ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ವಿಸ್ಮಯ
ಮಡಿಕೇರಿ, ಅ.17: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಗುರುವಾರ ಮಧ್ಯಾಹ್ನ 12.01ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದಾರೆ.
ಗುರುವಾರ ಮಧ್ಯಾಹ್ನ 12.01ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ತಾಯಿ ಕಾವೇರಿ ತೀರ್ಥಸ್ವರೂಪಿಯಾಗಿ ಭಕ್ತರಿಗೆ ದರುಶನ ನೀಡಿದ್ದಾಳೆ. ಇದರ ಬೆನ್ನಲ್ಲೇ ಸಾಂಪ್ರದಾಯಿಕ ವಿಧಿ ವಿಧಾನಗಳು, ಪೂಜೆಗಳು ಆರಂಭಗೊಂಡಿದೆ. ಬ್ರಹ್ಮಕುಂಡಿಕೆಯಿಂದ ಚಿಮ್ಮಿದ ಪುಣ್ಯ ಜಲವನ್ನು ಸಂಗ್ರಹಿಸಲು ಭಕ್ತಾದಿಗಳು ಮುಗಿಬಿದ್ದಿದ್ದಾರೆ.
ಪುಣ್ಯ ಸ್ನಾನ: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳ ಪುಣ್ಯ ಸ್ನಾನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಸಂದರ್ಭ ಭಕ್ತರ ಕೇಶ ಮುಂಡನಕ್ಕೆ ನೂತನವಾಗಿ ನಿರ್ಮಿಸಲಾದ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾವೇರಿ-ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಸಂಗಮ ಸ್ಥಳವಾದ ಭಾಗಮಂಡಲ ಭಾಗಮಂಡಲ, ತಲಕಾವೇರಿಯಲ್ಲಿ ಪಿಂಡ ಪ್ರದಾನಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇವೆರಡು ಕಾರ್ಯಗಳಿಗೆ ರೂ. 50 ಶುಲ್ಕ ಮತ್ತು ಟೋಕನ್ ವ್ಯವಸ್ಥೆ ಕಲ್ಪಿಸಲಾಗಿದೆ. ತುಲಾ ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ಅ.20ರ ವರೆಗೆ ತಲಕಾವೇರಿಯಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯಿಂದ ಛತ್ರದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ.
ಭಾಗಮಂಡಲ ಮತ್ತು ತಲಕಾವೇರಿಯ 25 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಾಗಮಂಡಲದಿಂದ ತಲಕಾವೇರಿ ಸನ್ನಿಧಾನದವರೆಗೆ 25 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲ ಶಾಲೆ ಬಳಿಯಿಂದ ತಲಕಾವೇರಿಗೆ ಕೆಎಸ್ ಆರ್ ಟಿಸಿ ಬಸ್ ತೆರಳಲಿವೆ.
ನಾಡಿನೆಲ್ಲೆಡೆ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಶೌಚಾಲಯ, ವಿದ್ಯುತ್, ಆಂಬ್ಯುಲೆನ್ಸ್ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ವಸ್ತ್ರ ಸಂಹಿತೆ: ಕ್ಷೇತ್ರಕ್ಕೆ ಬರುವ ಭಕ್ತರು ಈಗ ತುಂಡುಡುಗೆ ತೊಡುವಂತಿಲ್ಲ. ಸ್ಲೀವ್ ಲೆಸ್, ಶಾರ್ಟ್ಸ್, ಪಾರದರ್ಶಕ ಬಟ್ಟೆ, ಬರ್ಮುಡಾ ತೊಟ್ಟು ಪುರುಷರು ಮಹಿಳೆಯರು ದೇಗುಲ ಪ್ರವೇಶಿಸುವಂತಿಲ್ಲ. ಇಂಥ ಉಡುಗೆ ತೊಟ್ಟವರನ್ನು ದೇವಾಲಯ ದ್ವಾರದಲ್ಲೇ ಸೆಕ್ಯೂರಿಟಿ ಗಾರ್ಡ್ ತಡೆಯುತ್ತಾರೆ. ಹೀಗೆ ಬರುವ ಭಕ್ತರಿಗೆ ಬಟ್ಟೆ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.