ಕರ್ನಾಟಕದಲ್ಲಿ ಲೋನ್ಆಪ್ ಅಕ್ರಮ: 22 ಆಪ್ ಮುಖ್ಯಸ್ಥರಿಗೆ ಬಂಧನದ ಬೀತಿ
ಬೆಂಗಳೂರು, ಜು. 13: ಮೂರು ಸಾವಿರ ಸಾಲ ಕೊಟ್ಟು ಹತ್ತು ಸಾವಿರ ಕೀಳುವ ಲೋನ್ ಆಪ್ಗಳ ವಿರುದ್ಧ ಸಿಸಿಬಿ ಇದೀಗ ಎರಡನೇ ಹಂತದ ತನಿಖೆ ಆರಂಭಿಸಿದೆ. ರಾಜ್ಯದಲ್ಲಿ ಬಡವರಿಗೆ ಸಾಲ ಕೊಟ್ಟು ಸುಲಿಗೆ ಮಾಡಿದ್ದ 22 ಇನ್ಸ್ಟೆಂಟ್ ಲೋನ್ಆಪ್ಗಳ ವಿರುದ್ಧ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2020 ಡಿಸೆಂಬರ್ ನಿಂದಲೂ ಈವರೆಗೂ ಸೂಮಾರು 22 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದ ಸಿಸಿಬಿ ಪೊಲೀಸರು ಆರಂಭದಲ್ಲಿ ಶೂರತ್ವ ತೋರಿ ಸುಮ್ಮನಾಗಿದ್ದರು. ಸಿಸಿಬಿ ಪೊಲೀಸರು ಲೋನ್ ಆಪ್ ಕಾಲ್ ಸೆಂಟರ್ ಗಳ ಮೇಲೆ ಸಹ ದಾಳಿ ಮಾಡಿದ್ದರು. ಆ ಬಳಿಕ ಸುಮ್ಮನಾಗಿದ್ದರು.ಇದೀಗ ಲೋನ್ ಆಪ್ಗಳ ಅಕ್ರಮದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಲೋನ್ ಆಪ್ಗಳ ಅಕ್ರಮಕ್ಕೆ ಸಂಬಂಧಿಸಿದಂತೆ 22 ಆಪ್ಗಳಿಗೆ ನೋಟಿಸ್ ನೀಡಲಾಗಿದೆ. ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಎಲ್ಲಾ ಪ್ರಕರಣಗಳ ತ್ವರಿತ ತನಿಖೆಗಾಗಿ ತನಿಖಾಧಿಕಾರಿಗಳಿಗೆ ಹಂಚಲಾಗಿದೆ. ಆದರೆ, ಬಹುತೇಕ ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸುವ ಕಾರ್ಯ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲೋನ್ ಆಪ್ಗಳ ವಿರುದ್ಧ ಸಿಸಿಬಿ ತನಿಖೆಗೆ ಚುರುಕು:
ಬಿಡಿಗಾಸು ಸಾಲ ಕೊಟ್ಟು ಮಾನ ಹರಾಜು ಹಾಕುವ ಲೋನ್ ಆಪ್ಗಳ ವ್ಯವಸ್ಥಾಪಕರಿಗೆ ಹಾಗೂ ಅಧಿಕಾರಿಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಆರಂಭಿಸಿದ್ದಾರೆ. ಆದ್ರೆ ಸಿಸಿಬಿ ನೋಟಿಸ್ ಗಳು ಆರೋಪಿಗಳಿಗೆ ತಲುಪುತ್ತಿಲ್ಲ. ದಾಳಿ ವೇಳೆ ನೀಡಿದ್ದ ವಿಳಾಸದಲ್ಲಿ ಆರೋಪಿಗಳು ಇಲ್ಲ. ಹೀಗಾಗಿ ತನಿಖೆ ಅಮೆ ಗತಿಯಲ್ಲಿ ಸಾಗುತ್ತಿದೆ. 22 ಲೋನ್ ಆಪ್ ಗಳು ಕಾನೂನು ಬಾಹಿರ ಸಾಲ ಮತ್ತು ಬಡ್ಡಿ ವಸೂಲಿ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿದೆ.
ಅಣಬೆಗಳಂತೆ ತಲೆಯೆತ್ತಿವೆ ಲೋನ್ ಆಪ್ಗಳು:
ಅಕ್ರಮ ದಂಧೆಯಲ್ಲಿ ತೊಡಗಿದ್ದ ಲೋನ್ ಆಪ್ ಗಳ ವಿರುದ್ಧ ಸಿಸಿಬಿ ಪೊಲೀಸರು 2020 ಡಿಸೆಂಬರ್ ನಲ್ಲಿ ದಾಳಿ ಮಾಡಿದ್ದರು. ಮೂವರು ಅರೋಪಿಗಳನ್ನು ಬಂಧಿಸಿದ್ದರು. ಅಲ್ಲದೇ ಸಾಲಗಾರರಿಂದ ಹಣ ವಸೂಲಿ ಮಾಡುವ ಕಾಲ್ ಸೆಂಟರ್ ನಡೆಸುತ್ತಿದ್ದ ಮೂವರು ಬಂಧನಕ್ಕೆ ಒಳಗಾಗಿದ್ದರು. ಚೀನಾ ಮೂಲದ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಅದರೆ ವಾಸ್ತವದಲ್ಲಿ ಲೋನ್ಆಪ್ ಮಾಲೀಕರನ್ನು ಸಿಸಿಬಿ ಪೊಲೀಸರು ಬಂಧಿಸಲು ಸಾಧ್ಯವಾಗಿಲ್ಲ. ಇನ್ನು ಸಿಸಿಬಿ ಪೊಲೀಸರು ಕೇಸು ದಾಖಲಿಸಿದರೂ ಲೋನ್ ಆಪ್ ಗಳ ಕಾರ್ಯಚಟುವಟಿಕೆ ನಿಂತಿಲ್ಲ. ಮಿಗಿಲಾಗಿ ಎಂದಿನಂತೆ ತಮ್ಮ ಅಕ್ರಮ ಮುಂದುವರೆಸಿವೆ. ಸಿಸಿಬಿ ಪೊಲೀಸರು ಬದ್ಧತೆ ತೋರಿ ತನಿಖೆ ನಡೆಸಿದ್ದಲ್ಲಿ ರಾಜ್ಯದಲ್ಲಿ ಲೋನ್ ಆಪ್ ಗಳು ಬಂದ್ ಆಗುತ್ತಿದ್ದವು. ಆದರೆ ಸಿಸಿಬಿ ಪೊಲೀಸರ ನಿರಾಸಕ್ತಿಯಿಂದ ಈಗಲೂ ಲೋನ್ ಅಪ್ಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿವೆ.
ಮೂರು ಸಾವಿರಕ್ಕೆ ದುಪ್ಪಟ್ಟು ಬಡ್ಡಿ :
ದೇಶದಲ್ಲಿ ಆನ್ಲೈನ್ ಲೋನ್ ಆಪ್ ಗಳನ್ನು ಪರಿಚಯಿಸಿರುವುದೇ ಚೀನಾ ಮೂಲದ ಕಂಪನಿಗಳು. ದನ ದಾಹಕ್ಕೆ ಜೋತು ಬಿದ್ದಿರುವ ದೇಶದ ಕೆಲವು ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು ಚೀನಾ ಮೂಲದ ಕಂಪನಿಗಳ ಜತೆ ಕೈ ಜೋಡಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಅಕ್ರಮ ಬಡ್ಡಿ ವಸೂಲಿ ದಂಧೆಯಲ್ಲಿ ತೊಡಗಿವೆ. ಕೇವಲ ಮೂರು ಸಾವಿರ ಸಾಲ ಕೊಟ್ಟು ಅದಕ್ಕೆ ಬಡ್ಡಿಯೇ 1800 ರೂ. ವಸೂಲಿ ಮಾಡುತ್ತಿವೆ. ಕೇವಲ ಮೂರು ಸಾವಿರದಿಂದ 10 ಸಾವಿರ ವರೆಗೆ ಸಾಲ ಪಡೆಯುವರ ರಕ್ತ ಹೀರುವ ಲೋನ್ ಆಪ್ಗಳು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿವೆ. ಕಳೆದ ಮೂರು ವರ್ಷದಿಂದ ಇವುಗಳ ಉಪಟಳ ಜಾಸ್ತಿಯಾಗಿದ್ದರೂ ಈವರೆಗೂ ವ್ಯವಸ್ಥಿತ ಕ್ರಮ ಜರುಗಿಸುವಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ.
ಮೊಬೈಲ್ ವಿವರ ಆಪ್ ಕೈಯಲ್ಲಿ:
ಕೇವಲ ಮೂರು ಸಾವಿರ ರೂ.ನಿಂದ ಹತ್ತು ಸಾವಿರ ರೂ. ವರೆಗೂ ತುರ್ತು ಸಾಲ ನೀಡುವ ಆಪ್ಗಳು ಸಾಲಗಾರರ ವಿವರ ಸೇರಿದಂತೆ ಅವರ ಸಂಪರ್ಕದಲ್ಲಿರುವ ಎಲ್ಲಾ ಮಾಹಿತಿಯನ್ನು ಸಾಲ ನೀಡುವಾಗಲೇ ಕದ್ದು ಮೋಸ ಮಾಡಿರುತ್ತಾರೆ. ಬಡ್ಡಿ ಸಮೇತ ಸಾಲ ಪಾವತಿಸದಿದ್ದರೆ ಅವಾಚ್ಯ ಪದಗಳಿಂದ ನಿಂದನೆ ಮಾಡುವುದು. ಸಾಲಗಾರರ ಚಿತ್ರಗಳನ್ನು ಅಶ್ಲೀಲಗೊಳಿಸಿ ಆಪ್ತರಿಗೆ ಕಳುಹಿಸಿ ಮರ್ಯಾದೆ ಹರಾಜು ಹಾಕುತ್ತಾರೆ. ಈ ಲೋನ್ ಆಪ್ಗಳ ಕಿರುಕುಳಕ್ಕೆ ಬೇಸತ್ತು ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಒಂದೇ ಕ್ಷಣದಲ್ಲಿ ಸಾಲ ಕೊಡುವ ಇವುಗಳ ಕುತಂತ್ರಕ್ಕೆ ಲಕ್ಷಾಂತರ ಮಂದಿ ಮೋಸ ಹೋಗಿದ್ದಾರೆ. ಇನ್ನೂ ಕೆಲವರು ಮೋಸ ಹೋದರೂ ದೂರು ನೀಡಲು ಹಿಂಜರಿದಿದ್ದಾರೆ. ಇದು ಕೇವಲ ಮಾನಹಾನಿ ಮಾತ್ರವಲ್ಲ, ದೇಶದ ಬ್ಯಾಂಕಿಂಗ್ ಕ್ಷೇತ್ರದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಒನ್ ಇಂಡಿಯಾ ಕನ್ನಡಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲೋನ್ ಆಪ್ಗಳ ವಿರುದ್ಧ ಕಾರ್ಯಚರಣೆಗೆ ಪರಿಹಾರ:
ಭಾರತದಲ್ಲಿ ಅಪಾಯಕಾರಿ ಗೇಮ್ ಗಳನ್ನು ಬಂದ್ ಮಾಡಿದಂತೆ ಲೋನ್ ಆಪ್ಗಳನ್ನು ಸಹ ಪ್ಲೇ ಸ್ಟೋರ್ನಲ್ಲಿ ಬಂದ್ ಮಾಡಬೇಕು. ಒಮ್ಮೆ ಬಂದ್ ಮಾಡಿದರೂ ಹೊಸ ಹೆಸರಿನಲ್ಲಿ ಹುಟ್ಟಿಕೊಳ್ಳುವ ಲೋನ್ ಆಪ್ಗಳನ್ನು ನಿಯಂತ್ರಣ ಮಾಡಲು ಪ್ರತ್ಯೇಕ ತನಿಖಾ ಏಜೆನ್ಸಿಯನ್ನು ನೇಮಿಸಬೇಕು. ಲೋನ್ ಆಪ್ಗಳ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಲು ಅವಕಾಶ ಇರಬೇಕು. ಈಗಿರುವ ವ್ಯವಸ್ಥೆಯಲ್ಲಿ ಮೋಸ ಹೋದವರು ದೂರು ಕೊಡಬೇಕು. ಆದ್ರೆ ಮೂರ್ನಾಲ್ಕು ಸಾವಿರಕ್ಕೆ ಯಾಕೆ ಪೊಲೀಸ್ ಸ್ಟೇಷನ್ ಗೆ ಹೋಗಬೇಕು ಎಂಬ ಮನಸ್ಥಿತಿಯಿಂದ ಯಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಲೋನ್ ಆಪ್ಗಳಿಂದ ವಂಚನೆಗೆ ಒಳಗಾದವರು ಕೂಡಲೇ ದೂರು ಕೊಡಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮಹತ್ವದ ತೀರ್ಮಾನ ಕೈಗೊಳ್ಳದ ಹೊರತು ಸದ್ಯಕ್ಕೆ ಲೋನ್ ಆಪ್ಗಳ ಉಪಟಳಕ್ಕೆ ಕಡಿವಾಣ ಹಾಕುವುದು ಅಸಾಧ್ಯ ಎಂದು ಲೋನ್ ಆಪ್ಗಳ ತನಿಖೆ ನೇತೃತ್ವ ವಹಿಸಿರುವ ಪೊಲೀಸ್ ಅಧಿಕಾರಿ ಇರುವ ತಾಂತ್ರಿಕ ಸಮಸ್ಯೆಯನ್ನು ವಿವರಿಸಿದ್ದಾರೆ.
Recommended Video