ಕೊನೆಗೂ ಯತ್ನಾಳ್ ಮೇಲೆ ಕ್ರಮಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್!
ಬೆಂಗಳೂರು, ಜ. 23: ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಶಾಸಕರ ವಾಗ್ದಾಳಿ ಶುರುವಾಗಿದ್ದವು. ಖಾತೆ ಹಂಚಿಕೆ ಬಳಿಕ ಸಚಿವರುಗಳೂ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಳಿಕ ಬಹಳಷ್ಟು ವಿರೋಧವನ್ನು ಮುಖ್ಯಮಂತ್ರಿಗಳು ಎದುರಿಸುತ್ತಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಸಿಎಂ ಯಡಿಯೂರಪ್ಪ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿಯಿಂದಲೇ ಕೇಳಿ ಬರುತ್ತಿವೆ. ಯತ್ನಾಳ್ ಅವರ ಹೇಳಿಕೆಗಳಿಂದ ಯಡಿಯೂರಪ್ಪ ಅವರು ಸಾಕಷ್ಟು ಮುಜುಗುರವನ್ನು ಅನುಭವಿಸುತ್ತಿರುವುದು ಇದೀಗ ಹೈಕಮಾಂಡ್ ಗಮನಕ್ಕೂ ಬಂದಿದೆ.
ಇಷ್ಟೆಲ್ಲ ಆಗುತ್ತಿದ್ದರೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಗಳನ್ನು ಸಿಎಂ ಯಡಿಯೈರಪ್ಪ ಅವರ ಆಪ್ತರು ಮಾಡುತ್ತಿದ್ದಾರೆ. ಇದೀಗ ಬಿಜೆಪಿ ವರಿಷ್ಠರು ಕೊನೆಗೂ ಯತ್ನಾಳ್ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಎಂಬುದನ್ನು ಕಟೀಲ್ ಅವರೆ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಖಾತೆ ಖ್ಯಾತೆ ಕುರಿತು ಪ್ರತಿಕ್ರಿಯೆ
ಬೆಂಗಳೂರಿನ ಮಲ್ಲೆಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯ ಮಾಧ್ಯಮ ಮಂಥನ ಕಾರ್ಯಕ್ರಮ ನಡೆಯಿತು. ಅದರಲ್ಲಿ ಭಾಗವಹಿಸಿದ ಬಳಿಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಮಹತ್ವದ ಮಾತನ್ನಾಡಿದ್ದಾರೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ನಂತರ ನಡೆದ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ.
ಅದು ಅವರ ಪರಮಾಧಿಕಾರ
ಖಾತೆ ಹಂಚಿಕೆ, ಮರು ಹಂಚಿಕೆ ವಿಚಾರವಾಗಿ ಸಚಿವರುಗಳು ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ ಎಂದು ಕಟೀಲ್ ಹೇಳಿದ್ದಾರೆ. ಆದರೆ ಅದರಿಂದ ಪಕ್ಷಕ್ಕೆ ಮುಜುಗರ ಹಾನಿಯಾಗುವಂತಾದರೆ ಅವರನ್ನು ಕರೆಸಿ ಮಾತನಾಡುತ್ತೇನೆ. ಖಾತೆಗಳ ಹಂಚಿಕೆ ಪುನರ್ ಹಂಚಿಕೆ ಸಿಎಂ ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಯತ್ನಾಳ್ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಮುಜುಗುರವನ್ನುಂಟು ಮಾಡುವ ಹೇಳಿಕೆ
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗುರವನ್ನುಂಟು ಮಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನು, ಅವರು ಮುಜುಗರ ಉಂಟು ಮಾಡುತ್ತಿರುವುದನ್ನು ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತಂದಿದ್ದೇವೆ. ಪಕ್ಷದ ವೇದಿಕೆಯಲ್ಲಿ ಆ ಬಗ್ಗೆ ಚರ್ಚಿಸಿ ಅದನ್ನು ಸರಿಪಡಿಸಲಾಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿಕೆ ನೀಡಿದ್ದಾರೆ.
Recommended Video
ಬಸನಗೌಡ ಪಾಟೀಲ್ ಮೇಲೆ ಕ್ರಮವಿಲ್ಲ?
ಸಿಎಂ ಯಡಿಯೂರಪ್ಪ ಅವರ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗಾಗ ಹರಿಹಾಯುತ್ತಲೇ ಇರುತ್ತಾರೆ. ಹೈಕಮಾಂಡ್ಗೆ ಯಡಿಯೂರಪ್ಪ ಅವರಿಂದ ಸಾಕಾಗಿ ಹೋಗಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದ್ದರು. ಆ ಬಳಿಕ ನಾಯಕತ್ವ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.
ಸಂಪುಟ ವಿಸ್ತರಣೆ ಸಂದರ್ಭದಲ್ಲಂತೂ ಹಲವರು ಯಡಿಯೂರಪ್ಪ ಅವರ 'ಸಿಡಿ'ಯನ್ನಿಟ್ಟುಕೊಂಡು ಅವರನ್ನು ಬ್ಲಾಕ್ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆಂದು ಎಂಬ ಗಂಭೀರ ಹಾಗೂ ತೀವ್ರ ಮುಜುಗುರವನ್ನುಂಟು ಮಾಡುವ ಹೇಳಿಕೆ ನೀಡಿದ್ದರು. ಹೀಗಾಗಿ ಇದೀಗ ಕೇಂದ್ರ ಶಿಸ್ತು ಸಮಿತಿ ಯತ್ನಾಳ್ ಅವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂಬುದು ಕುತೂಹಲ ಮೂಡಿಸಿದೆ.