ಭೀಕರ ಪ್ರವಾಹ : 4 ದಿನ ರಾಜ್ಯದಲ್ಲಿ ಕೇಂದ್ರ ತಂಡದ ಪ್ರವಾಸ
ಬೆಂಗಳೂರು, ಆಗಸ್ಟ್ 25 : ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಆದ ನಷ್ಟದ ಕುರಿತು ಪರಿಶೀಲನೆ ನಡೆಸಲು ಕೇಂದ್ರ ತಂಡ ಆಗಮಿಸಿದೆ. ಭೀಕರ ಪ್ರವಾಹದಿಂದಾಗಿ 30 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಶನಿವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆ ಕೇಂದ್ರ ತಂಡದ ಅಧಿಕಾರಿಗಳು ಸಭೆ ನಡೆಸಿದರು. ರಾಜ್ಯದ 22 ಜಿಲ್ಲೆಗಳ, 103 ತಾಲೂಕುಗಳಲ್ಲಿ ಪ್ರವಾಹದಿಂದಾಗಿ ಅಪಾರವಾದ ನಷ್ಟ ಉಂಟಾಗಿದೆ.
Recommended Video
ಕರ್ನಾಟಕ ಪ್ರವಾಹ : ನಷ್ಟದ ಲೆಕ್ಕ ಕೊಟ್ಟ ಸರ್ಕಾರ
ಆಗಸ್ಟ್ 25, 26, 27 ಮತ್ತು 28ರಂದು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಭಾನುವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿರುವ ತಂಡ, ಅಲ್ಲಿಂದ ಬೆಳಗಾವಿಗೆ ಭೇಟಿ ನೀಡಲಿದೆ. ಅಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದೆ.
ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದರು. ಈಗ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸಿಕೊಟ್ಟಿದ್ದು, ನಾಲ್ಕು ದಿನಗಳ ಕಾಲ ತಂಡ ರಾಜ್ಯದಲ್ಲಿ ಪ್ರವಾಸ ಮಾಡಲಿದೆ.
ಮಹಾಪ್ರವಾಹ : ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಹಣ ಬಿಡುಗಡೆ
ಕೇಂದ್ರ ತಂಡದ ಪ್ರವಾಸ
* ಆಗಸ್ಟ್ 25 : ಬೆಳಗಾವಿ ಜಿಲ್ಲೆ ಪ್ರವಾಸ (ಬಾಗಲಕೋಟೆಯಲ್ಲಿ ವಾಸ್ತವ್ಯ)
* ಆಗಸ್ಟ್ 26 : ಬಾಗಲಕೋಟೆ, ಗದಗ, ಧಾರವಾಡ ಜಿಲ್ಲಾ ಪ್ರವಾಸ ( ಬೆಂಗಳೂರಲ್ಲಿ ವಾಸ್ತವ್ಯ)
* ಆಗಸ್ಟ್ 27 : ಮಡಿಕೇರಿ ಪ್ರವಾಸ, ಮುಖ್ಯಮಂತ್ರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ
* ಆಗಸ್ಟ್ 28 : ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣ
ಕೇಂದ್ರ ತಂಡ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಇದರಿಂದಾಗಿ ಸರ್ಕಾರ ಕೇಂದ್ರದ ಅಧಿಕಾರಿಗಳಿಗೆ ಯಾವ ರೀತಿಯ ಮಾಹಿತಿ ನೀಡಿದೆ? ಎಂಬ ಪ್ರಶ್ನೆ ಎದುರಾಗಿದೆ.