ಇವಿಎಂ ನಿರ್ವಹಣೆಯಲ್ಲಿ ರಾಜ್ಯದ ವಿಶೇಷತೆ ಏನೂ ಗೊತ್ತಾ?
ಬೆಂಗಳೂರು, ಜ. 24: ವಿದ್ಯುನ್ಮಾನ ಮತ ಯಂತ್ರ(EVM)ಗಳ ವಿಚಾರ ಆಗಾಗ ಚರ್ಚಗೆ ಬರುತ್ತಲೇ ಇರುತ್ತದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇವಿಎಂ ವಿಚಾರವಾಗಿ ಆಗಾಗ ಬಿಜೆಪಿ ಮೇಲೆ ಆರೋಪ ಮಾಡುತ್ತಲೇ ಇರುತ್ತವೆ. ಇವಿಎಂಗಳನ್ನು ಹ್ಯಾಕ್ ಮಾಡಲಾಗುತ್ತದೆ ಎಂಬುದನ್ನು ತೋರಿಸುವಂತೆ ಕೇಂದ್ರ ಚುನಾವಣಾ ಆಯೋಗ ಕೂಡ ರಾಜಕೀಯ ಪಕ್ಷಗಳು, ಸಂಘಟನೆಗಳಿಗೆ ಮುಕ್ತ ಅವಕಾಶವನ್ನೂ ಕೊಟ್ಟಿದೆ. ಆದರೆ ಆರೋಪ ಸಾಬೀತು ಪಡಿಸಲು ಮಾತ್ರ ರಾಜಕೀಯ ಪಕ್ಷಗಳು ಮುಂದಾಗಿಲ್ಲ.
ಕರ್ನಾಟಕ ರಾಜ್ಯ 'ಇವಿಎಂ'ಗಳ ನಿರ್ವಹಣೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಗುರುತಿಸಿದೆ. ಇವಿಎಂ ನಿರ್ವಹಣೆಗಾಗಿ ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಅವರಿಗೆ ವಿಶೇಷ ಪ್ರಶಸ್ತಿ ಪ್ರಕಟ ಮಾಡಿದೆ.
ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳಿಗೆ ಆಯೋಗ ಆಘಾತ
ಪ್ರತಿ ವರ್ಷವು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಭಾರತ ಚುನಾವಣಾ ಆಯೋಗವು ಚುನಾವಣಾ ಮತ್ತು ಮತದಾರರ ಪಟ್ಟಿ ನಿರ್ವಹಣೆ ಮತ್ತು ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಹಾಗೂ ಸಂಸ್ಥೆಗಳಿಗೆ ರಾಷ್ಟ್ರೀಯ ಅತ್ಯುತ್ತಮ ಚುನಾವಣಾ ಕಾರ್ಯಗಳ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ.
ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ 2020 ರ ಜನವರಿ 25 ರಂದು ದೆಹಲಿಯ ಕಂಟೋನ್ಮೆಂಟ್ನಲ್ಲಿರುವ ಝೋರಾವರ್ ಸಭಾಂಗಣದ ಮಾಣಿಕ್ಷಾ ಕೇಂದ್ರದಲ್ಲಿ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.