ಮಳೆ ಹಾನಿ ಪರಿಶೀಲನೆಗೆ ಕೇಂದ್ರದ 6 ಸದಸ್ಯರ ತಂಡ ಭೇಟಿ
ಬೆಂಗಳೂರು, ಸೆಪ್ಟೆಂಬರ್ 10: ರಾಜ್ಯದಲ್ಲಿ ವಿಪರೀತ ಮಳೆಯಿಂದ ತತ್ತರಿಸಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಹಾಸನ ಜಿಲ್ಲೆಗಳಿಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ತಂಡವು ಸೆ.12 ಮತ್ತು 13ರಂದು ಭೇಟಿ ನೀಡಲಿದೆ.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ 6 ಸದಸ್ಯರ ತಂಡವು ನಾಳೆ (ಮಂಗಳವಾರ) ಬೆಂಗಳೂರಿಗೆ ಆಗಮಿಸುತ್ತಿದೆ.
ಕರ್ನಾಟಕದ ಅತಿವೃಷ್ಟಿ, ಬರ ಪರಿಸ್ಥಿತಿಗೆ ನೆರವು: ಮೋದಿ ಭರವಸೆ
ಈ ತಂಡದ ಮೂವರು ಸದಸ್ಯರು ಕೊಡಗಿಗೆ ಭೇಟಿ ನೀಡಲಿದ್ದರೆ, ಉಳಿದ ಮೂವರು ಸದಸ್ಯರು ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಿಗೆ ತೆರಳಲಿದ್ದಾರೆ. ಈ ಸದಸ್ಯರು ಎಲ್ಲ ಜಿಲ್ಲೆಗಳಲ್ಲೂ ನೆರೆಪೀಡಿತ ಪ್ರದೇಶಗಳಿಗೆ ತೆರಳಿ, ಆಗಿರುವ ಹಾನಿಯನ್ನು ಅವಲೋಕಿಸಲಿದ್ದಾರೆ.
ಬಳಿಕ, ಸೆಪ್ಟೆಂಬರ್ 14ರಂದು ಕೇಂದ್ರ ತಂಡವು ರಾಜ್ಯ ಸರಕಾರದ ಸಚಿವರುಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ನೆರೆ ಹಾನಿ ಕುರಿತು ವಿಚಾರ ವಿನಿಮಯ ನಡೆಸಲಿದೆ. ಬಳಿಕ ಈ ತಂಡವು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ.
ಮಳೆಯಿಂದ ರಾಜ್ಯಕ್ಕೆ ಆಗಿರುವ ನಷ್ಟ ಎಷ್ಟು? ಕೇಂದ್ರದಿಂದ ಕೇಳಿರುವ ನೆರವೆಷ್ಟು?
ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು (ಸೋಮವಾರ) ದೆಹಲಿಗೆ ತೆರಳಿದ್ದ ನಿಯೋಗವು ಪ್ರಧಾನಿ ಮೋದಿಯ ಅರಿಗೆ ಮನವಿ ಸಲ್ಲಿಸಿ, ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತನ್ನ ಈ ತಂಡವನ್ನು ಕಳಿಸುತ್ತಿದೆ.