ನೈಋತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಎಫ್ಐಆರ್
ಬೆಂಗಳೂರು, ಜನವರಿ 14 : ನೈಋತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿದೆ. ಇಂಜಿನಿಯರ್ ಆದಾಯ ಮೀರಿ ಆಸ್ತಿಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ನೈಋತ್ಯ ರೈಲ್ವೆ ವಲಯದ ಕಾರ್ಯ ನಿರ್ವಾಹಕ ಇಂಜಿನಿಯರ್ (ನಿರ್ಮಾಣ ವಿಭಾಗ) ಘನಶ್ಯಾಮ್ ಪ್ರಧಾನ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ.
ಘನಶ್ಯಾಮ್ ಪ್ರಧಾನ್ ಮೈಸೂರಿನ ವಿಶ್ವೇಶ್ವರನಗರದ ನಿವಾಸಿ. 1988ರಲ್ಲಿ ಆಗ್ನೇಯ ರೈಲ್ವೆ ವಿಭಾಗದಲ್ಲಿ ಕಾಮಗಾರಿ ನಿರೀಕ್ಷಕರಾಗಿ ಘನಶ್ಯಾಮ್ ಪ್ರಧಾನ್ ನೇಮಕವಾಗಿದ್ದರು.
ಕರ್ತವ್ಯವ ಅವಧಿಯಲ್ಲಿ ಆದಾಯ ಮೀರಿ ಸುಮಾರು 2.25 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ ಆರೋಪದಡಿ ಸಿಬಿಐ ತನಿಖೆ ನಡೆಸಲಿದೆ. ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಜೊತೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ ಎಂದು ಸಹ ಆರೋಪಿಸಲಾಗಿದೆ.
ಕಾಮಗಾರಿ ನಿರೀಕ್ಷಕರಾಗಿ ರೈಲ್ವೆ ಇಲಾಖೆ ಸೇರಿದ್ದ ಘನಶ್ಯಾಮ್ ಪ್ರಧಾನ್ ಬಳಿಕ ಬಡ್ತಿ ಪಡೆದು ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಅಕ್ರಮ ನಡೆಸಿದ್ದಾರೆ ಎಂಬ ಆರೋಪವೂ ಇದೆ.
2010ರ ಏಪ್ರಿಲ್ 1 ರಿಂದ 2019ರ ಡಿಸೆಂಬರ್ 31ರ ಅವಧಿಯಲ್ಲಿ ಮೈಸೂರು, ಹಾಸನ, ದಾವಣಗೆರೆ, ಹಾವೇರಿಯಲ್ಲಿ ರೈಲ್ವೆ ಇಲಾಖೆ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪವೂ ಇದೆ.