CBSE ಪ್ರಶ್ನೆಪತ್ರಿಕೆ ಲೀಕ್, ಕಿಮ್ಮನೆ ಅವಧಿಯಲ್ಲಿ ನಡೆದಿದ್ದೇನು?
ಕೆಲವೊಂದು ನಡೆಯಬಾರದ ಘಟನೆಗಳನ್ನು ರಾಜಕಾರಣಿಗಳು ತಮಗೆ ಹೇಗೆ ಬೇಕಾದರೆ ಹಾಗೇ ಬಳಸಿಕೊಳ್ಳುತ್ತಾರೆ ಎನ್ನುವುದಕ್ಕೆ CBSE ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಘಟನೆಯೇ ಸಾಕ್ಷಿ. ಬಿಜೆಪಿ ವಿರುದ್ದ ತಿರುಗಿಬೀಳಲು ಕಾಂಗ್ರೆಸ್ ಬಳಸಿಕೊಳ್ಳುತ್ತಿರುವ ಬತ್ತಳಿಕೆಗೆ ಸೇರಿದ ಇನ್ನೊಂದು ಅಸ್ತ್ರವೇ ಸಿಬಿಎಸ್ಇ.
ಇದೇ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರು ಶಿವಮೊಗ್ಗದಲ್ಲಿ ಮಂಗಳವಾರ (ಮಾ 3) ಪ್ರಧಾನಿ ಮೋದಿಯ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ. ಪ್ರಧಾನಿಯವರು 'ವೀಕ್' ಆಗಿರುವುದರಿಂದ ಪ್ರಶ್ನೆಪತ್ರಿಕೆ 'ಲೀಕ್' ಆಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ರಾಹುಲ್ ಹೇಳಿಕೆಯ ಸಂದರ್ಭದಲ್ಲಿ ಅಲ್ಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರ ಹೇಳಿಕೆಗೆ ಮುಗುಳ್ನಗುತ್ತಾ ಸಮ್ಮತಿ ಸೂಚಿಸಿದ್ದಾರೆ.
ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಇಲ್ಲ
ರಾಹುಲ್ ಗಾಂಧಿ ಈ ಹೇಳಿಕೆ ನೀಡುವ ಮುನ್ನ ತಮ್ಮದೇ ಕರ್ನಾಟಕದಲ್ಲಿನ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರ ಅವಧಿಯಲ್ಲಿ ಅದೆಷ್ಟು ಬಾರಿ ಪ್ರಶ್ನೆಪತ್ರಿಕೆಗಳು ಲೀಕ್ ಆಗಿದ್ದವು ಎನ್ನುವ ಮಾಹಿತಿಯನ್ನೊಮ್ಮೆ ಅವಲೋಕಿಸಿದ್ದರೆ ಬಹುಷ: ಅವರಿಗೇ ಮುಜುಗರವಾಗುತ್ತಿತ್ತೇನೋ?
ಕಿಮ್ಮನೆ ಅವಧಿಯಲ್ಲಿ ಆಗಿದ್ದೂ ತಪ್ಪು, ಪ್ರಕಾಶ್ ಜಾವಡೇಕರ್ ಅವಧಿಯಲ್ಲಿ ಈಗ ಆಗಿರುವುದೂ ತಪ್ಪೇ.. ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಇದನ್ನೆಲ್ಲಾ ಪುಢಾರಿಗಳು ತಮ್ಮ ರಾಜಕೀಯ ಮೈಲೇಜಿಗೆ ಬಳಸಿಕೊಳ್ಳುತ್ತಿರುವುದು ಎಲ್ಲದ್ದಕ್ಕಿಂತ ದೊಡ್ಡ ತಪ್ಪು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಕಿಮ್ಮನೆ ರತ್ನಾಕರ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯಲ್ಲಿನ ಚುನಾವಣಾ ಭಾಷಣದಲ್ಲಿ ರಾಹುಲ್ ಗಾಂಧಿ, ಸಿಬಿಎಸ್ಇ ಪ್ರಶ್ನೆಪತ್ರಿಕೆ ಲೀಕ್ ಆಗಿರುವುದಕ್ಕೆ ನೇರವಾಗಿ ಪ್ರಧಾನಿಯವರನ್ನು ಟಾರ್ಗೆಟ್ ಮಾಡಿದ್ದಾರೆ. ಆಗ ಅಲ್ಲೇ ಇದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಹಿತ ಸಚಿವ ಸಂಪುಟದ ಸದಸ್ಯರ ಆತ್ಮಸಾಕ್ಷಿ ಕಿಮ್ಮನೆಯವರನ್ನು ನೆನಪಿಸಿಕೊಂಡಿರಲೂಬಹುದು. ಮುಂದೆ ಓದಿ
ವೈಟ್ ಕಾಲರ್ ರಾಜಕಾರಣಿಯೆಂದೇ ಹೆಸರಾಗಿರುವ ಕಿಮ್ಮನೆ ರತ್ನಾಕರ
ಮಾಜಿ ಸಿಎಂ ಎಸ್ ಎಂ ಕೃಷ್ಣ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮತ್ತು ವೈಟ್ ಕಾಲರ್ ರಾಜಕಾರಣಿಯೆಂದೇ ಹೆಸರಾಗಿರುವ ಕಿಮ್ಮನೆ, ಕಳೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ದಯನೀಯವಾಗಿ ವಿಫಲರಾಗಿದ್ದರು. ಸಿದ್ದರಾಮಯ್ಯ ಸಂಪುಟದಿಂದ ಹೊರಹೋಗುವ ಸಚಿವರುಗಳ ಪಟ್ಟಿಯಲ್ಲಿ ತನ್ನ ಹೆಸರು ಇರುವುದು ಅಂತಿಮವಾಗುತ್ತಿದ್ದಂತೆಯೇ ಕಿಮ್ಮನೆ ವಿದಾಯ ಭಾಷಣ ಮಾಡಿದ್ದರು.
ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಲೀಕ್
ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಲೀಕ್, ಸಿಲ್ಲಬಸ್ ನಲ್ಲಿ ಇಲ್ಲದ ಪ್ರಶ್ನೆಗಳು, ಮರುಪರೀಕ್ಷೆ ದಿನಾಂಕ ಘೋಷಣೆ, ಎಸ್ ಎಸ್ ಎಲ್ ಸಿ ಗಣಿತ ಪ್ರಶ್ನೆಪತ್ರಿಕೆ ಲೀಕ್ ಆಯಿತು ಎನ್ನುವ ಸುದ್ದಿ, ಈ ಎಲ್ಲಾ ಘಟನೆಗಳಿಂದ ಸಿದ್ದರಾಮಯ್ಯ ಸರಕಾರ ತೀವ್ರ ಮುಜುಗರವನ್ನು ಎದುರಿಸಬೇಕಾಯಿತು. ಪೋಷಕರೊಬ್ಬರು ಮಂಡಳಿ ಕಟ್ಟಡವೇರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಸಿಬಿಎಸ್ಇ 12ನೇ ತರಗತಿ ಮರು ಪರೀಕ್ಷೆ ದಿನಾಂಕ ಪ್ರಕಟ
ಶಿಕ್ಷಣ ಮಂಡಳಿಯ ವೈಫಲ್ಯವೆಂದಿದ್ದ ಸಿದ್ದರಾಮಯ್ಯನವರ ಸರಕಾರ
ಇದಕ್ಕೂ ಸಚಿವಾಲಯಕ್ಕೂ ಸಂಬಂಧವಿಲ್ಲ, ಇದೇನಿದ್ದರೂ ಶಿಕ್ಷಣ ಮಂಡಳಿಯ ವೈಫಲ್ಯವೆಂದಿದ್ದ ಸಿದ್ದರಾಮಯ್ಯನವರ ಸರಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿದ್ದ ಪಲ್ಲವಿ ಅಕುರಾತಿ ಅವರನ್ನು ಎತ್ತಂಗಡಿ ಮಾಡಿತ್ತು. ಜೊತೆಗೆ, ಪಶ್ನೆ ಪತ್ರಿಕೆ ಸೋರಿಕೆಯ ವಿಚಾರದಲ್ಲಿ ಬಂಧಿತರಾಗಿದ್ದ ಮೂವರಲ್ಲಿ ಒಬ್ಬರು, ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ವಿಶೇಷಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರು ಎಂದು ಪೊಲೀಸರು ಹೇಳಿದ್ದರು.
ಪ್ರಧಾನಿ ಮೋದಿ ಜವಾಬ್ದಾರರು
ವಿದ್ಯಾರ್ಥಿಗಳಿಗೆ ಮತ್ತು ಪೋಷಕರು ಬರಸಿಡಿಲಿನಂತೆ ಎದುರಾಗಿದ್ದ ಈ ಘಟನೆಗಳಿಗೂ ನಾವು ಜವಾಬ್ದಾರರಾಗಲು ಸಾಧ್ಯವಿಲ್ಲ, ಅದು ಶಿಕ್ಷಣ ಮಂಡಳಿಯ ವೈಫಲ್ಯ ಎಂದು ಸಿದ್ದರಾಮಯ್ಯ ಸರಕಾರ ಹೇಳಿತ್ತು. ಈಗ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾಂಗ್ರೆಸ್, ಪ್ರಧಾನಿ ಮೋದಿ ಮತ್ತು ಸಚಿವ ಜಾವಡೇಕರ್ ಜವಾಬ್ದಾರರು ಎನ್ನುತ್ತಿದ್ದಾರೆ. ಎಬಿವಿಪಿ ಸಂಘಟನೆಯ ಸದಸ್ಯರೊಬ್ಬರ ಹೆಸರು ಇದಕ್ಕೆ ಕೇಳಿ ಬರುತ್ತಿರುವುದಕ್ಕೆ ಕಾಂಗ್ರೆಸ್ ಈ ರೀತಿಯ ಹೇಳಿಕೆಯನ್ನು ನೀಡುತ್ತಿರುವುದಾದರೆ, ಅಂದು ಕೂಡಾ ಸಚಿವರೊಬ್ಬರ ಆಪ್ತರೊಬ್ಬರ ಹೆಸರು ಕೇಳಿ ಬಂದಿತ್ತಲ್ಲವೇ?
'ಶಿಕ್ಷಣ'ವನ್ನು ಸಾರ್ವಜನಿಕ ಸಭೆ/ರೋಡ್ ಶೋಗೆ ತರಬೇಡಿ
ವಿದ್ಯಾರ್ಥಿಗಳ ಬಾಳಿನಲ್ಲಿ ಆಟವಾಡುವ ಈ ಎಲ್ಲಾ ವಿದ್ಯಮಾನಗಳು ಅಕ್ಷ್ಯಮ್ಯ ಅಪರಾಧವೇ, ಆದರೆ ಚುನಾವಣೆಯ ವೇಳೆ ತಮಗೆ ಅನುಕೂಲವಾಗುವಂತೆ ಹೇಳಿಕೆಯನ್ನು ನೀಡಿ ರಾಜಕೀಯ ಮೈಲೇಜ್ ಗಿಟ್ಟಿಸಿಕೊಳ್ಳುವುದು ಯಾವ ರಾಜಕೀಯ ಪಕ್ಷಗಳಿಗೂ ತರವಲ್ಲ. ನಿಮ್ಮ ನಿಮ್ಮ ರಾಜಕೀಯಕ್ಕೆ 'ಶಿಕ್ಷಣ'ವನ್ನು ಸಾರ್ವಜನಿಕ ಸಭೆ/ರೋಡ್ ಶೋಗೆ ತರಬೇಡಿ.