ಪೌರತ್ವಕಾಯ್ದೆ; ಅಮಿತ್ ಶಾ ರಾಜ್ಯಕ್ಕೆ ಕೊಟ್ಟ ಸೂಚನೆ ಏನು?
ಬೆಂಗಳೂರು, ಡಿ.22: ಪೌರತ್ವ ಕಾಯ್ದೆ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರವಾಗುತ್ತಿದ್ದಂತೆಯೆ ಬಿಜೆಪಿ ಹೈಕಮಾಂಡ್ನಿಂದ ರಾಜ್ಯ ಬಿಜೆಪಿಗೆ ಮಹತ್ವದ ಸೂಚನೆ ಬಂದಿದೆ. ಕೇಂದ್ರ ಗುಪ್ತದಳದ ಮಾಹಿತಿ ಆಧರಿಸಿ ಕೇಂದ್ರಿಂದ ರಾಜ್ಯಕ್ಕೆ ಸೂಚನೆ ಬಂದಿದೆ ಎಂಬ ಮಾಹಿತಿ ಇದೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಕೆಲ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಂರಲ್ಲಿ ಆತಂಕ ಸೃಷ್ಟಿಸುತ್ತಿವೆ. ಇದರಿಂದಾಗಿಯೆ ಹಿಂಸಾಚಾರ ಶುರುವಾಗಿದೆ, ಹಾಗಾಗಿ ತಕ್ಷಣ ಡ್ಯಾಮೇಜ್ ಕಂಟ್ರೊಲ್ಗೆ ಮುಂದಾಗಬೇಕೆಂದು ಬಿಜೆಪಿ ಹೈಕಮಾಂಡ್ ಎಲ್ಲ ರಾಜ್ಯಗಳ ಬಿಜೆಪಿ ಪ್ರಮುಖರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಬೆಂಗಳೂರಲ್ಲಿ ಪೌರತ್ವದ ಪರವಾಗಿ ಮೆರವಣಿಗೆ
ಆ ಹಿನ್ನೆಲೆಯಲ್ಲಿ ಇವತ್ತು ಭಾನುವಾರವಾಗಿದ್ದರೂ, ರಾಜ್ಯ ಬಿಜೆಪಿ ನಾಯಕರು ಕೊಟ್ಟಿರುವ ಹೇಳಿಕೆಗಳು, ಕಾಯ್ದೆ ಪರವಾಗಿ ಹೋರಾಟಗಳು ರಾಜ್ಯದಲ್ಲಿ ನಡೆದಿರುವುದು ಇದನ್ನು ಸಾಬೀತು ಪಡಿಸಿವೆ.
ಟೌನ್ಹಾಲ್ ಎದುರು ನಡೆದ ಕಾಯ್ದೆ ಪರ ಪ್ರತಿಭಟನೆ
ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆಯೆ ಕಾಯ್ದೆ ಪರವಾಗಿ ಜಾಗೃತಿ ಮೂಡಿಸಲು ರಾಜ್ಯ ಬಿಜೆಪಿ ಹಾಗೂ ರಾಜ್ಯ ಸರ್ಕಾರ ಮುಂದಾಗಿವೆ. ಕಾಯ್ದೆ ಪರವಾಗಿ ರಾಜ್ಯ ನಾಯಕರು ಅಲ್ಲಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಜೊತೆಗೆ ಪೌರತ್ವ ಕಾಯ್ದೆ ಕುರಿತು ಜನಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಬೆಂಗಳೂರಿನ ಟೌನ್ಹಾಲ್ ಎದುರು ಇಂಡಿಯಾ ಫಾರ್ ಸಿಎಎ ಸಂಘಟನೆ ಜನಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ಕೊಡಲಾಗಿತ್ತು. ಯಾವುದೇ ಪ್ರತಿಭಟನೆ ರ್ಯಾಲಿಗಳಿಗೆ ಅವಕಾಶವಿಲ್ಲ ಎಂದಿದ್ದ ಪೊಲೀಸರು ಜನಜಾಗೃತಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟರು.
ಇಂಡಿಯಾ ಫಾರ್ ಸಿಎಎ ಸಂಘಟನೆ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಿ ಮಾತನಾಡಿದ್ದಾರೆ. ಮುಸ್ಲಿಂರನ್ನ ದೇಶದಿಂದ ಹೊರಗೆ ಓಡಿಸ್ತಾರೆ ಎಂದು ಹೇಳಿ ಪ್ರತಿಭಟನೆಗೆ ದೂಡಿದ್ದಾರೆ. ಯುವ ಮುಸ್ಲಿಂ ಸಮುದಾಯದವರಿಗೆ ತಪ್ಪು ಮಾಹಿತಿ ನೀಡಲಾಗ್ತಿದೆ. ಪ್ರತಿಭಟನೆಯ ಮೂಲಕ ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಭಾರತೀಯ ಮುಸಲ್ಮಾನರು ಹಿಂದೂಗಳು ಒಂದೇ ಎಂದು ನೋಡುವ ಕಾನೂನು ಸಿಎಎ ಅಂತಾ ಇಬ್ಬರೂ ಮಾತನಾಡಿದ್ದಾರೆ.
ಗೋಲಿಬಾರ್ನಲ್ಲಿ ಮೃತರಿಗೆ ರಾಜ್ಯಸರ್ಕಾರದಿಂದ ಪರಿಹಾರ ಘೋಷಣೆ
ಕೇಂದ್ರದಿಂದ ಸೂಚನೆ ಬರುತ್ತಿದ್ದಂತೆಯೆ ರಾಜ್ಯ ಬಿಜೆಪಿ ನಾಯಕರು ಕಾಯ್ದೆ ಪರವಾಗಿ ಹೇಳಿಕೆ ಕೊಡುವುದನ್ನು ಹೆಚ್ಚಿಗೆ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಎರಡೇರಡು ಬಾರಿ ಕಾಯ್ದೆ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಪೌರತ್ವ ಕಾಯ್ದೆ ಹಾಗೂ NCR ಬೇರೆ ಬೇರೆ. ಅವುಗಳ ಬಗ್ಗೆ ಮುಸ್ಲಿಂರಲ್ಲಿ ಗೊಂದಲ ಎಬ್ಬಿಸುವ ಕೆಲಸವನ್ನ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮಾಡುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಅದಾಧ ಬಳಿಕ ಮಧ್ಯಾಹ್ನ ತುರ್ತು ಸುದ್ದಿಗೋಷ್ಠಿ ಕರೆದು ಎರಡೂ ಕಾಯ್ದೆಗಳ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದಾರೆ.
NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ
ಇದರೊಂಧಿಗೆ ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಪೊಲೀಸರ ಗೋಲಿಬಾರ್ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಮೃತಪಟ್ಟವರ ಕುಟುಂಸ್ಥರಿಗೆ ತಲಾ 10 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ಕೊಡಲಿದೆ. ಯಾವ ತನಿಖೆ ನಡೆಸಬೇಕು ಎಂಬುದನ್ನು ನಂತರ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಪೌರತ್ವ ಕಾಯ್ದೆ ಪರ ರಾಜ್ಯಾದ್ಯಂತೆ ಬಿಜೆಪಿ ನಾಯಕರ ಹೇಳಿಕೆಗಳು
ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕೂಡ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಾಂಗ್ಲಾದಿಂದ ಬಂದ ನಿರಾಶ್ರಿತರಿಗೆ ಪೌರತ್ವ ನೀಡಿದ್ದೇವೆ. ಶ್ರೀಲಂಕಾದಿಂದ ಬಂದವರಿಗೂ ಪೌರತ್ವ ಕೊಟ್ಟಿದ್ದೇವೆ. ಎನ್ಆರ್ಸಿ, ಸಿಎಎ ಬೇರೆ ಬೇರೆ. ಎರಡೂ ಒಂದೆ ಕಾಯ್ದೆ ಅಂತಾ ಕಾಂಗ್ರೆಸ್ ಪಕ್ಷ ಗೊಂದಲ ಎಬ್ಬಿಸಿದೆ. ಬೇರೆ ದೇಶಗಳಿಂದ ಬಂದ ಮುಸ್ಲಿಂರಿಗೆ ಪೌರತ್ವ ಕೊಟ್ಟಿದ್ದೇವೆ. ಆದರೆ ವಿಶ್ವದಲ್ಲಿ 40 ಮುಸ್ಲಿಂರ ದೇಶಗಳಿವೆ. ಅಲ್ಲಿಂದ ಎಲ್ಲರೂ ಬಂದರೆ ಪೌರತ್ವ ಕೊಡೋಕೆ ಸಾಧ್ಯವೇ? ನಮ್ಮ ದೇಶವೇನು ಧರ್ಮಶಾಲೆಯೇ? ಅಂತಾ ಸಚಿವ ಜೋಶಿ ಪ್ರಶ್ನಿಸಿದ್ದಾರೆ. ಫೆಬ್ರುವರಿಯಲ್ಲಿ ನಡೆಯುವ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಎರಡೂ ಕಾಯ್ದೆಗಳ ಬಗ್ಗೆ ಸರ್ಕಾರ ಉತ್ತರ ಕೊಡಲಿದೆ ಎಂದಿದ್ದಾರೆ.
ದೆಹಲಿಗೆ ಮುಂದಿನ ವರ್ಷದಲ್ಲಿ ಬಂದರೆ ಸಾಕು: ಸಿಎಂ ಬಿಎಸ್ವೈಗೆ ಅಮಿತ್ ಶಾ
ಜೊತೆಗೆ ರಾಜ್ಯದಾದ್ಯಂತ ಬಿಜೆಪಿ ಸಚಿವರು, ಶಾಸಕರು, ನಾಯಕರು ಪೌರತ್ವ ಕಾಯ್ದೆ ಕುರಿತು ಮಾತನಾಡಿದ್ದಾರೆ. ಸರ್ಕಾರದ ಮುಖ್ಯ ಸಚೇತಕ, ಬಿಜೆಪಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಡಿಸಿಎಂ ಗೋವಿಂದ ಕಾರಜೋಳ್, ಬೆಳಗಾವಿ ಸಂಸದ ಸುರೇಶ ಅಂಗಡಿ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಪೌರಯತ್ವ ಕಾಯ್ದೆಯ ಪರವಾಗಿ ಮಾತನಾಡಿದ್ದಾರೆ. ಪೌರತ್ವ ಕಾಯ್ದೆಯಿಂದ ದೇಶದಲ್ಲಿನ ಮುಸ್ಲಿಂರಿಗೆ ಯಾವುದೆ ತೊಂದರೆ ಆಗಲ್ಲ ಅಂತಾ ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಕಾಯ್ದೆ ಪರವಾಗಿ ಮುಂದುವರೆಯಲಿದೆ ಬಿಜೆಪಿ ಅಭಿಯಾನ
ಟೌನ್ಹಾಲ್ ಎದುರು ಕಾಯ್ದೆ ಪರವಾಗಿ ಇಂಡಿಯಾ ಫಾರ್ ಸಿಎಎ ಸಂಘಟನೆ ಜನಜಾಗೃತಿ ಕಾರ್ಯಕ್ರಮ ಮಾಡಿದಂತೆಯೆ, ಸಂಜೆ ಟೌನ್ಹಾಲ್ ಎದುರು ಸಿಪಿಐಎಂ ಕಾಯ್ದೆ ವಿರುದ್ಧವಾಗಿ ಸತ್ಯಾಗ್ರಹ ಮಾಡಿದೆ. ಪೌರತ್ವ ಕಾಯ್ದೆ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಅಂತಾ ಬೆಂಗಳೂರು ಪೋಲಿಸರು ಅವಕಾಶ ಕೊಟ್ಟಿದ್ದಾರೆ. ಪ್ರತಿಭಟನೆ ಹತ್ತಿಕ್ಕುವುದರಿಂದ ಹಿಂಸಾಚಾರ ಆಗುತ್ತದೆ. ಹಾಗಾಗಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಿ ಎಂಬ ಕೇಂದ್ರ ಬಿಜೆಪಿಯ ಸೂಚನೆಯಂತೆ ರಾಜ್ಯದಲ್ಲಿ ಪ್ರತಿಭಟನೆಗೆ ಅವಕಾಶ ಕೊಡಲಾಗಿದೆ. ಒಟ್ಟಾರೆ ಸಿಎಎ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗುರವಾಗದಂತೆ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಬಿಜೆಪಿ ಸೂಚನೆ ಕೊಟ್ಟಿದೆ. ಜೊತೆಗೆ ಮುಂದೆಯೂ ಕೂಡ ಜನಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯ ಬಿಜೆಪಿ ಘಟಕ ನಡೆಸಲಿದೆ.