ಮಾರ್ಚ್ 1ರಿಂದ ಜನೌಷಧಿ ಸಪ್ತಾಹ: ಪ್ರಧಾನಿ ಮೋದಿ ಸಂವಾದ
ಬೆಂಗಳೂರು, ಫೆ. 18: ಶ್ರೀಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ಕೆಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿ ಇಂದು ಜನೌಷಧಿ ಕೇಂದ್ರವೊಂದನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ವೈದ್ಯರು ತಮ್ಮಲ್ಲಿ ಬರುವ ರೋಗಿಗಳಿಗೆ ವಿಶೇಷವಾಗಿ ಬಡವರಿಗೆ ಜನೌಷಧಿಯನ್ನೇ ಬರೆದುಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಜನೌಷಧ ಯೋಜನೆಯಡಿ (ಪಿಎಂಬಿಜೆಪಿ) ಇದುವರೆಗೆ ದೇಶಾದ್ಯಂತ ಸುಮಾರು 7,500 ಜನೌಷಧಿ ಕೇಂದ್ರಗಳನ್ನು (ಔಷಧ ಮಾರಾಟ ಮಳಿಗೆ) ತೆರೆಯಲಾಗಿದೆ. ಬೆಂಗಳೂರಿನ ನಾಗರಬಾವಿಯಲ್ಲಿ ಇಂದು (ಫೆ.18) ರಾಜ್ಯದ 850ನೇ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದಗೌಡ ಅವರು ಉದ್ಘಾಟಿಸಿದರು. ಕೈಗೆಟಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಔಷಧಗಳನ್ನು ಪೂರೈಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಅವರು ಅಧಿಕಾರಕ್ಕೆ ಬಂದ ತಕ್ಷಣ ಜನಸಾಮಾನ್ಯರು ತಮ್ಮ ಆದಾಯದಲ್ಲಿ ಯಾವ ಯಾವ ಉದ್ದೇಶಕ್ಕಾಗಿ ಎಷ್ಟೆಷ್ಟು ವೆಚ್ಚ ಮಾಡುತ್ತಾರೆ ಎಂಬುದನ್ನು ತಿಳಿಯಲು ಅಂಕಿ-ಸಂಖ್ಯೆ ಇಲಾಖೆ ಮೂಲಕ ಒಂದು ಸಮೀಕ್ಷೆಯನ್ನು ನಡೆಸಲಾಗಿತ್ತು. ಸಾಮಾನ್ಯ ಜನ ತಮ್ಮ ಆದಾಯದಲ್ಲಿ ಶೇಕಡಾ 15ರಿಂದ ಶೇಕಡಾ 30ರಷ್ಟು ಹಣವನ್ನು ಅನಾರೋಗ್ಯದ ಔಷಧೋಪಚಾರಕ್ಕಾಗಿಯೇ ವ್ಯಯಿಸುತ್ತಾರೆ ಎಂಬುದು ತಿಳಿದು ಬಂದಿರು ಎಂದು ಡಿವಿಎಸ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಡತನ ಹೆಚ್ಚಿಸುತ್ತಿದೆ ಔಷಧೋಪಚಾರ
ಔಷಧೋಪಚಾರ ನಪಡೆಯುವುದರಿಂದ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚು ಜನರು ಬಡತನದ ರೇಖೆಗಿಂತ ಕೆಳಗೆ ಹೋಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಈ ಸಮೀಕ್ಷೆಯಿಂದ ಹೊರಬಿದ್ದಿತ್ತು. ಹಾಗಾಗಿ ಬಡವರಿಗೆ ಆದಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಲು ಕೇಂದ್ರವು ಈ ಯೋಜನೆಗೆ ಹೊಸ ಆಯಾಮ ನೀಡಿತು ಎಂದು ಸದಾನಂದಗೌಡ ವಿವರಿಸಿದರು.
ಗುಣಮಟ್ಟದ ಜನೌಷಧಿ
ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು. ಆದರೆ ದರ ತುಂಬಾನೇ ಕಡಿಮೆ. ಉದಾಹರಣೆಗೆ ಮಧುಮೇಹ, ಬಿಪಿ ಮುಂತಾದ ಖಾಯಿಲೆ ಇರುವವರು ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ 2500 ರೂಪಾಯಿಯಿಂದ 3000 ರೂಪಾಯಿವರೆಗೆ ವೆಚ್ಚ ಮಾಡಬೇಕಾಗುತ್ತದೆ. ಆದರೆ ನಮ್ಮ ಜನೌಷಧ ಅಂಗಡಿಗಳಲ್ಲಿ ಅದೇ ಔಷಧಗಳು 250 ರೂಪಾಯಿಯಿಂದ 300 ರೂಪಾಯಿಯೊಳಗೆ ಸಿಗುತ್ತವೆ.
ವೈದ್ಯರಲ್ಲಿ ಡಿವಿಎಸ್ ಮನವಿ
ದರ ಕಡಿಮೆ ಇದೆ ಅಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಔಷಧ ಕಂಪನಿಗಳಿಂದ ಅವನ್ನು ಖರೀದಿಸುವಾಗ ಎಲ್ಲ ರೀತಿಯ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗಾಗಿ ಜನರು ಜನೌಷಧಿಯ ಉಪಯೋಗ ಪಡೆದುಕೊಳ್ಳಬೇಕು. ವೈದ್ಯರೂ ಆದಷ್ಟು ಜನೌಷಧಿಯನ್ನೇ ಶಿಪಾರಸು ಮಾಡಿ ಔಷಧ ಚೀಟಿ ಬರೆದುಕೊಡಬೇಕು ಎಂದು ವಿನಂತಿಸುತ್ತೇನೆ ಎಂದು ಅವರು ಹೇಳಿದರು.
Recommended Video
ಪ್ರಧಾನಿ ಮೋದಿ ಸಂವಾದ
ಮಾರ್ಚ್ ಒಂದರಿಂದ ಜನೌಷಧಿ ಸಪ್ತಾಹ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಮಾರಾಟಗಾರರು ಹಾಗೂ ಜನೌಷಧಿ ಫಲಾನುಭವಿಗಳ ಜೊತೆ ನೇರ ಸಂವಾದ ನಡೆಸಲಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನೌಷಧಿ ಮಾರಾಟಗಾರರು ಅತ್ಯುತ್ತಮಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಎಲ್ಲ ಶ್ಲಾಘನೆಗೆ ಅರ್ಹರು ಎಂದು ಸದಾನಂದ ಗೌಡ ಹೇಳಿದರು.