3 ತಂಡದಿಂದ ಬರ ಅಧ್ಯಯನ, 15 ಜಿಲ್ಲೆಗಳಲ್ಲಿ ಪ್ರವಾಸ
ಬೆಂಗಳೂರು, ನವೆಂಬರ್ 02: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೇಂದ್ರ ಅಧ್ಯಯನ ತಂಡ ಬುಧವಾರ(ನವೆಂಬರ್ 2) ದಿಂದ ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಕೇಂದ್ರದ ಅಧಿಕಾರಿಗಳು ಮೂರು ತಂಡಗಳಲ್ಲಿ ಬರ ಅಧ್ಯಯನಕ್ಕೆ ತೆರಳಲಿದ್ದಾರೆ.
ಮೊದಲ ತಂಡ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದೆ. ಎರಡನೇ ತಂಡ ರಾಮನಗರ, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಲಿದೆ. ಮೂರನೇ ತಂಡ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಲಿದೆ. ಬರಗಾಲದಿಂದ ಆಗಿರುವ ಹಾನಿ ಕುರಿತು ಈ ತಂಡ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.[ಕರ್ನಾಟಕದಲ್ಲಿ ಬರ, ಕೇಂದ್ರದಿಂದ 3,760 ಕೋಟಿ ರುಗೆ ಮನವಿ]
ಕರ್ನಾಟಕ ಸರ್ಕಾರ ಈಗಾಗಲೆ 110 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅನಾವೃಷ್ಟಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾದ ಬೆಳೆ ಮತ್ತು ಆಸ್ತಿ - ಪಾಸ್ತಿಯ ಒಟ್ಟಾರೆ ನಷ್ಟದ ಪ್ರಮಾಣ 14,630.85 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 3,760.29 ಕೋಟಿ ರೂ ಪರಿಹಾರವನ್ನು ಕೋರಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಬರ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ನಷ್ಟದ ವರದಿಯನ್ನು ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಸಲ್ಲಿಸಿದ್ದರು.(ಒನ್ಇಂಡಿಯಾ ಸುದ್ದಿ)