ಕೇಂದ್ರ ಕಾನೂನುಬದ್ಧಗೊಳಿಸದರೆ ಮಾತ್ರ ಕಾರು ಪೂಲಿಂಗ್ಗೆ ಅವಕಾಶ ಎಂದ ರಾಜ್ಯ
ಬೆಂಗಳೂರು, ಜುಲೈ 3: ಕಾರ್ ಪೂಲಿಂಗ್ನ್ನು ಕೇಂದ್ರ ಕಾನೂನು ಬದ್ಧಗೊಳಿಸಿದರೆ ಮಾತ್ರ ಕಾರ್ ಪೂಲಿಂಗ್ಗೆ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಕರ್ನಾಟಕ ಸರ್ಕಾರವು ಕಾರು ಪೂಲಿಂಗ್ ನಿಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಕಾರು ಪೂಲಿಂಗ್ ಮಾಡುವುದರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎನ್ನುವುದು ಕೇಂದ್ರದ ವಾದವಾಗಿದೆ. ಹಾಗಾಗಿ ಕಾರ್ ಪೂಲಿಂಗ್ನ್ನು ಕಾನೂನುಬದ್ಧಗೊಳಿಸಿದರೆ ಮಾತ್ರ ಕರ್ನಾಟಕದಲ್ಲೂ ಕಾರು ಪೂಲಿಂಗ್ಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಓಲಾ ಶೇರ್, ಊಬರ್ ಪೂಲಿಂಗ್ ರದ್ದು
ಸಾರಿಗೆ ಇಲಾಖೆಯು ಒಂದು ವಾರಗಳ ಹಿಂದೆ 2016ರ ಟೆಕ್ನಾಲಜಿ ಅಗ್ರಿಗೇಟರ್ಸ್ ಕಾಯ್ದೆ ಪ್ರಕಾರ ಓಲಾ, ಊಬರ್ನಲ್ಲಿ ಕಾರು ಪೂಲಿಂಗ್ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು.ಆದರೆ ಕಾರು ಪೂಲಿಂಗ್ ನಿಲ್ಲಿಸುವುದರಿಂದ ತಮಗೆ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಚಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
2018ರ ನೀತಿ ಆಯೋಗದ ವರದಿ ಪ್ರಕಾರ ರೈಡ್ ಶೇರಿಂಗ್ ಇಂದ ಹಣವೂ ಉಳಿತಾಯವಾಗುತ್ತದೆ, ಶ್ರಮವೂ ಕಡಿಮೆಯಾಗುತ್ತದೆ. ಹೆಚ್ಚಿನ ಕಿಲೋಮೀಟರ್ ಓಡಾಟವೂ ಉಳಿಯುತ್ತದೆ, ವಾಯು ಮಾಲಿನ್ಯವೂ ಕೂಡ ಕಡಿಮೆಯಾಗುತ್ತದೆ ಎಂದು ಹೇಳಿತ್ತು.
ಅದಕ್ಕೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರತಿಕ್ರಿಯಿಸಿ ಒಂದೊಮ್ಮೆ ಕೇಂದ್ರ ಸರ್ಕಾರವು ಕಾರ್ ಪೂಲಿಂಗ್ನ್ನು ಪ್ರೋತ್ಸಾಹಿಸುವುದಾದರೆ ಕೇಂದ್ರ ಮೋಟಾರ್ ವಾಹನ ಕಾಯ್ದೆ ಪ್ರಕಾರ ಕಾನೂನು ಬದ್ಧವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅದರಲ್ಲೂ ಓಲಾ, ಊಬರ್ ನಂತಹ ಅಪ್ಲಿಕೇಷನ್ ಆಧಾರಿತ ಕಾರುಗಳಿಗೆ ಅನುಮತಿ ಇರುವುದಿಲ್ಲ.
ಕಾಂಟ್ರಾಕ್ಟ್ ಅಗ್ರಿಗೇಟರ್ಗಳು ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡರೆ ಅಂತಹ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಲಾಗುತ್ತದೆ.
ಕಾರು ಪೂಲಿಂಗ್ನ್ನು ಪ್ರೋತ್ಸಾಹಿಸಿದರೆ ಅದರಿಂದ ನಿರುದ್ಯೋಗ ಸಮಸ್ಯೆ ಎದುರಾಗುತ್ತದೆ ಎನ್ನುವ ಮಾತುಗಳೂ ಇವೆ. ಕೇಂದ್ರ ಸರ್ಕಾರವು ಓಲಾ, ಊಬರ್ ಪೂಲಿಂಗ್ ಅನ್ನು ಮಾತ್ರ ಏಕೆ ಪ್ರೋತ್ಸಾಹಿಸುತ್ತಿದೆ ಅದರ ಜೊತೆಗೆ ಆಟೋರಿಕ್ಷಾ, ಟೆಂಪೋ ಟ್ರಾವೆಲ್ಸ್ನ್ನು ಕೂಡ ಪ್ರೋತ್ಸಾಹಿಸಬಹುದಲ್ಲ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.