ಜಯನಗರ: ಬೆಕ್ಕು ಹುಡುಕಿಕೊಟ್ರೆ 35 ಸಾವಿರ ರೂ. ಬಹುಮಾನ!
ಬೆಂಗಳೂರು, ಜ. 23: ಜನ ಸಾಮಾನ್ಯರು ಕಾಣೆಯಾದರೆ ದೂರು ಕೊಡುವುದು ಅಪರೂಪ. ಇಂಥ ಕಾಲದಲ್ಲಿ ಪರ್ಷಿಯಾ ಮೂಲದ ಬೆಕ್ಕು ಕಾಣೆಯಾಗಿರುವುದಕ್ಕೆ ವ್ಯಕ್ತಿಯೊಬ್ಬರು ಪೊಲೀಸ್ ಮೆಟ್ಟಿಲೇರಿದ್ದಾರೆ. ತನ್ನ ಬೆಕ್ಕು ಕಳ್ಳತನವಾಗಿದೆ ಎಂದು ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಇನ್ನು ಬೆಕ್ಕು ಹಿಡಿದುಕೊಟ್ಟವರಿಗೆ 35 ಸಾವಿರ ರೂ. ಬಹುಮಾನ ನೀಡುವುದಾಗಿ ಮಾಲೀಕ ಘೋಷಣೆ ಮಾಡಿದ್ದಾನೆ.
ಇಂಥ ಅಪರೂಪದ ಘಟನೆ ನಡೆದಿರುವುದು ತಿಲಕ್ ನಗರದಲ್ಲಿ. ಜಯನಗರದ ನಿವಾಸಿ ಮಿಸ್ಬಾ ಷರೀಫ್ ಬೆಕ್ಕು ಕಾಣೆಯಾಗರುವ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪರ್ಷಿಯಾ ಮೂಲದ ದುಬಾರಿ ಬೆಕ್ಕು ಜ. 15 ರಿಂದ ಕಾಣೆಯಾಗಿದೆ. ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕು ಕಳ್ಳತನ ಮಾಡಿದ್ದಾರೆ.
ಆರೋಪಿಗಳನ್ನು ಪತ್ತೆ ಮಾಡಿ ನನ್ನ ಬೆಕ್ಕು ಹುಡುಕಿಕೊಡಿ. ಬೆಕ್ಕು ಹುಡುಕಿಕೊಡುವರಿಗೆ 35 ಸಾವಿರ ರೂ. ಬಹುಮಾನ ಕೂಡ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಮೊಲದ ಜತೆ ಬೆಕ್ಕು: ಬಿಳಿ ಬಣ್ಣದ ಪರ್ಷಿಯಾ ಮೂಲದ ಬೆಕ್ಕನ್ನು ಮಿಸ್ಪಾ ಷರೀಪ್ ಸಾಕಿದ್ದರು. ಇದರ ಜತೆ ಆಟ ಆಡಲು ಬಿಳಿ ಮೊಲ ಕೂಡ ಸಾಕಿದ್ದರು. ಎರಡೂ ಅನ್ಯೋನ್ಯವಾಗಿದ್ದವು. ಎರಡನ್ನು ಷರೀಫ್ ತನ್ನ ಮಕ್ಕಳಂತೆ ಸಾಕಿದ್ದರು. ಆದರೆ, ಇದ್ದಕ್ಕಿದ್ದಂತೆ ಜ. 15 ರಿಂದ ಪರ್ಷಿಯಾ ಮೂಲದ ಬೆಕ್ಕು ಕಾಣೆಯಾಗಿದೆ. ಇದರಿಂದ ಮೊಲ ಸರಿಯಾಗಿ ಊಟ ಮಾಡುತ್ತಿಲ್ಲ. ಹೀಗಾಗಿ ಬೆಕ್ಕನ್ನು ಹುಡುಕುವ ಕಾರ್ಯದಲ್ಲಿ ಮಿಸ್ಪಾ ತಲ್ಲೀನರಾಗಿದ್ದಾರೆ.