ಕೆಆರ್ಎಸ್ನಲ್ಲಿ 350 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ನಿರ್ಮಾಣ
Recommended Video
ಬೆಂಗಳೂರು, ನವೆಂಬರ್ 15: ಹಗಲಿನಲ್ಲಿ ಮನಮೋಹಕ ಪರಿಸರ, ಸಂಜೆ ವೇಳೆ ಬೆಳಕಿನ ರಂಗು ಪಡೆದುಕೊಂಡು ಪ್ರವಾಸಿಗರನ್ನು ಸೆಳೆಯುತ್ತಿರುವ ಮಂಡ್ಯದ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯ ಮತ್ತಷ್ಟು ಕಂಗೊಳಿಸಲಿದೆ.
ಕೆಆರ್ಎಸ್ ಅನ್ನು ಅಮೆರಿಕದ ಡಿಸ್ನಿಲ್ಯಾಂಡ್ನಂತೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಅಲ್ಲಿ ಬೃಹತ್ ಪ್ರತಿಮೆ ನಿರ್ಮಾಣವಾಗಲಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಹೊಸ ಯೋಜನೆಗೆ ಮುಂದಾಗಿದೆ.
ಕೆಆರ್ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧ
ಕಾವೇರಿ ತಾಯಿಯ 350 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕನ್ನಡಿಗರ ಭಾವನಾತ್ಮಕತೆಯ ಪ್ರತೀಕವಾಗಿರುವ ಕಾವೇರಿ ತಾಯಿಯನ್ನು ಈ ಪ್ರತಿಮೆಯ ರೂಪದಲ್ಲಿ ಕಾಣಲಾಗುತ್ತಿದೆ.
ಈ ಪ್ರತಿಮೆಗೆ 125 ಅಡಿ ಎತ್ತರದ ನೆಲಗಟ್ಟು ಇರಲಿದ್ದು, ಸಾರ್ವಜನಿಕರು ಅಣೆಕಟ್ಟು ವೀಕ್ಷಿಸುವ ಗ್ಯಾಲರಿಯಲ್ಲಿ ಇದನ್ನು ನಿರ್ಮಿಸಲಾಗುವುದು.
ನಾಲ್ವಡಿ ಒಡೆಯರ್ ಪ್ರತಿಮೆ ಪಕ್ಕದಲ್ಲಿ
ರಾಜ್ಯದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋದ್ಯಮ ಮತ್ತು ಜಲ ಸಂಪನ್ಮೂಲ ಇಲಾಖೆಗಳು ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಪಕ್ಕದಲ್ಲಿಯೇ ಈ ಪ್ರತಿಮೆ ನಿರ್ಮಾಣವಾಗಲಿದ್ದು, ಎರಡೂ ಪ್ರತಿಮೆಗಳು ಈ ಭಾಗದ ಪ್ರಮುಖ ಆಕರ್ಷಣೆಗಳಾಗಲಿವೆ.
ಯೋಜನೆಗೆ ಅನುಮತಿ
ಬುಧವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರತಿಮೆ ನಿರ್ಮಾಣ ಯೋಜನೆಗೆ ಜಲ ಸಂಪನ್ಮೂಲ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಈ ಯೋಜನೆಗೆ ಅನುಮತಿ ನೀಡಿದರು.
ಮಹಿಳೆ ಹಿಡಿದ ಬಿಂದಿಗೆಯಿಂದ ನೀರು ಹೊರಬರುವ ಚಿತ್ರದ ಮಾದರಿಯಲ್ಲಿಯೇ ಈ ಪ್ರತಿಮೆ ನಿರ್ಮಾಣವಾಗಲಿದ್ದು, ಬಿಂದಿಗೆಯಿಂದ ನಿರಂತರವಾಗಿ ನೀರು ಸುರಿಯುವಂತೆ ಪಂಪ್ ಮೂಲಕ ನೀರು ಹರಿಸಲಾಗುವುದು.
ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು?
ಅಮ್ಯೂಸ್ಮೆಂಟ್ ಪಾರ್ಕ್
ಇಡೀ ಯೋಜನೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಅಮ್ಯೂಸ್ಮೆಂಟ್ ಪಾರ್ಕ್. ಇದರಲ್ಲಿ ಪೆಂಗ್ವಿನ್ ಪಾರ್ಕ್, ಸುಗಂಧದ ಪಾರ್ಕ್ ಮುಂತಾದ ಥೀಮ್ ಪಾರ್ಕ್ಗಳು ಸಹ ಇರಲಿವೆ. ಐತಿಹಾಸಿಕ ಹಂಪಿ, ಬೇಲೂರು, ಹಳೆಬೀಡುವಿನ ಸೊಬಗನ್ನು ನೆನಪಿಸುವ ನಕಲು ಸೃಷ್ಟಿಗಳು ಸಹ ಇಲ್ಲಿ ನೆಲೆಯೂರಲಿವೆ. ಜತೆಗೆ ಹೋಟೆಲ್ ಹಾಗೂ ಫುಡ್ಕೋರ್ಟ್ಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ.
ರಾಜ್ಯ ಹಾಗೂ ದೇಶದ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಒಳಗೊಳ್ಳುವ ಮೇಣದ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ.
ಎರಡು ತಿಂಗಳಿನಲ್ಲಿ ಟೆಂಡರ್
ಮುಂದಿನ ಎರಡು ತಿಂಗಳಿನಲ್ಲಿ ಈ ಕುರಿತು ಟೆಂಡರ್ ಹೊರಡಿಸಲಾಗುವುದು. ಬಿಲ್ಡ್ ಓನ್ ಆಪರೇಟ್ ಟ್ರಾನ್ಸ್ ಫರ್ ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
1500-2000 ಕೋಟಿ ರೂ. ವೆಚ್ಚ
ಕೆಆರ್ಎಸ್ ಸುತ್ತಮುತ್ತ 500 ಎಕರೆ ಭೂಮಿ ಲಭ್ಯವಿದೆ. ಇದರಲ್ಲಿ ಸುಮಾರು 350 ಎಕರೆ ಭೂಮಿಯನ್ನು ಯೋಜನೆಗಾಗಿ ಬಳಸಿಕೊಳ್ಳಲಾಗುತ್ತದೆ. ಇಡೀ ಯೋಜನೆಗೆ 1500-2000 ಕೋಟಿ ರೂ. ತಗಲುತ್ತದೆ. ಜೈಪುರ ಮೂಲದ ವಾಸ್ತುಶಿಲ್ಪಿಗಳ ತಂಡ ಈ ಯೋಜನೆಯನ್ನು ನಿಭಾಯಿಸಲಿದೆ.
ಈ ಯೋಜನೆಯಿಂದ ಸಮೀಪದ ಬೃಂದಾವನ ಉದ್ಯಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ಬಜೆಟ್ನಲ್ಲಿಯೇ ಘೋಷಣೆ
ಕೆಆರ್ಎಸ್ಅನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಜುಲೈ 5ರಂದು ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಸ್ತಾವ ಮುಂದಿರಿಸಿದ್ದರು.
ಅದಕ್ಕಾಗಿ ಆರಂಭದಲ್ಲಿ ಐದು ಕೋಟಿ ರೂ. ಮೀಸಲಿರಿಸಿದ್ದರು. ಜಾಗತಿಕ ಹೂಡಿಕೆದಾರರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದರು.