ಕಾವೇರಿ: ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು!
ಬೆಂಗಳೂರು, ಸೆ 12: ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಕಾವೇರಿ ಕಣಿವೆ ಪ್ರದೇಶ ಸೋಮವಾರ (ಸೆ 12) ಅಕ್ಷರಶಃ ಹೊತ್ತಿ ಹೊರಿಯುತ್ತಿದೆ. ಬೆಂಗಳೂರು ಸೇರಿದಂತೆ ಮಂಡ್ಯ,ಪಾಂಡವಪುರ ಮುಂತಾದೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ.
ಸುಪ್ರೀಂಕೋರ್ಟಿನಲ್ಲಿ ಕರ್ನಾಟಕದ ಮೇಲ್ಮನವಿಯ ವಿಚಾರಣೆ ಸೋಮವಾರ ಬರುತ್ತಿರುವುದರಿಂದ ಬೆಳಗ್ಗೆಯಿಂದಲೇ ಬಿಗುವಿನ ವಾತಾವರಣವಿದ್ದರೂ, ಸುಪ್ರೀಂ ತೀರ್ಪಿನ ಮೊದಲೇ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದಿದ್ದರು. (ಜಯಲಲಿತಾಗೆ ಸಿದ್ದರಾಮಯ್ಯ ಪತ್ರ)
ಗಲಭೆ ಆರಂಭವಾಗಲು ಕಾರಣವಾದ ಅಂಶವೇನು? ಸಂತೋಷ್ ಎನ್ನುವ ತಮಿಳುನಾಡು ಮೂಲದ ಯುವಕ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಕನ್ನಡ ಸಿನಿಮಾ ಕಲಾವಿದರು ಮತ್ತು ಕಾವೇರಿ ಬಗ್ಗೆ ಅತ್ಯಂತ ಕೀಳಾಗಿ ಅಣಕವಾಡಿದ್ದ.
ಇದಕ್ಕೆ ಕನ್ನಡಪರ ಹೋರಾಟಗಾರರು ಅವನಿಗೆ ಬಿಸಿ ಮುಟ್ಟಿಸಿ 'ಕಾವೇರಿ ಕರ್ನಾಟಕದ್ದು' ಎನ್ನುವ ಹೇಳಿಕೆಯನ್ನು ಪಡೆದುಕೊಂಡಿದ್ದರು. ಈ ಘಟನೆಯ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡಿ ರಾಷ್ಟ್ರೀಯ ವಾಹಿನಿಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಈ ಘಟನೆಗೆ ಪ್ರತೀಕಾರ ತೀರಿಸುವ ಹಾಗೆ, ಬೆಂಗಳೂರಿನಿಂದ ಪ್ರವಾಸಿಗರನ್ನು ಟಿಟಿ ವಾಹನದ ಮೂಲಕ ರಾಮೇಶ್ವರಂಗೆ ಕರೆದುಕೊಂಡು ಹೋಗಿದ್ದ ಕರ್ನಾಟಕ ಮೂಲದ ಡ್ರೈವರ್ ಅನ್ನು ಚೆನ್ನಾಗಿ ಥಳಿಸಿ 'ಕಾವೇರಿ ತಮಿಳುನಾಡಿನದ್ದು'ಎನ್ನುವ ಹೇಳಿಕೆ ನೀಡುವಂತೆ ತಮಿಳುಪರ ಸಂಘಟನೆಯ ಸದಸ್ಯರು ಒತ್ತಾಯಿಸಿದ್ದರು. ಆದರೆ ಡ್ರೈವರ್ ಒತ್ತಾಯಕ್ಕೆ ಮಣಿಯದಿದ್ದಾಗ ಮತ್ತಷ್ಟು ಏಟನ್ನು ನೀಡಿದ್ದರು.
ಇದರ ವಿಡಿಯೋ ತುಣುಕನ್ನು ಕನ್ನಡದ ಮಾಧ್ಯಮಗಳು ಅವಶ್ಯಕತೆಗಿಂತ ಹೆಚ್ಚಾಗಿ ಪ್ರಚಾರ ಮಾಡಲಾರಂಭಿಸಿದವು. ಇದಾದ ನಂತರ ಚೆನ್ನೈನಲ್ಲಿ ಕನ್ನಡಿಗ ಮೂಲದ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. (ಕೆಪಿಎನ್ ಟ್ರಾವೆಲ್ಸ್ ನ 30ಕ್ಕೂ ಹೆಚ್ಚು ಬಸ್ ಗೆ ಬೆಂಕಿ)
ಇದರ ಬೆನ್ನಲ್ಲೇ 12ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎನ್ನುವ ಸುರ್ಪೀಂಕೋರ್ಟಿನ ತೀರ್ಪಿನಿಂದಾಗಿ ಕನ್ನಡಪರ ಹೋರಾಟಗಾರ ಹೋರಾಟದ ಕಿಚ್ಚು ತಾರಕಕ್ಕೇರಿತು. ಇದಿಷ್ಟು ಸೋಮವಾರ ಬೆಂಗಳೂರು ಹೊತ್ತಿಉರಿಯಲು ಕಾರಣವಾದ ಅಂಶ.
ಸೋಮವಾರದ ಬೆಳವಣಿಗೆಯ ಪ್ರಮುಖಾಂಶ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
ರಾಮೇಶ್ವರಂನಲ್ಲಿ ವಿಡಿಯೋ ವೈರಲ್
ರಾಮೇಶ್ವರಂನಲ್ಲಿ ಕರ್ನಾಟಕದ ಟಿಟಿ ವಾಹನದ ಡ್ರೈವರ್ ಮೇಲಿನ ಹಲ್ಲೆಯ ವಿಡಿಯೋ ವೈರಲ್. ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ ಮುಂದುವರೆದರೆ ಇಲ್ಲಿರುವ ಕನ್ನಡಿಗರಿಗೂ ಅದೇ ಗತಿಯಾಗುತ್ತದೆ ಎಂಬರ್ಥದ ಪಾಂಪ್ಲೇಟ್ ಗಳ ಹಂಚಿಕೆ. ನಾಮ್ ತಮಿಳರ್ ಕಚ್ಚಿ ಸಂಘಟನೆಯ ಗೂಂಡಾಗಳಿಂದ ಈ ಕೃತ್ಯ.
ವುಡ್ ಲ್ಯಾಂಡ್ಸ್ ಹೋಟೇಲ್ ಮೇಲೆ ದಾಳಿ
ಕನ್ನಡಿಗರಿಗೆ ಸೇರಿರುವ ವಾಹನ, ಕಚೇರಿ ಮೇಲೆ ಚೆನ್ನೈನಲ್ಲಿ ದಾಳಿ. ಚೆನ್ನೈನ ವುಡ್ ಲ್ಯಾಂಡ್ಸ್ ಹೋಟೇಲ್ ಮೇಲೆ 6 ಪೆಟ್ರೋಲ್ ಬಾಂಬ್ ಗಳನ್ನು ದುಷ್ಕರ್ಮಿಗಳಿಂದ ಎಸೆತ. ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ಯುವಕನೊಬ್ಬನಿಗೆ ಕನ್ನಡಿಗರು ಗೂಸಾ ಕೊಟ್ಟ ಪ್ರತೀಕಾರಕ್ಕಾಗಿ ಈ ದಾಳಿ.
ಉಭಯ ರಾಜ್ಯದ ನಡುವೆ ಬಸ್ ಸಂಚಾರ ಸ್ಥಗಿತ
ಬೆಂಗಳೂರು-ಮೈಸೂರು ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ತಮಿಳುನಾಡು ಹಾಗೂ ಕರ್ನಾಟಕ ನಡುವೆ ಸಾರಿಗೆ ಸಂಪರ್ಕ ಮತ್ತೊಮ್ಮೆ ಸ್ಥಗಿತಗೊಳಿಸಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆದೇಶ. ಟ್ರಕ್, ಲಾರಿ ಸಂಚಾರ ಕೂಡಾ ಸ್ಥಗಿತ.
ಸುರ್ಪೀಂ ತೀರ್ಪು, ರಾಜ್ಯಕ್ಕೆ ಮತ್ತೆ ಅನ್ಯಾಯ
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆ. ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಸುಪ್ರೀಂಕೋರ್ಟ್ ಆದೇಶ, ಸೆ 20ಕ್ಕೆ ವಿಚಾರಣೆ ಮುಂದೂಡಿಕೆ.
ಮಂಡ್ಯದಲ್ಲಿ ಆರಂಭವಾದ ಗಲಭೆ
ಸುಪ್ರೀಂ ಆಜ್ಞೆ ಹೊರಬೀಳುತ್ತಿದ್ದಂತೇ, ಮಂಡ್ಯ ಜಿಲ್ಲಾದ್ಯಂತ ಪ್ರತಿಭಟನೆ ಕಾವು ತೀವ್ರ. ಪಾಂಡವಪುರ ಪಟ್ಟಣದಲ್ಲಿ ತಮಿಳಿಗರಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ. ಪಾಂಡವಪುರ ಹಾಗೂ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ತಮಿಳುನಾಡಿಗೆ ಸೇರಿದ ಲಾರಿಗೆ ಬೆಂಕಿ.
ಶಾಂತಿ ಕಾಪಾಡುವಂತೆ ಸಿದ್ದು ಮನವಿ
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಮತ್ತು ಕರ್ನಾಟಕದ ಅಂಗಡಿ, ಹೊಟೇಲ್ ಗಳ ಮೇಲೆ ನಡೆಸಿರುವ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಕರಿಸಬೇಕೆಂದು ಮನವಿ.
ರಾಜಧಾನಿಯಲ್ಲಿ ಭುಗಿಲೆದ್ದ ಆಕ್ರೋಶ
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಆರಂಭವಾದ ಗಲಭೆ ನಗರದಾದ್ಯಂತ ವ್ಯಾಪಿಸಿತು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ. ಮೆಟ್ರೋ ಸಂಚಾರ ಸ್ಥಗಿತ. ಅಡ್ಯಾರ್ ಆನಂದ್ ಭವನ ಹೋಟೇಲಿನ ನಾಲ್ಕು ಶಾಖೆಗಳ ಮೇಲೆ ದಾಳಿ. ತಮಿಳುನಾಡಿನ ನೊಂದಣಿಯಿದ್ದ ಲಾರಿಗೆ ಮೈಸೂರು ರಸ್ತೆಯಲ್ಲಿ ಬೆಂಕಿ.
ಗೃಹ ಸಚಿವರ ಪತ್ರಿಕಾಗೋಷ್ಠಿ
ಇಂದಿನ ಎಲ್ಲಾ ಘಟನೆಗೆ ಮೂಲ ಕಾರಣ ಸಂತೋಷ್ ಎನ್ನುವ ವ್ಯಕ್ತಿ. ತಮಿಳು ಸಮುದಾಯ ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ಯಾರೂ ಆತಂಕ ಪಡಬೇಕಾಗಿಲ್ಲ. ಶಾಂತಿ ಕಾಪಾಡ ಬೇಕೆಂದು ಗೃಹ ಸಚಿವ ಜಿ ಪರಮೇಶ್ವರ ಮನವಿ.
ಸುಪ್ರೀಂಕೋರ್ಟ್ ತೀರ್ಪು ರಾಜ್ಯದ ಪಾಲಿಗೆ ಶಿಕ್ಷೆ
ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಕರ್ನಾಟಕದ ಪಾಲಿಗೆ ಶಿಕ್ಷೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೇಸರ. ಈ ತೀರ್ಪು ಕನ್ನಡಿಗರನ್ನು ಬಡಿದೆಬ್ಬಿಸುವ ಕೆಲಸಕ್ಕೆ ಕೈ ಹಾಕಿದಂತಿದೆ. ರಾಜ್ಯದ ಜನತೆಯನ್ನು ಕೆರಳಿಸಬೇಡಿ. ಇಂತಹದ್ದೇ ತೀರ್ಪನ್ನು 1991ರಲ್ಲಿ ಕೊಟ್ಟಾಗ ರಾಜ್ಯದಲ್ಲಿ 11 ಜನ ಬಲಿಯಾಗಿದ್ದರು ಕುಮಾರಸ್ವಾಮಿ ಎಚ್ಚರಿಕೆ.
ಜಯಾಗೆ ಸಿಎಂ ಸಿದ್ದು ಪತ್ರ
ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು, ಹಲ್ಲೆ, ದೌರ್ಜನ್ಯ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರ.
ಬೆಂಗಳೂರಿನಲ್ಲಿ 144 ಸೆಕ್ಷನ್ ಗೊಂದಲ
ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ, ನಂತರ ಹಿಂದಕ್ಕೆ ಪಡೆತ. ಪೊಲೀಸರಿಂದ ಸೆಕ್ಷನ್ ಜಾರಿಗೊಳಿಸಲೇ ಇಲ್ಲ ಎನ್ನುವ ಗೊಂದಲ.
ಮೂವತ್ತಕ್ಕೂ ಹೆಚ್ಚು ಬಸ್ಸಿಗೆ ಬೆಂಕಿ
ಬೆಂಗಳೂರು ಹೊಸಕೆರೆಹಳ್ಳಿ ಬಳಿ ನೈಸ್ ರಸ್ತೆಯ ಸಮೀಪದ ದ್ವಾರಕನಾಥ ನಗರದಲ್ಲಿ ನಿಲ್ಲಿಸಿದ್ದ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಮೂವತ್ತಕ್ಕೂ ಹೆಚ್ಚು ಬಸ್ ಗಳಿಗೆ ಬೆಂಕಿ ತಗುಲಿದೆ. ಉದ್ರಿಕ್ತರು ಆಕ್ರೋಶದಿಂದ ಹೊತ್ತಿಸಿದ ಬೆಂಕಿ ದೊಡ್ಡ ಅನಾಹುತ ಮಾಡಿದೆ. ತಮಿಳುನಾಡು ನೋಂದಣಿಯ ಎರಡು ಬಸ್ಸುಗಳಿಗೆ ಬೆಂಕಿ ಹಚ್ಚಲು ಹೋಗಿ ಭಾರೀ ದುರಂತ.
ಬೆಂಗಳೂರು ಸ್ತಬ್ದ
ಒಟ್ಟಾರೆ ಬೆಂಗಳೂರು ಸ್ತಬ್ದಗೊಂಡಿದೆ. ಸಾರ್ವಜನಿಕರು ನಾಳೆಯ ಕಥೆಯೇನು ಎನ್ನುವ ಭಯದಲ್ಲಿದ್ದಾರೆ. ಬಸ್, ಆಟೋ ಸಂಚಾರವಿಲ್ಲ. ಎಲ್ಲಿ ನೋಡಿದರಲ್ಲಿ ಟೈರಿಗೆ, ಮರಕ್ಕೆ ಬೆಂಕಿ ಹಾಕಿ ರಸ್ತತಡೆ. ರಸ್ತೆಗಿಳಿದಿರುವ ಕನ್ನಡಪರ ಸಂಘಟನೆಗಳು. ಬೆಂಗಳೂರಿನಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್.