ಮೋದಿ ಆರಾಧಕ ಸೂಲಿಬೆಲೆ ಬಾಯಿಯಿಂದ ಇಂತಾ ಡಬಲ್ ಸ್ಟ್ಯಾಂಡರ್ಡ್ ಮಾತೇ?
" ರಾಜಕಾರಣಿಗಳಿಗೆ ಸೊನ್ನೆಗಿಂತ ಕಮ್ಮಿ ಅಂಕ ಕೊಟ್ಟೇ ರೂಢಿಯಾಗಿರುವ ನಮಗೆ, ನರೇಂದ್ರ ಮೋದಿಗೆ ಮಾತ್ರ ನೂರಕ್ಕಿಂತ ಕಡಿಮೆ ಅಂಕ ಕೊಡಬಾರದು ಎಂದು ಅನಿಸುತ್ತಲ್ಲಾ, ಇದು ಸೋಜಿಗಲ್ಲವೇ" ಇದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮೋದಿ ಬಗ್ಗೆ ಮಾತಾಡಿದ್ದ ಮಾತುಗಳು.
ಕಳೆದ ಹಲವು ವರ್ಷಗಳಿಂದ ಮೋದಿಯ ಆರಾಧಕರಂತೇ, ನಾಡಿನೆಲ್ಲಡೆ ಸುತ್ತಾಡಿ, ಮೋದಿ ಪರವಾಗಿ ಪ್ರಚಾರ ಮಾಡುತ್ತಿದ್ದ ಸೂಲಿಬೆಲೆ, ಈಗ ಭಾರೀ ಸುದ್ದಿಯಲ್ಲಿದ್ದಾರೆ. ಕಾರಣ, ಯಾರನ್ನು ರಾಜಕೀಯದಲ್ಲಿ ತಮ್ಮ ರೋಲ್ ಮಾಡೆಲ್ ಎಂದು ಹೇಳುತ್ತಿದ್ದರೋ, ಅಂತವರ ವಿರುದ್ದ ಸೂಲಿಬೆಲೆ ತಿರುಗಿ ಬಿದ್ದಿರುವುದು.
ಬರ ಪರಿಹಾರ: ಬಿಎಸ್ವೈ ಸಿಎಂ ಆಗಿದ್ದು ಮೋದಿ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?
" ಹತ್ತು ವರ್ಷಗಳ ಕಾಂಗ್ರೆಸ್ಸಿನ ದುರಾಡಳಿತವನ್ನು ಕಂಡು, ಬಾಯಿಗೆ ಫೆವಿಕಾಲ್ ಹಾಕಿದಂತೆ ಸುಮ್ಮನಿದ್ದ ಮನಮೋಹನ್ ಸಿಂಗ್ ಅವರನ್ನು ನೋಡಿ ಜನ ಬೇಸತ್ತಿದ್ದರು. ಆ ವೇಳೆಗೆ ಖಡಕ್ ಮಾತಿನ, ದೂರದೃಷ್ಟಿಯಿರುವ ಮೋದಿಯನ್ನು ಕಂಡು ಜನ ಹುಚ್ಚೆದ್ದು ಹೋಗಿದ್ದರು" ಎಂದು ಹೇಳಿದ್ದ ಸೂಲಿಬೆಲೆಗೆ ಈಗ ಏನಾಯಿತು?
25 ಇದ್ದದ್ದು 2, 105 ಇದ್ದದ್ದು 10 ಆಗುವ ಮುನ್ನ ಮೋದಿ ಎಚ್ಚೆತ್ತುಕೊಳ್ಳಲಿ
ಪ್ರವಾಹದಿಂದ ಹೈರಾಣವಾಗಿರುವ ಉತ್ತರ ಕರ್ನಾಟಕದ ಜನತೆಯ ಕಷ್ಟವನ್ನು ನೋಡಲಾರದೇ ಸೂಲಿಬೆಲೆ ಅವರ ಮನಸ್ಸು ಕರಗಿತೇ? ಅಥವಾ, ಮೋದಿ ಮತ್ತು ಬಿಜೆಪಿಯನ್ನು ಟೀಕಿಸುವುದರ ಹಿಂದೆ, ಇನ್ನೇನಾದರೂ ಅಡಗಿದೆಯೇ? ಸದ್ಯಕ್ಕಂತೂ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಸೂಲಿಬೆಲೆಯವರ ಅಂದಿನ ಮಾತಿಗೂ, ಇಂದಾಡುವ ಮಾತಿಗೂ, ಅವರ "ಡಬಲ್ standard' ಸ್ಪಷ್ಟವಾಗಿ ಕಾಣಿಸುತ್ತದೆ.
ನರೇಂದ್ರ ಮೋದಿಯ ಮುಖ ನೋಡಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದೆವು
" 19.12.2018ರಲ್ಲಿ 'ಮೋದಿ 303' ಎಂದು ಟಾರ್ಗೆಟ್ ಇಟ್ಟುಕೊಂಡು ಟೀಮ್ ಮೋದಿ ಕಾರ್ಯಕ್ರಮವನ್ನು ಆರಂಭಿಸಿದ್ದೆವು. ಪ್ರಚಾರಕ್ಕೆ ಹೋದಲೆಲ್ಲಾ ನರೇಂದ್ರ ಮೋದಿಯ ಮುಖ ನೋಡಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದೆವು. ದೇಶ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ, ಮೋದಿಗೆ ವೋಟ್ ಹಾಕಬೇಕು ಎಂದು ನಾವು ಪ್ರಚಾರ ಮಾಡಿದ್ದೆವು" ಎಂದು ಚಕ್ರವರ್ತಿ ಸೂಲಿಬೆಲೆ, ಲೋಕಸಭಾ ಚುನಾವಣಾ ಫಲಿತಾಂಶ ಬಂದ ನಂತರ ಹೇಳಿಕೆಯನ್ನು ನೀಡಿದ್ದರು.
ಬಲಪಂಥೀಯರಾಗಿ ಗುರುತಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ
ಬಲಪಂಥೀಯರಾಗಿ ಗುರುತಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ಮೊದಲ ಬಾರಿ ಮೋದಿ ವಿರುದ್ದ ಕಿಡಿಕಾರಿದ್ದರು. ಉತ್ತರ ಕರ್ನಾಟಕಕ್ಕೆ ಅಷ್ಟೊಂದು ಅನ್ಯಾಯ ಆಗುತ್ತಿರಬೇಕಾದರೆ, ಮೋದಿಯ ಮೌನದ ಬಗ್ಗೆ ಸೂಲಿಬೆಲೆ ಸಾರ್ವಜನಿಕವಾಗಿ ಟೀಕಿಸಿದ್ದರು. ಇದರ ಜೊತೆಗೆ, ಬಿಜೆಪಿಯ ಎಲ್ಲಾ ಸಂಸದರ ವಿರುದ್ದ ಸೂಲಿಬೆಲೆ ಹರಿಹಾಯ್ದಿದಿದ್ದರು.
ಮೋದಿಯವರು ಎಲ್ಲವನ್ನೂ ಮಾತೃ ಹೃದಯದಿಂದ ನೋಡುವವರು
"ತಮಿಳುನಾಡು, ಕೇರಳದ ಸಂಸದರಿಗೆ ಇರುವ ಧೈರ್ಯ ನಮ್ಮ ಸಂಸದರಿಗೆ ಇಲ್ಲ. ರಾಜೀನಾಮೆ ಪತ್ರವನ್ನು ಬಿಸಾಕಿಯಾದರೂ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಪ್ರಧಾನಿ ಮೋದಿಯವರು ಎಲ್ಲವನ್ನೂ ಮಾತೃ ಹೃದಯದಿಂದ ನೋಡುವವರು. ಪರಿಹಾರ ತರುವಲ್ಲಿ ನಮ್ಮ ಸಂಸದರು ಸೋತಿದ್ದಾರೆ" ಎಂದು ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಸಂಸದರ ವಿರುದ್ದ ಕಿಡಿಕಾರಿದ್ದರು. ಆದರೆ, ಲೋಕಸಭಾ ಚುನಾವಣಾ ಪ್ರಚಾರದ ವೇಳೆ, ಎಂದಾದರೂ, ಎಲ್ಲಾದರೂ ಬಿಜೆಪಿ ಅಭ್ಯರ್ಥಿ ಪರವಾಗಿ ಇವರು ಮತ ಕೇಳಿದ್ರಾ? ಹೇಳಿದ್ದೆಲ್ಲಾ ಮೋದಿ..ಮೋದಿ..
ಚುನಾವಣಾ ಪ್ರಚಾರದ ವೇಳೆ, ಅವರು ಆಡಿದ ಮಾತೇನು, ಈಗ ಸೂಲಿಬೆಲೆ ಹೇಳುತ್ತಿರುವ ಮಾತೇನು
" ಪ್ರಲ್ಹಾದ್ ಜೋಷಿ ಏನು ಕೆಲಸ ಮಾಡುತ್ತಿದ್ದಾರೆ. ಅನಂತ್ ಕುಮಾರ್ ಅವರ ಅನುಪಸ್ಥಿತಿ ರಾಜ್ಯಕ್ಕೆ ಕಾಡುತ್ತಿದೆ" ಎಂದೂ ಸೂಲಿಬೆಲೆ ಕಿಡಿಕಾರಿದ್ದಾರೆ. ಇವರ ಈ ಹೇಳಿಕೆಯಲ್ಲಿ ಗಮನಿಸಬಹುದಾದ ಅಂಶವೇನಂದರೆ, ಪರಿಹಾರದ ವಿಚಾರದಲ್ಲಿ ಮೋದಿಯನ್ನು ದೂರದೇ ಬಿಜೆಪಿ ಸಂಸದರನ್ನು ಸೂಲಿಬೆಲೆ ದೂರುತ್ತಿರುವುದು. ಹಾಗಾದರೆ, ಚುನಾವಣಾ ಪ್ರಚಾರದ ವೇಳೆ, ಅವರು ಆಡಿದ ಮಾತೇನು, ಈಗ ಸೂಲಿಬೆಲೆ ಹೇಳುತ್ತಿರುವ ಮಾತೇನು?
ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ಹೇಳುತ್ತಿದ್ದ ಸೂಲಿಬೆಲೆ
"ಮೋದಿ ಮುಖ ನೋಡಿ ವೋಟ್ ಹಾಕಿ" ಎಂದು ಹೇಳುತ್ತಿದ್ದ ಸೂಲಿಬೆಲೆ ಈಗ್ಯಾಕೆ ಬಿಜೆಪಿ ಸಂಸದರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೋದಿ ಮುಖ ನೋಡಿ ಎಂದ ಮೇಲೆ, ಬರಪರಿಹಾರ ಬರದೇ ಇರುವುದಕ್ಕೆ ಮೋದಿಯನ್ನೇ ಗುರಿಯಾಗಿಸದೇ, ಸಂಸದರನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಮೋದಿ..ಮೋದಿ ಎಂದು ಹೇಳುತ್ತಿದ್ದ ಸೂಲಿಬೆಲೆಗೆ ಎಲ್ಲಾ ಸಮಸ್ಯೆಗಳನ್ನು ಮೋದಿ ಬಂದು ಪರಿಹಾರಿಸಲು ಸಾಧ್ಯವಿಲ್ಲ ಎನ್ನುವುದರ ಅರಿವಿರಲ್ಲವೇ? ಅಂದು ಮೋದಿ ಮುಖ ನೋಡಿ ಎಂದ ಸೂಲಿಬೆಲೆ, ಈಗ ಸಂಸದರನ್ನೇಕೆ ಗುರಿಯಾಗಿಸಿದ್ದಾರೆ ಎನ್ನುವುದಕ್ಕೆ ಉತ್ತರ ಸಿಗಬೇಕಿದೆ.