ಕೇಂದ್ರ ತಂಡದಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಬರ ಸಮೀಕ್ಷೆ
ಕಲಬುರಗಿ, ಫೆಬ್ರವರಿ, 25: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ ವಿವಿಧ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ. 10 ಜನ ಅಧಿಕಾರಿಗಳ ತಂಡ ಬರ ಪರಿಸ್ಥಿತಿ ಅವಲೋಕನ ಮಾಡುತ್ತಿದೆ.
ಬುಧವಾರ ಕಲಬುರಗಿ, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ, ಗದಗ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ರೈತರೊಂದಿಗೆ ಮಾತುಕತೆ ನಡೆಸಿತು. ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಕೆಕೆ ಮಿಶ್ರಾ, ಕೇಂದ್ರ ಕುಡಿಯುವ ನೀರು ಯೋಜನಾ ವಿಭಾಗದ ಸಂಯೋಜಕ ಡಾ.ಬ್ರಿಜೇಶ್ ಶ್ರೀವತ್ಸವ, ಹಣಕಾಸು ಮತ್ತು ವಿತ್ತ ಸಿಚಿವಾಲಯದ ಎಂಬಿ ಕಾಲ್, ಗ್ರಾಮೀಣಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ರಾಮಕೃಷ್ಣ ಅವರನ್ನು ಒಳಗೊಂಡಿರುವ ತಂಡ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಲಿದೆ.
ಹುಬ್ಬಳ್ಳಿ-ಧಾರವಾಡಗಳಲ್ಲಿ ಕೇಂದ್ರ ಆಹಾರ ನಿಗಮದ ಡಿಜಿಎಂ ವಿಜಯಕುಮಾರ, ಜಲ ಸಂಪನ್ಮೂಲ ಇಲಾಖೆ ಹಿರಿಯ ಜಂಟಿ ಆಯುಕ್ತ ನರೇಶ ಕುಮಾರ, ನೀತಿ ಆಯೋಗದ ಸಂಶೋಧನಾಧಿಕಾರಿ ಗಣೇಶರಾಮ್ ಸಮೀಕ್ಷೆ ನಡೆಸಿದರು.
ರಾಜ್ಯ ಸರ್ಕಾರ ಮನವಿ ಮಾಡಿತ್ತು
ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು ಉತ್ತರ ಕರ್ನಾಟಕದ ಭಾಗಗಳೂ ತೀವ್ರ ಬರ ಎದುರಿಸುತ್ತಿವೆ. ಈ ಬಗ್ಗೆ ಪರಿಹಾರ ನೀಡಬೆಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ 10 ಜನರ ತಂಡ ರಾಜ್ಯಕ್ಕೆ ಆಗಮಿಸಿದೆ.
ಒಟ್ಟು ಮೂರು ತಂಡಗಳು
10 ಜನ ಅಧಿಕಾರಿಗಳು ಮೂರು ತಂಡಗಳಾಗಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕಲಿದೆ. ಕೇಂದ್ರ ಸರ್ಕಾರದ ಪ್ರಮುಖ ಇಲಾಖೆ ಕಾರ್ಯದರ್ಶಿಗಳು ತಂಡವನ್ನು ಮುನ್ನಡೆಸಲಿದ್ದಾರೆ.
12 ಜಿಲ್ಲೆಗಳಲ್ಲಿ ಪ್ರವಾಸ
ರಾಜ್ಯದ 12 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯ ಮತ್ತು ಬರ ಕಾಮಗಾರಿಗಳ ಅವಲೋಕನ ಮಾಡಿದ ನಂತರ ಒಟ್ಟಾಗಿ ಬೆಂಗಳೂರಿನಲ್ಲಿ ಫೆಬ್ರವರಿ 26ರಂದು ರಾಜ್ಯದ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ದೆಹಲಿಗೆ ತೆರಳಿದ ನಂತರ ಸಮಿತಿ ವರದಿ ಸಲ್ಲಿಕೆ ಮಾಡಲಿದೆ.
ಕಲಬುರಗಿಯಲ್ಲಿ ಪ್ರವಾಸ
ಕಲಬುರಗಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ., ಜಂಟಿ ಕೃಷಿ ನಿರ್ದೇಶಕ ಜಿಲಾನಿ ಎಚ್.ಮೊಕಾಶಿ, ಉಪ ನಿರ್ದೇಶಕ ಸಮದ್ ಪಟೇಲ್, ತಹಶೀಲ್ದಾರ್ ಪರಮೇಶ್ವರ ಸ್ವಾಮಿ ಮತ್ತಿತರ ಇಲಾಖೆಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಾಹಿತಿ ನೀಡಿದರು.