ್ತ ಕಾವೇರಿ ನ್ಯಾಯಾಧಿಕರಣ ಮಹದಾಯಿ ವಿವಾದದ ಅಂತಿಮ ತೀರ್ಪನ್ನು ಆ.14ರಂದು ಪ್ರಕಟಿಸಿತು.
ಗೋವಾ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡಿತು. ಕರ್ನಾಟಕ ಸರ್ಕಾರ 36 ಟಿಎಂಸಿ ನೀರು ಕೇಳಿತ್ತು. ಆದರೆ, 13 ಟಿಎಂಸಿ ನೀರನ್ನು ನ್ಯಾಯಾಧಿಕರಣ ನೀಡಿತು. ನ್ಯಾಯಾಧಿಕರಣದ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
9 ಸ್ಥಾನದಲ್ಲಿ ಕುಮಾರಸ್ವಾಮಿ
ದೇಶದ ಉತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 9ನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳು ಕಳೆದರೂ ಸಹ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮತಗಳು ಸಿಕ್ಕಿವೆ.
India Today-Karvy Mood of the Nation(MOTN) ನಡೆಸಿದ ಸಮೀಕ್ಷೆಯ ವರದಿ ಪ್ರಕಟವಾಗಿದೆ. ಈ ಸಮೀಕ್ಷೆಯಲ್ಲಿ ಉತ್ತಮ ಮುಖ್ಯಮಂತ್ರಿ ಯಾರು? ಎಂದು ಪ್ರಶ್ನಿಸಲಾಗಿತ್ತು. ಕುಮಾರಸ್ವಾಮಿ ಅವರು 9ನೇ ಸ್ಥಾನ ಪಡೆದಿದ್ದಾರೆ.