ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹ ಪಟ್ಟ: ಟ್ವಿಟ್ಟಿಗರ ಅಭಿಪ್ರಾಯವೇನು?
ಬೆಂಗಳೂರು, ಅಕ್ಟೋಬರ್ 02: ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಅವಿರತ ಪ್ರಚಾರ ಮಾಡಿದ್ದ ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಅವರನ್ನು 'ದೇಶದ್ರೋಹಿ' ಎಂದು ಕೇಂದ್ರ ಬಿಜೆಪಿ ಸಚಿವ ಸದಾನಂದಗೌಡ ಪರೋಕ್ಷವಾಗಿ ಜರಿದಿದ್ದಾರೆ.
'ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ಎಡವಿದ್ದಾರೆ, ಮೋದಿ ನಾಮಬಲದಿಂದ ಗೆದ್ದ ಅವರಿಗೆ ಸ್ವಂತ ಶಕ್ತಿ ಇಲ್ಲ' ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ಇದು ಕೇಂದ್ರ ಸಚಿವ ಸದಾನಂದಗೌಡ ಅವರನ್ನು ಕೆರಳಿಸಿತ್ತು.
ಟ್ವಿಟ್ಟರ್ನಲ್ಲಿ ಪರಸ್ಪರ ಇಬ್ಬರೂ ವಾಗ್ಯುದ್ಧದಲ್ಲಿ ತೊಡಗಿದ್ದು, ಚಕ್ರವರ್ತಿ ಸೂಲಿಬೆಲೆ ಅವರನ್ನೇ ಗುರಿ ಮಾಡಿಕೊಂಡು ಸದಾನಂದಗೌಡ ಅವರು ಸರಣಿ ಟ್ವೀಟ್ ದಾಳಿ ನಡೆಸಿದ್ದಾರೆ.
ಸದಾನಂದಗೌಡ ಮತ್ತು ಚಕ್ರವರ್ತಿ ಸೂಲಿಬೆಲೆ ನಡುವಿನ ಚರ್ಚೆ ಮತ್ತು ಸೂಲಿಬೆಲೆ ಅವರು ಬಿಜೆಪಿ ಸಂಸದರ ಯೋಗ್ಯತೆ ಬಗ್ಗೆ ಆಡಿದ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿವೆ.
ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ: ಡಿವಿಎಸ್ ಪರೋಕ್ಷ ಆರೋಪ
ಮಾಮೂಲಿನಂತೆಯೇ ಕೆಲವರು ಸದಾನಂದಗೌಡ ಅವರ ಪರವಾಗಿ ಚರ್ಚೆಗೆ ನಿಂತಿದ್ದರೆ, ಮತ್ತೆ ಕೆಲವರು ಚಕ್ರವರ್ತಿ ಸೂಲಿಬೆಲೆ ಪರವಾಗಿ ವಕಾಲತ್ತು ವಹಿಸಿದ್ದಾರೆ. ಈ ಎರಡು ಗುಂಪನ್ನು ಹೊರತುಪಡಿಸಿದ ಗುಂಪೂ ಸಹ ಒಂದು ಇದೆ.
ಇವರಿಗೆ ಮತ ಹಾಕಿ ಎಂದು ಈಗ ತೆಗಳುತ್ತಿದ್ದೀರ ಏಕೆ?
ಚಕ್ರವರ್ತಿ ಸೂಲಿಬೆಲೆ ಅವರಿಗೆ ಹಲವರು ಪ್ರಶ್ನೆಗಳನ್ನು ಕೇಳಿದ್ದು, ಚುನಾವಣೆ ಸಮಯದಲ್ಲಿ 'ಮೋದಿ ಮುಖ ನೋಡಿ ಇದೇ ಅಭ್ಯರ್ಥಿಗಳಿಗೆ ಮತ ಹಾಕಿ ಎಂದಿದ್ದಿರಿ' ಈಗ ಅವರನ್ನೇ ಬೈಯುತ್ತಿದ್ದೀರಿ, ಅವರ ವೈಫಲ್ಯ ನಿಮ್ಮ ವೈಫಲ್ಯವೂ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ ಕೆಲವರು.
ಸಚಿವ ಸದಾನಂದಗೌಡ ಅವರು ಹೇಳಿದ್ದೇನು?
ಇದು ಕೇಂದ್ರ ಸಚಿವ ಸದಾನಂದಗೌಡ ಅವರನ್ನು ಕೆರಳಿಸಿದ್ದು, 'ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ, ಇಂತಹವರ ಮಾತುಗಳು ಮತ್ತು ಜನರ ಬಗ್ಗೆ ನೋವಿದೆ' ಎಂದು ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಸ್ತಾಪಿಸದೇ ಜಾಡಿಸಿದ್ದಾರೆ.
ಇಬ್ಬರನ್ನೂ ಜಾಡಿಸಿರುವ ಟ್ವಿಟ್ಟಗರು
ಚಕ್ರವರ್ತಿ ಸೂಲಿಬೆಲೆ ಮತ್ತು ಸದಾನಂದಗೌಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿರುವ ಕೆಲವು ನೆಟ್ಟಿಗರು. ಸಚಿವರಾಗಿ ಒಬ್ಬರಿಗೆ ಕೇಂದ್ರದಿಂದ ಅನುದಾನ ತರುವ ಶಕ್ತಿ ಇಲ್ಲ. ಅಯೋಗ್ಯರಿಗೆ ಮತ ಹಾಕಿ ಎಂದು ರಾಜ್ಯದ ಜನರು ಸಮಸ್ಯೆ ಅನುಭವಿಸುವಂತೆ ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ ಎಂದು ಸಹ ದೂರಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ ಸದಾನಂದಗೌಡ
ಸದಾನಂದಗೌಡ ಅವರು ಟ್ವಿಟ್ಟರ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ್ದಾರೆ. ಆ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಸೂಲಿಬೆಲೆ, 'ಥ್ಯಾಂಕ್ಸ್' ಎಂದು ಬರೆದುಕೊಂಡಿದ್ದಾರೆ.
ಮೋದಿಗೆ ಮತ ನೀಡಿ ಎಂದಿದ್ದ ಚಕ್ರವರ್ತಿ ಸೂಲಿಬೆಲೆ
ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ನಮೋ ಬ್ರಿಗೆಡ್ ಮೂಲಕ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. 'ಮೋದಿಗೆ ಮತ ನೀಡಿ, ಅವರು ಯಾವ ಸಂಸದರನ್ನು ಬೇಕಾದರೂ ಕೆಲಸ ಮಾಡುವಂತೆ ಮಾಡಬಲ್ಲರು' ಎಂದು ಹೇಳಿದ್ದರು. ಆದರೆ ಈಗ ಅವರೇ ನಮ್ಮ ರಾಜ್ಯದ ಬಿಜೆಪಿ ಸಂಸದರು ಅಯೋಗ್ಯರು ಎಂಬ ರೀತಿ ಮಾತನಾಡಿದ್ದಾರೆ. ಇದು ರಾಜ್ಯ ಬಿಜೆಪಿ ಸಂಸದರನ್ನು ಕೆರಳಿಸಿದೆ.