ಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರ
ಪಣಜಿ, ಡಿಸೆಂಬರ್ 25: ಕಳಸಾ-ಬಂಡೂರಿ ಕುಡಿಯುವ ಯೋಜನೆಗೆ ನೀಡಿದ್ದ ಅನುಮತಿಗೆ ತಡೆ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, 'ಅರಣ್ಯ ಇಲಾಖೆಯ ಅಗತ್ಯ ಒಪ್ಪಿಗೆ ಪಡೆದು, ನ್ಯಾಯಮಂಡಳಿ ಗೆಜೆಟ್ ಹೊರಡಿಸಿದ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಬಹುದು' ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕಳಸಾ-ಬಂಡೂರಿ ಯೋಜನೆಗೆ ತಡೆ ನೀಡಿದೆ ಎಂಬ ಮಾಹಿತಿ ರಾಜ್ಯದಲ್ಲಿ ಹರಿದಾಡಿತ್ತು, ಇದು ಜನರಲ್ಲಿ ಆತಂಕ ಉಂಟುಮಾಡಿತ್ತು, ವಿಪಕ್ಷಗಳೂ ಇದನ್ನು ಖಂಡಿಸಿದ್ದವು.
ಕೂಡಲೇ ಸಿಎಂ ಯಡಿಯೂರಪ್ಪ ಅವರು ಜಾವಡೇಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಬಸವರಾಜ ಬೊಮ್ಮಾಯಿ ಸಹ ದೆಹಲಿಗೆ ತೆರಳಿ ಜಾವಡೇಕರ್ ಅವರನ್ನು ಭೇಟಿ ಆಗಿ ಬಂದಿದ್ದರು. ಅದರ ಫಲವೇ ಈಗ ಜಾವಡೇಕರ್ ಅವರು ರಾಜ್ಯಕ್ಕೆ ಪತ್ರ ಬರೆದಿದ್ದಾರೆ.
'ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆಯಿಂದ ಇಸಿ ಪಡೆಯುವ ಅಗತ್ಯ ಇಲ್ಲ, 2006 ರ ನಿಯಮದಂತೆ ಕೇಂದ್ರವು ಕಳಸಾ-ಬಂಡೂರಿ ಯೋಜನೆಗೆ ಅನುಮತಿ ರದ್ದು ಮಾಡಿದೆ ಎಂಬುದು ಸುಳ್ಳು' ಎಂದು ಜಾವಡೇಕರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.