ಅಶ್ಲೀಲ ಸಿಡಿ ಪ್ರಕರಣ: ಕುಮಾರಸ್ವಾಮಿ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ ರಮೇಶ್ ಜಾರಕಿಹೊಳಿ
ಯಡಿಯೂರಪ್ಪನವರ ಸರಕಾರದಲ್ಲಿ ಅತ್ಯಂತ ಪ್ರಭಾವೀಯಾಗಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಬೆಂಗಳೂರಿನಲ್ಲಿ ಮಂಗಳವಾರ (ಮಾ 9) ಅಶ್ಲೀಲ ಸಿಡಿಯ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿದರು.
Recommended Video
ಮಾಧ್ಯಮದವರ ಪ್ರಶ್ನೆಗೆ ಭಾವೋದ್ವೇಗಕ್ಕೆ ಒಳಗಾದ ಜಾರಕಿಹೊಳಿ, "ನಾನು ನಿರ್ದೋಷಿ, ಈ ವಿಚಾರದಲ್ಲಿ ಮಹಾನ್ ನಾಯಕರೊಬ್ಬರ ಕೈವಾಡವಿದೆ. ನನಗೆ ನನ್ನ ಕುಟುಂಬ ಮುಖ್ಯ"ಎಂದು ಹೇಳಿದರು.
ಜಾರಕಿಹೊಳಿ ಹೇಳುವ ಆ ಮಹಾನ್ ನಾಯಕ ಯಾರೆಂದು ರಾಜಕೀಯ ವಲಯದಲ್ಲಿ ಗೊತ್ತಿರುವ ವಿಚಾರವಾದರೂ, ಅವರ ಹೆಸರನ್ನು ರಮೇಶ್ ಜಾರಕಿಹೊಳಿ ಬಹಿರಂಗ ಪಡಿಸಲಿಲ್ಲ. "ಅವರ ಹೆಸರನ್ನು ಹೇಳಲು ಆಗುವುದಿಲ್ಲ"ಎಂದಷ್ಟೇ ಗೋಷ್ಠಿಯಲ್ಲಿ ಜಾರಕಿಹೊಳಿ ಹೇಳಿದರು.
ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ: ರಮೇಶ್ ಜಾರಕಿಹೊಳಿ
ಇನ್ನು, ಈ ವಿಚಾರದಲ್ಲಿ ಗೌಡ್ರ ಕುಟುಂಬದ ಕೈವಾಡವಿಲ್ಲ ಎನ್ನುವುದನ್ನೂ ಜಾರಕಿಹೊಳಿ ಸ್ಪಷ್ಟ ಪಡಿಸಿದರು. ಈ ವಿಚಾರದಲ್ಲಿ ಐದು ಕೋಟಿ ಡೀಲ್ ನಡೆದಿರಬಹುದು ಎಂದು ಮೊದಲು ಹೇಳಿದ್ದೇ ಕುಮಾರಸ್ವಾಮಿ.
ನಮ್ಮ ಕುಟುಂಬದ ಮರ್ಯಾದೆ ವಾಪಸ್ ಬರಬೇಕಿದೆ. ನನಗೆ ಇದೇ ಮುಖ್ಯ
ಈ ಪ್ರಕರಣದಿಂದ ನಮ್ಮ ಕುಟುಂಬ ಮರ್ಯಾದೆ ಹೋಗಿದೆ ಎಂದು ಹೇಳಿರುವ ರಮೇಶ್ ಜಾರಕಿಹೊಳಿ, "ನಮ್ಮದು ರಾಜಮನೆತನ. ಈ ಪ್ರಕರಣದಿಂದ ಹೋಗಿರುವ ನಮ್ಮ ಕುಟುಂಬದ ಮರ್ಯಾದೆ ವಾಪಸ್ ಬರಬೇಕಿದೆ. ನನಗೆ ಅದೇ ಮುಖ್ಯ. ಈ ಸಿಡಿ ಮೂಲಕ ನನ್ನ ಕುಟುಂದ ವಿರುದ್ದ ಷಡ್ಯಂತ್ರ ನಡೆದಿದೆ"ಎಂದು ಜಾರಕಿಹೊಳಿ ಹೇಳಿದರು.
ಎಚ್ಡಿಕೆ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ ಜಾರಕಿಹೊಳಿ
"ಈ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ಯಾವ ಕೈವಾಡವೂ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ನನ್ನೊಂದಿಗೆ ಮಾತನಾಡಿದ್ದಾರೆ. ಪ್ರಕರಣದಲ್ಲಿ ಅವರು ಇಲ್ಲ, ಇದ್ದಿದ್ದರೆ ನನ್ನೊಂದಿಗೆ ಯಾಕೆ ಮಾತನಾಡುತ್ತಿದ್ದರು"ಎಂದು ಜಾರಕಿಹೊಳಿ ಹೇಳುವ ಮೂಲಕ, ಎಚ್ಡಿಕೆ ಕುಟುಂಬಕ್ಕೆ ಅವರು ಕ್ಲೀನ್ ಚಿಟ್ ನೀಡಿದರು.
ನೂರಕ್ಕೆ ನೂರು ಇದು ನಕಲಿ ಸಿಡಿ ಆಗಿದೆ
"ಆ ಯುವತಿಗೆ ಐದು ಕೋಟಿ ರೂ ಕೊಡಲಾಗಿದೆ, ಜೊತೆಗೆ ಎರಡು ಫ್ಲ್ಯಾಟ್ಗಳನ್ನು ವಿದೇಶದಲ್ಲಿ ಕೊಡಲಾಗಿದೆ ಎಂಬ ಮಾಹಿತಿಯಿದೆ. ಈ ಸಿಡಿ ಪ್ರಕರಣದ ಹಿಂದೆ ವ್ಯವಹಾರವಾಗಿದೆ. ನೂರಕ್ಕೆ ನೂರು ಇದು ನಕಲಿ ಸಿಡಿ ಆಗಿದೆ"ಎಂದು ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿದರು.
ಐದು ಕೋಟಿ ಡೀಲ್ ನಡೆದಿರುವ ಸಾಧ್ಯತೆಯಿದೆ
ರಮೇಶ್ ಜಾರಕಿಹೊಳಿಯವರ ಸಿಡಿ ಬಹಿರಂಗಗೊಂಡ ನಂತರ ಈ ವಿಚಾರದಲ್ಲಿ ಡೀಲ್ ನಡೆದಿದೆ ಎಂದು ಮೊದಲು ಹೇಳಿದ್ದೇ ಕುಮಾರಸ್ವಾಮಿ. ದೂರುದಾರರಾಗಿದ್ದ ಗಿರೀಶ್ ಕಲ್ಲಹಳ್ಳಿಯನ್ನು ಉಲ್ಲೇಖಿಸಿ ಮಾತನಾಡಿದ್ದ ಕುಮಾರಸ್ವಾಮಿ, "ಇಂತವರನ್ನು ಮೊದಲು ಏರೋಪ್ಲೇನ್ ಹತ್ತಿಸಬೇಕು ಎಂದು ಹೇಳಿದ್ದರು. ಜೊತೆಗೆ, ನನಗಿರುವ ಮಾಹಿತಿಯ ಪ್ರಕಾರ, ಎರಡು ದಿನಗಳಿಂದ ಈ ಬಗ್ಗೆ ನನಗೆ ಮಾಹಿತಿ ಬರುತ್ತಿದ್ದು, ಐದು ಕೋಟಿ ಡೀಲ್ ನಡೆದಿರುವ ಸಾಧ್ಯತೆಯಿದೆ" ಎನ್ನುವ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದರು.