ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ
ಬೆಂಗಳೂರು, ಅಕ್ಟೋಬರ್ 05: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿರುವಾಗ ನಡೆದಿರುವ ದಾಳಿ ರಾಜಕೀಯ ಸ್ವರೂಪ ಪಡೆಯುವ ನಿರೀಕ್ಷೆ ಇದೆ.
Recommended Video
ಸೋಮವಾರ ಬೆಳಗ್ಗೆ ಐವರು ಅಧಿಕಾರಿಗಳ ತಂಡ ಸದಾಶಿವ ನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲಿಯೇ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಉಪ ಚುನಾವಣೆ ನನಗೆ ಸವಾಲು ಅಲ್ಲ; ಡಿ. ಕೆ. ಶಿವಕುಮಾರ್
ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು. ಬಳಿಕ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಸುಮಾರು 50 ದಿನಗಳ ಕಾಲ ಡಿ. ಕೆ. ಶಿವಕುಮಾರ್ ಜೈಲಿನಲ್ಲಿದ್ದರು.
ಡಿ. ಕೆ. ಶಿವಕುಮಾರ್ ಮಾತ್ರವಲ್ಲ ಡಿ. ಕೆ. ಶಿವಕುಮಾರ್ ಸಹೋದರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ನಿವಾಸದ ಮೇಲೆಯೂ ದಾಳಿ ನಡೆದಿದೆ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ? ಎಂಬುದು ತಿಳಿದುಬಂದಿಲ್ಲ.
ಡಿ. ಕೆ. ಶಿವಕುಮಾರ್ ಪರ ವಕೀಲರಾದ ವಿಕ್ರಮ್ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ನಿವಾಸದಲ್ಲಿ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.
ಡಿ. ಕೆ. ಶಿವಕುಮಾರ್ ದೆಹಲಿ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿ ಕುರಿತು ಸಿಬಿಐ ತನಿಖೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು. ರಾಜ್ಯ ಸರ್ಕಾರದ ನೀಡಿದ ಒಪ್ಪಿಗೆ ರದ್ದುಪಡಿಸಲು ಕೋರಿ ಡಿ. ಕೆ. ಶಿವಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಸಿಬಿಐ ತನಿಖೆ ಮುಂದುವರೆಸಲು ಒಪ್ಪಿಗೆ ನೀಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆದಿದೆಯೇ ಎಂಬುದು ತಿಳಿದಿಲ್ಲ.