ಸರ್ಕಾರದ ವೆಬ್ ತಾಣದಿಂದ ತ್ರಿಭಾಷಾ ಸೂತ್ರದ ಕರಡು ಪ್ರತಿ ಮಾಯ!
ನವದೆಹಲಿ, ಜೂನ್ 03: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಹಿಂದಿ ಹೇರಿಕೆ, ತ್ರಿಭಾಷಾ ಶೈಕ್ಷಣಿಕ ನೀತಿ ವಿರುದ್ಧದ ಪ್ರತಿಭಟನೆ ಸೋಮವಾರವೂ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ನಡೆದ ಪ್ರತಿಭಟನೆಯ ಬಿಸಿ ತಟ್ಟಿದ್ದರಿಂದಲೋ ಏನೋ ಮಾನವ ಸಂಪನ್ಮೂಲ ಇಲಾಖೆಯ ಅಧಿಕೃತ ವೆಬ್ ತಾಣದಿಂದ ವಿವಾದಿತ ತ್ರಿಭಾಷಾ ನೀತಿ ಕರಡು ಪ್ರತಿ ಮಾಯವಾಗಿದೆ.
'ಭಾರತ ಸರ್ಕಾರದ ಮಾನವ ಸಂಪನ್ಮೂಲ ಮಂತ್ರಾಲಯದ ಈ ಕೊಂಡಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡು ಮಾಯವಾಗಿದೆ. ಇದು ನನಗೆ ಮಾತ್ರಾ ಆಗ್ತಾ ಇದೆಯೋ? ಸರ್ಕಾರಕ್ಕೆ ತಪ್ಪಿನ ಮನವರಿಕೆ ಆಗಿ ತೆಗೆಯಲಾಗಿದೆಯೋ? ಪ್ರತಿರೋಧ ತಪ್ಪಿಸಲು ಸಾರ್ವಜನಿಕರ ಕಣ್ಣಿಂದ ಮರೆಮಾಡುವ ಹುನ್ನಾರವೋ? ಗೊತ್ತಾಗುತ್ತಿಲ್ಲ.. ನಾಡಿನ ಜನರು ಒಕ್ಕೊರಲಿನಿಂದ ಸಮಾನತೆಯ ನ್ಯಾಯಕ್ಕಾಗಿ ಹಕ್ಕೊತ್ತಾಯವನ್ನು ಮಾಡೋಣ ಎಂದು ಕನ್ನಡ ಪರ ಹೋರಾಟಗಾರರಾದ ಆನಂದ್ ಗುರು ಹೇಳಿದ್ದಾರೆ.
ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ
ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡು ಪ್ರತಿ ಈಗ ಸರಕಾರದ ಮಿಂದಾಣದಲ್ಲಿ ಇಲ್ಲ. ಇದನ್ನು ತೆಗೆದಿರುವುದು ಗೆಲುವು ಎಂದು ಭಾವಿಸುವ ಮುಗ್ಧತೆ ನಮಗೆ ಬೇಡ. ತೆಗೆಯಲು ಕಾರಣ ಯಾವುದೋ ಒಂದು ಪ್ಯಾರಾ ತಪ್ಪಾಗಿ ನುಸುಳಿದೆ ಎನ್ನುವುದಂತೆ.
ಇರಲಿ, ನಮ್ಮ ಹಕ್ಕೊತ್ತಾಯ ಹಿಂದೀ ಕಡ್ಡಾಯದ ವಿರುದ್ಧವಾಗಿ ಇರಲಿ.. ಅಸಮಾನತೆ ಮತ್ತು ತಾರತಮ್ಯದ ತ್ರಿಭಾಷಾ ಸೂತ್ರದ ವಿರುದ್ಧವಾಗಿ ಇರಲಿ.. ಅಂತಿಮ ಗುರಿಯಾಗಿ ಸಂವಿಧಾನದ 341~351ರ ಬದಲಾವಣೆ ಆಗಿರಲಿ ಎಂದು ಆನಂದ್ ತಮ್ಮ ಫೇಸ್ ಬುಕ್ ಪುಟದಲ್ಲಿ ಆಗ್ರಹಿಸಿದ್ದಾರೆ.
ಹಿಂದಿ ಹೇರಿಕೆ ಸುಳ್ಳೇ ಸುಳ್ಳು: ತಮಿಳಿನಲ್ಲಿ ನಿರ್ಮಲಾ ಸೀತಾರಾಮನ್ ಟ್ವೀಟ್
ತ್ರಿಭಾಷಾ ಸೂತ್ರ: 1968ರ ನಿಲುವಳಿ
ಭಾರತದ ಸಂಸತ್ತು 1963ರಲ್ಲಿ ಮಾಡಿದ "ಅಫಿಶಿಯಲ್ ಲಾಂಗ್ವೇಜ್ ಆಕ್ಟ್ - 1963"ರಲ್ಲಿ ಹಿಂದೀ ಭಾಷೆಯನ್ನು ಒಕ್ಕೂಟದ ಏಕೈಕ ಆಡಳಿತ ಭಾಷೆ ಮಾಡಿದಾಗ ಕರ್ನಾಟಕ, ತಮಿಳುನಾಡು ಮತ್ತು ಬಂಗಾಳ ಸೇರಿದಂತೆ ಅನೇಕ ಹಿಂದೀಯೇತರ ಪ್ರದೇಶಗಳಲ್ಲಿ ಇದಕ್ಕೆ ವಿರೋಧ ತೀವ್ರ ಹೋರಾಟದ ರೂಪದಲ್ಲಿ ವ್ಯಕ್ತವಾಯಿತು. ತಮಿಳುನಾಡಿನಲ್ಲಂತೂ ಈ ಹೋರಾಟದಲ್ಲಿ ನೂರಾರು ಜನ ಸಾವಿಗೀಡಾದರು. ಭಾರತದಿಂದಲೇ ಸಿಡಿದು ಹೋಗುವ ದನಿ ಹೋರಾಟದಲ್ಲಿ ಕೇಳಿ ಬಂತು. ಆಗ ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂರವರು "ನೀವೆಲ್ಲಾ ಒಪ್ಪೋ ತನಕ ಭಾರತದ ಆಡಳಿತ ಭಾಷೆಯಾಗಿ ಇಂಗ್ಲೀಷನ್ನೂ ಮುಂದುವರೆಸುತ್ತೇವೆ" ಎಂಬ ಭರವಸೆ ಕೊಟ್ಟರು. ಇದು ಸಂಸತ್ತಿನಲ್ಲಿ ಮುಂದೆ ಪ್ರಾದೇಶಿಕ ಭಾಷೆಗಳನ್ನು ಕೇಂದ್ರಸರ್ಕಾರಿ ನೌಕರಿಯ ನೇಮಕಾತಿ ಪರೀಕ್ಷೆಗಳಲ್ಲಿ ಬಳಸುವ ಅವಕಾಶ ನೀಡುವ, ಪ್ರಾದೇಶಿಕ ಭಾಷೆಗಳನ್ನೂ ಉಳಿಸಿಕೊಳ್ಳುವ ಉದ್ದೇಶದ "ತ್ರಿಭಾಷಾ ಸೂತ್ರ"ದ ರಚನೆಗೆ ಕಾರಣವಾಯಿತು. ಅಂದರೆ ಮೂಲತಃ ತ್ರಿಭಾಷಾಸೂತ್ರವನ್ನು ಬಿಂಬಿಸಿದ್ದು "ಪ್ರಾದೇಶಿಕ ಭಾಷೆಗಳಿಗೆ ಕೇಂದ್ರದ ಆಡಳಿತದಲ್ಲಿ ಅಧಿಕೃತತೆಯನ್ನು ತಂದುಕೊಡುವ ಪ್ರಯತ್ನ" ಎಂಬುದಾಗಿ.
ತ್ರಿಭಾಷಾಸೂತ್ರಕ್ಕೆ ತಿಲಾಂಜಲಿ ಇಡಲಿ ರಾಜ್ಯಸರ್ಕಾರ!
ನಮ್ಮ ಮಕ್ಕಳ ಕಲಿಕೆಯಲ್ಲಿ ಕಡ್ಡಾಯ ಮಾಡಿರುವ, ನಮ್ಮೂರ ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಕನ್ನಡವನ್ನು ಮೂರನೇ ಸ್ಥಾನಕ್ಕೆ ದೂಕಿರುವ, ಕನ್ನಡ ಮಾತ್ರಾ ಬಲ್ಲವರೆಲ್ಲಾ ಇಲ್ಲೆಲ್ಲಾ ಹೋಗುವಾಗ ಜೊತೇಲಿ ದುರ್ಬೀನು ಹಿಡ್ಕೊಂಡೇ ಹೋಗಬೇಕಾದ ಸ್ಥಿತಿಗೆ ಕಾರಣವಾಗಿರುವ - ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿರದ - ತ್ರಿಭಾಷಾ ಸೂತ್ರಕ್ಕೆ ರಾಜ್ಯಸರ್ಕಾರ ಕೊನೆ ಹಾಡಲಿ.(ಏನ್ಗುರು ಬ್ಲಾಗ್ ಕೃಪೆ)