ಚುನಾವಣಾ ಸಿದ್ಧತೆ ಪರಿಶೀಲನೆಗಾಗಿ ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ಭೇಟಿ
ಬೆಂಗಳೂರು, ಜನವರಿ 30: ನೂತನವಾಗಿ ನೇಮಕಗೊಂಡಿರುವ ಮುಖ್ಯ ಚುನಾವಣಾ ಆಯಕ್ತ ಓಂ ಪ್ರಕಾಶ್ ರಾವತ್ ಬುಧವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ರಾಜ್ಯ ಮಾಡಿಕೊಂಡಿರುವ ಸಿದ್ಧತೆ ಪರಿಶೀಲನೆಗೆ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
"ಮುಖ್ಯ ಚುನಾವಣಾ ಆಯುಕ್ತರು ತಮ್ಮ ತಂಡದ ಜತೆ ಬೆಂಗಳೂರಿಗೆ ಬರಲಿದ್ದು ಚುನಾವಣಾ ಅಧಿಕಾರಿಗಳೂ, ಜಿಲ್ಲಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳ ಜತೆ ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ," ಎಂದು ರಾಜ್ಯ ಚುನಾವಣಾ ಅಧಿಕಾರಿಗಳು 'ಐಎಎನ್ಎಸ್'ಗೆ ಮಾಹಿತಿ ನೀಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್
ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಆರಂಭದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಈ ಹಿಂದೆ 'ಐಎಎನ್ಎಸ್'ಗೆ ಮಾಹಿತಿ ನೀಡಿದ್ದ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಚುನಾವಣೆ ಸಂಬಂಧಿಸಿದ ಪ್ರಕ್ರಿಯೆಗಳು ಫೆಬ್ರವರಿ ಮಧ್ಯದವರೆಗೆ ನಡೆಯಲಿದೆ ಎಂದು ಹೇಳಿದ್ದರು. ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಮತದಾರರ ನೋಂದಣಿಗೆ ರಾಜ್ಯದಲ್ಲಿ ವಿಶೇಷ ಅಭಿಯಾನವನ್ನೂ ನಡೆಸಲಾಗಿದೆ. ಚುನಾವಣಾ ಆಯೋಗದ ಪ್ರಕಾರ ಪರಿಷ್ಕೃತ ಮತದಾರರ ಪಟ್ಟಿಯನ್ನು ಇದೇ ಫೆಬ್ರವರಿ 28ರಂದು ಪ್ರಕಟಿಸಲಾಗುತ್ತದೆ.