ಕರ್ನಾಟಕ ಗಣಿ ಹಗರಣದ ತನಿಖೆಗೆ ಸಿಬಿಐ ಎಳ್ಳು ನೀರು
ನವದೆಹಲಿ, ಅಕ್ಟೋಬರ್ 25: ಕೇಂದ್ರೀಯ ತನಿಖಾ ದಳ ಕರ್ನಾಟಕದ ಗಣಿ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಗೆ ಇತಿಶ್ರೀ ಹಾಡಲು ತೀರ್ಮಾನಿಸಿದೆ ಎನ್ನಲಾಗಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲೇ ಪ್ರಕರಣಕ್ಕೆ ಪೂರ್ಣ ವಿರಾಮ ಹಾಕಲು ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ನಿರ್ಧರಿಸಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ. ಗೋವಾ, ಮಂಗಳೂರು, ಕೃಷ್ಣಪಟ್ಟಣಂ ಬಂದರು ಮೂಲಕ ಅಕ್ರಮ ಅದಿರು ರಫ್ತು ಮಾಡಲಾಗಿತ್ತು ಎಂಬ ಪ್ರಕರಣ ಇದಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಈ ಗಣಿ ಹಗರಣ ಸುಮಾರು 25,000 ಕೊಟಿ ರೂಪಾಯಿಯ ಹಗರಣ 2012ರಲ್ಲಿ ಸಚಿವರೊಬ್ಬರು ಆರೋಪಿಸಿದ್ದರು. ಬೆನ್ನಿಗೆ ಲೋಕಾಯುಕ್ತ ವರದಿ ಹೊರ ಬಿದ್ದಿತ್ತು.
12.57 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಬಂದರುಗಳ ಮೂಲಕ 2006 ಮತ್ತು 2010ರವರೆಗೆ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದರಲ್ಲಿ 2.98 ಕೋಟಿ ಮೆಟ್ರಿಕ್ ಟನ್ ಅಕ್ರಮ ರಫ್ತು ಎಂದು ವರದಿ ಹೇಳಿತ್ತು.
ನಂತರ ಸಿಬಿಐ ಮಾಜಿ ಸಚಿವ ಗಣಿಧಣಿ ಜನಾರ್ದನ್ ರೆಡ್ಡಿ ಸೇರಿದಂತೆ ಹಲವರ ಮೇಲೆ ಜಾರ್ಜ್ ಶೀಟ್ ಹಾಕಿ ಬಂಧನ ನಡೆಸಿದ್ದೆಲ್ಲಾ ಇವತ್ತಿಗೆ ಇತಿಹಾಸ.