ಕರ್ನಾಟಕದ ಗಾಯದ ಮೇಲೆ 9000 ಕೋಟಿ ಬರೆ ಎಳೆದ ಕೇಂದ್ರ ಬಜೆಟ್
ಬೆಂಗಳೂರು, ಫೆಬ್ರವರಿ 04: ಈಗಾಗಲೇ ಹಣಕಾಸು ಕೊರತೆಯಿಂದ ಬಳಲುತ್ತಿರುವ ಕರ್ನಾಟಕಕ್ಕೆ ಕೇಂದ್ರ ಬಜೆಟ್ 9000 ಕೋಟಿ ಬರೆ ಎಳೆದಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬಜೆಟ್ ಮಂಡಿಸಿದ್ದು, ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ಕರ್ನಾಟಕಕ್ಕೆ ಮಾತ್ರ ಭಾರಿ ನಷ್ಟವನ್ನೇ ಉಂಟು ಮಾಡುತ್ತಿದೆ.
ಯುವ ಸಮೂಹದ ನಿರೀಕ್ಷೆ ಹುಸಿ ಮಾಡಿದ ಬಜೆಟ್: ಸಿದ್ದರಾಮಯ್ಯ
ರಾಜ್ಯದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ 9000 ಕೋಟಿ ರೂಪಾಯಿ ಖೋತಾ ಆಗುತ್ತಿದೆ. ಈ ಹಣದ ಕೊರತೆಯು ಕರ್ನಾಟಕವು ಮುಂದಿನ ತಿಂಗಳು ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಭಾರಿ ಪರಿಣಾಮ ಬೀರಲಿದೆ.
ನಿಖರವಾಗಿ ತೆರಿಗೆ ಪಾಲಿಗೆ ಕತ್ತರಿ ಹಾಕಲಿದೆ ಎಂಬ ಸ್ಪಷ್ಟನೆ ರಾಜ್ಯದ ಅಧಿಕಾರಿಗಳಿಗೆ ಇಲ್ಲ ಆದರೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಹೇಳುವ ಪ್ರಕಾರ 9000 ಕೋಟಿ ಹಣಕ್ಕೆ ಕತ್ತರಿ ಬೀಳಲಿದೆ. ಇದು 11,000 ಕೋಟಿ ಆದರೂ ಆಶ್ಚರ್ಯಪಡಬೇಕಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ರಾಜ್ಯಗಳು ಸಂಗ್ರಹಿಸಿ ಕೊಡುವ ತೆರಿಗೆ ಹಣದಲ್ಲಿ ಕೇಂದ್ರವು ರಾಜ್ಯಗಳಿಗೆ ಪಾಲು ನೀಡುತ್ತದೆ. 15 ನೇ ಹಣಕಾಸು ಆಯೋಗ ನಿಯಮಗಳ ಪ್ರಕಾರ 41% ಶೇಕಡಾ ತೆರಿಗೆ ಸಂಗ್ರಹ ಮೊತ್ತವನ್ನು ಕೇಂದ್ರವು ರಾಜ್ಯಗಳಿಗೆ ಹಂಚಿಕೆ ಮಾಡಬೇಕಿದೆ.
ಬಜೆಟ್: ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಹೇಳಿದ್ದೇನು?
ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ಈ ಬಾರಿ ಕೇಂದ್ರದಿಂದ ದೊಡ್ಡ ಮಟ್ಟದಲ್ಲಿಯೇ ಅನ್ಯಾಯವಾಗುತ್ತಿದೆ. ಹೆಚ್ಚು ತೆರಿಗೆ ಸಂಗ್ರಹಿಸಿ ಕೊಟ್ಟರೂ ಸಹ ಕಡಿಮೆ ಪಾಲನ್ನೇ ಕರ್ನಾಟಕಕ್ಕೆ ಸೇರಿ ಇತರ ದಕ್ಷಿಣ ಭಾರತ ರಾಜ್ಯಗಳಿಗೆ ನೀಡಲಾಗುತ್ತಿತ್ತು. ಈ ಬಾರಿ ಅದು ಇನ್ನಷ್ಟು ಹೆಚ್ಚಾಗಿದೆ.
15 ನೇ ಹಣಕಾಸು ನೀತಿಯ ಪೂರ್ಣ ಮಾಹಿತಿ ಇನ್ನೂ ಬಿಡುಗಡೆ ಆಗಿಲ್ಲ ಹಾಗಾಗಿ ಅದರಲ್ಲಿನ ನಿಯಮಗಳನ್ನು ತಿಳಿದುಕೊಂಡ ನಂತರವೇ ಪೂರ್ಣ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.