ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ: ಸಿಬಿಐ ಅಂತಿಮ ವರದಿ ಸಲ್ಲಿಕೆ
ಬೆಂಗಳೂರು, ಆಗಸ್ಟ್ 7: ದಕ್ಷಿಣಕನ್ನಡ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ ಎನ್ನಲಾಗುತ್ತಿದೆ.
ಅಕ್ಟೋಬರ್ 10, 2012ರಂದು ಧರ್ಮಸ್ಥಳದಿಂದ ಏಳು ಕಿಲೋಮೀಟರ್ ದೂರದ ಉಜಿರೆ ಬಳಿ ನೇತ್ರಾವತಿ ನದಿಯ ಸಮೀಪ ಸೌಜನ್ಯ ಶವ ಅತ್ಯಾಚಾರ, ಕೊಲೆ ಎಸಗಿದ ರೂಪದಲ್ಲಿ ಪತ್ತೆಯಾಗಿತ್ತು. (ಸಿಬಿಐ ಬಿರುಸಿನ ತನಿಖೆ ಆರಂಭ)
ಈ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದವರ ಹೆಸರು ಕೇಳಿ ಬಂದಿತ್ತು. ಜೊತೆಗೆ ಹೆಗ್ಗಡೆ ಕುಟುಂಬದ ವಿರುದ್ದ ಭಾರೀ ಹೋರಾಟವೇ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (ಸಿಬಿಐ) ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಹೆಗ್ಗಡೆ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಏಕೈಕ ಆರೋಪಿ ಸಂತೋಷ್ ರಾವ್ ವಿರುದ್ದ ನಗರದ ಹೆಚ್ಚುವರಿ ಸಿವಿಲ್ ಕೋರ್ಟಿಗೆ ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ಮೂಲಕ ರಾಜ್ಯ ಸಿಐಡಿ ಅಧಿಕಾರಿಗಳು ನೀಡಿದ್ದ ವರದಿಯನ್ನೇ ಸಿಬಿಐ ಕೂಡಾ ಸಮರ್ಥಿಸಿಕೊಂಡಂತಾಗಿದೆ.
ಈ ಘಟನೆಯ ಸುತ್ತಮುತ್ತ ನಡೆದ ಹೋರಾಟದ ಬಗ್ಗೆ ಒಂದು ಝಲಕ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಸಿಐಡಿಗೆ ವಹಿಸಿದ್ದ ಸರಕಾರ
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿತ್ತು. ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಡಿ, ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ಆರಂಭಿಸಿತ್ತು. ಸಿಐಡಿ ತನಿಖೆ ನಡೆಸಿ, ಹೆಗ್ಗಡೆ ಕುಟುಂಬದ ಕೈವಾಡವಿಲ್ಲ, ಸಂತೋಷ್ ರಾವ್ ಪ್ರಕರಣದ ಆರೋಪಿ ಎಂದು ವರದಿ ನೀಡಿತ್ತು. ಆರೋಪಿಗಳಾಗಿದ್ದ ನಿಶ್ಚಲ್ ಜೈನ್, ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಅವರಿಗೆ ಸಿಐಡಿ ಕ್ಲೀನ್ ಚಿಟ್ ನೀಡಿತ್ತು.
ಬೆಳ್ತಂಗಡಿ ಬಂದ್
ಇದಾದ ನಂತರ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಲೇ ಬೇಕೆಂದು ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ಮತ್ತು ವಿವಿಧ ಸಂಘಟನೆಗಳು 25.10.2013ರಂದು ಕರೆದಿದ್ದ ಬೆಳ್ತಂಗಡಿ ಮತ್ತು ಉಜಿರೆ ಬಂದ್ 'ಸಂಪೂರ್ಣ ಯಶಸ್ವಿಯಾಗಿತ್ತು. ನವೆಂಬರ್ 11, 2013ರಂದು ನಡೆದ ಪ್ರತಿಭಟನೆಗೆ ಜನ ಪ್ರವಾಹವೇ ಹರಿದುಬಂದಿತ್ತು.
ವೀರೇಂದ್ರ ಹೆಗ್ಗಡೆ
ಸ್ಥಳೀಯರ ಮನಸ್ಸಿನಲ್ಲಿ ಇನ್ನೂ ಗೊಂದಲವಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಆಗ್ರಿಹಿಸಿ ವೀರೇಂದ್ರ ಹೆಗ್ಗಡೆ, ಸಿಎಂ ಸಿದ್ದರಾಮಯ್ಯ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.
ನನ್ನ ನೋವನ್ನು ಧರ್ಮದೇವತೆಗಳಿಗೆ ಬಿಟ್ಟಿದ್ದೇನೆ
ಕ್ಷೇತ್ರದ ಮತ್ತು ನನ್ನ ವಿರುದ್ದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಅಪವಾದ, ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ. ನನ್ನ ನೋವು ಮತ್ತು ಕ್ಷೇತ್ರದ ಭಕ್ತಾದಿಗಳ ನೋವನ್ನು ಮಂಜುನಾಥ, ಅಣ್ಣಪ್ಪ ಸ್ವಾಮಿ ಮತ್ತು ಧರ್ಮ ದೇವತೆಗಳಿಗೆ ಬಿಟ್ಟಿದ್ದೇನೆಂದು ವೀರೇಂದ್ರ ಹೆಗ್ಗಡೆ ಭಾವೋದ್ವೇಗಕ್ಕೊಳಕ್ಕಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಅಧಿಕೃತವಾಸಿ ಸಿಬಿಐಗೆ
ವಿವಿಧ ಸಂಘಟನೆಗಳ ಭಾರೀ ಪ್ರತಿಭಟನೆಗೆ ಮಣಿದ ಸರಕಾರ, ಸೌಜನ್ಯ ಕೊಲೆ ಪ್ರಕರಣವನ್ನು ಡಿಸೆಂಬರ್ 9, 2013ರಂದು ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐ ಜೊತೆ ಪತ್ರ ವ್ಯವಹಾರ ಆರಂಭಿಸುವ ಮೂಲಕ ತನಿಖೆಗೆ ಗೃಹ ಇಲಾಖೆ ಅಧಿಕೃತ ಚಾಲನೆ ನೀಡಿತ್ತು.
ಸಿಬಿಐ ಬಿರುಸಿನ ತನಿಖೆ
ಪ್ರಕರಣಕ್ಕೆ ಸಂಬಂಧಿಸಿದಂತೆ, ಚೆನ್ನೈನಿಂದ ಬಂದ ಏಳು ಜನರ ತಂಡ ಬಿರುಸಿನ ತನಿಖೆ ಆರಂಭಿಸಿತ್ತು. ಸೌಜನ್ಯ ಕುಟುಂಬದವರನ್ನು, ಆರೋಪಿ ಪಟ್ಟಿಯಲ್ಲಿ ದಾಖಲಾಗಿರುವವರನ್ನು, ಇತರರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಏಪ್ರಿಲ್ 2014ರಲ್ಲಿ ನಡೆದ ವಿಚಾರಣೆಯ ನಂತರ ಹೆಚ್ಚಿನ ತನಿಖಾ ಪ್ರಗತಿಯ ಬಗ್ಗೆ ವರದಿಯಾಗಿರಲಿಲ್ಲ.
ಸಿಬಿಐ ಅಂತಿಮ ವರದಿ
ಸೌಜನ್ಯ ಕೊಲೆಗೆ ಸಂಬಂಧಿಸಿದಂತೆ ಹೆಗ್ಗಡೆ ಕುಟುಂದ ಯಾವುದೇ ಸದಸ್ಯರ ಕೈವಾಡವಿಲ್ಲ. ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ ಎನ್ನುವ ಹೋರಾಟಗಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಿಬಿಐ ಅಂತಿಮ ವರದಿಯನ್ನು ನೀಡಿದೆ ಎನ್ನಲಾಗುತ್ತಿದೆ.