ಪ್ರತಾಪ್ ಸಿಂಹ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್ : ಸೂಲಿಬೆಲೆ
ಬೆಂಗಳೂರು, ಅ 4: ಉತ್ತರ ಕರ್ನಾಟಕದ ಬರ ಪರಿಹಾರ ವಿಳಂಬದ ವಿಚಾರದಲ್ಲಿ, ವಿರೋಧ ಪಕ್ಷಗಳು, ಬಿಜೆಪಿಯನ್ನು ಟೀಕಿಸುತ್ತಿರುವುದು ಒಂದು ಕಡೆ. ಈ ವಿಳಂಬ, ಬಿಜೆಪಿಯಲ್ಲೇ ದೊಡ್ಡ ಕದಂಕವನ್ನು ಸೃಷ್ಟಿಸಿರುವುದು ಇನ್ನೊಂದೆಡೆ.
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೀಡಿರುವ ಹೇಳಿಕೆ, ರಾಜ್ಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿಗಾಗಿ ತಮ್ಮ ಜೀವನವನ್ನೇ ಧಾರೆ ಎರೆದಿರುವ ಸೂಲಿಬೆಲೆ ಹೇಳಿಕೆ, ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸೂಲಿಬೆಲೆ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೀಡಿದ ಪ್ರತಿಕ್ರಿಯೆ, ಬಿಜೆಪಿ ಕಾರ್ಯಕರ್ತರಿಗೇ ಕಿರಿಕಿರಿಯನ್ನುಂಟು ಮಾಡಿತ್ತು. ಇವೆಲ್ಲದರ ನಡುವೆ, ಪ್ರತಾಪ್ ಸಿಂಹ ನೀಡಿರುವ ಹೇಳಿಕೆ, ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.
ಮೋದಿ ಆರಾಧಕ ಸೂಲಿಬೆಲೆ ಬಾಯಿಯಿಂದ ಇಂತಾ ಡಬಲ್ ಸ್ಟ್ಯಾಂಡರ್ಡ್ ಮಾತೇ?
"ಮೋದಿ ಹೆಸರು ಹೇಳದಿದ್ದರೆ, ಅವರ ಭಾಷಣಕ್ಕೆ ಯಾರು ಬರುತ್ತಾರೆ" ಎನ್ನುವ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ, ಸೂಲಿಬೆಲೆ ತೂಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದು ಹೀಗಿದೆ..
ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ
"ಅವರ ಭಾಷಣಕ್ಕೂ ಮೋದಿಯೇ ಬಂಡವಾಳ'. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ?' ಎಂದು ಚಕ್ರವರ್ತಿ ಸೂಲಿಬೆಲೆಯವರ ಹೆಸರು ಉಲ್ಲೇಖಿಸದೇ, ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದರು. "ಅವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯವರ ಆತ್ಮಕಥೆ ಬರೆದಿದ್ದೆ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ" ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಪ್ರತಾಪ್ ಸಿಂಹ ಅವರ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ಪ್ರತಾಪ್ ಸಿಂಹ ಅವರ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ನೀಡಿದ ಪ್ರತಿಕ್ರಿಯೆ ಹೀಗಿತ್ತು, " ಇಲ್ಲಿ ತುರ್ತಾಗಿ ಚರ್ಚೆ ಆಗಬೇಕಾಗಿರುವುದು ಪರಿಹಾರದ ವಿಚಾರ. ಅದನ್ನು ಬಿಟ್ಟು ಬೇರೆ ವಿಷಯದ ಬಗ್ಗೆ ಮಾತನಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಸದಾನಂದ ಗೌಡ್ರು, ಪ್ರತಾಪ್ ಸಿಂಹ, ಒಂದ್ಸಲ ಗೆಲ್ತಾರೆ, ಒಂದು ಸಲ ಸೋಲ್ತಾರೆ ಇದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ".
ಬರ ಪರಿಹಾರ: ಬಿಎಸ್ವೈ ಸಿಎಂ ಆಗಿದ್ದು ಮೋದಿ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?
ನೀವೇನಾದರೂ ಮಾತನಾಡಿಕೊಳ್ಳುತ್ತಿರಿ, ಐ ಡೋಂಟ್ ಮೈಂಡ್
"ಅವರಿಬ್ಬರು ಎಷ್ಟಾದರೂ ನನ್ನ ಬಗ್ಗೆ ಮಾತನಾಡಿಕೊಳ್ಳಲಿ, ನಾನು ಅದರ ಬಗ್ಗೆ ಚಿಂತಿಸುವುದಿಲ್ಲ. ನಾನು ದಯಮಾಡಿ ಅವರನ್ನು ಕೇಳುತ್ತಿರುವುದು ಇಷ್ಟೇ.. ಮೊದಲು ಉತ್ತರ ಕರ್ನಾಟಕಕ್ಕೆ ಪರಿಹಾರ ತಂದುಕೊಡಿ. ನೀವೇನಾದರೂ ಮಾತನಾಡಿಕೊಳ್ಳುತ್ತಿರಿ, ಐ ಡೋಂಟ್ ಮೈಂಡ್" ಎಂದು ಸೂಲಿಬೆಲೆ ಹೇಳಿದ್ದಾರೆ.
ಪ್ರತಾಪ್ ಸಿಂಹ ಅವರೇ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು
"ನನ್ನನ್ನು ದೇಶದ್ರೋಹಿ ಎಂದರು. ನಾನು ಅದಕ್ಕೆ ಏನೂ ಕಾಮೆಂಟ್ ಮಾಡಲು ಹೋಗಿಲ್ಲ. ಅವರ ಹೇಳಿಕೆಗೆ ರಿಪ್ಲೈ ಮಾಡಿ, ನನಗೇನೂ ಆಗಬೇಕಾಗಿಲ್ಲ. ನನ್ನ ಮಾತಿನ ಉದ್ದೇಶ ಸ್ಪಷ್ಟ. ಉತ್ತರ ಕರ್ನಾಟಕದ ಜನರ ನೋವಿಗೆ ನಾವು ನಿಂತುಕೊಳ್ಳಬೇಕು. ಅದಕ್ಕೆ ಕೇಂದ್ರದಿಂದ ಪರಿಹಾರ ತುರ್ತಾಗಿ ಬರಬೇಕು. ಅದಷ್ಟೇ ನನಗೆ ಬೇಕಾಗಿರುವುದು. ಅಷ್ಟು ಮಾಡಿ ಪ್ರತಾಪ್ ಸಿಂಹ ಅವರೇ, ಐ ವಿಲ್ ಬಿ ಗ್ರೇಟ್ ಫುಲ್ ಟು ಯು ಫಾರೆವರ್" - ಚಕ್ರವರ್ತಿ ಸೂಲಿಬೆಲೆ.
ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಪರೋಕ್ಷವಾಗಿ ತೆಗಳಿದ್ದ ಡಿವಿಎಸ್
"ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರ್ಯಾಂಡ್ಗೆ ಸೇರುತ್ತಾರೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಪರೋಕ್ಷವಾಗಿ ತೆಗಳಿದ್ದರು.