Breaking: ಚಿಕ್ಕಮಗಳೂರು, ಕಾರು ಸಮೇತ ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ
ಚಿಕ್ಕಮಗಳೂರು, ಆಗಸ್ಟ್ 09: ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅನಾಹುತಗಳು ವರದಿಯಾಗುತ್ತಲೇ ಇವೆ. ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಕೆರೆಯಲ್ಲಿ ಕಾರೊಂದು ಕೊಚ್ಚಿಹೋಗಿದೆ. ಸ್ಥಳೀಯರು ಸಕಾಲದಲ್ಲಿ ಕಾರಿನ ಕಿಟಕಿ ಗಾಜು ಒಡೆದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಜಿಲ್ಲೆಯಲ್ಲೇ ಅತಿ ದೊಡ್ಡದಾದ ಮತ್ತು ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯಾಗಿರುವ ಅಯ್ಯನಕೆರೆಗೆ ನಿರಂತರ ಮಳೆಯಿಂದ ನೀರು ತುಂಬಿದ್ದು, ಕೆರೆ ಕೋಡಿ ಬಿದ್ದಿದೆ. ಇದರ ನಡುವೆಯೇ ನೀರಿನಲ್ಲಿ ಕಾರು ಚಲಾಯಿಸಲು ಹೋಗಿ ಕಾರು ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು.
ನೀರಿನಿಂದಾಗಿ ಕಾರಿನ ಬಾಗಿಲುಗಳು ಜಾಮ್ ಆಗಿದ್ದವು. ಇದನ್ನು ಗಮನಿಸಿದ ಸ್ಥಳಿಯ ನಿವಾಸಿಗಳು ತಕ್ಷಣ ಕಾರಿನ ಕಿಟಕಿ ಗಾಜುಗಳನ್ನು ಹೊಡೆದು ಒಳಗೆ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಕಾರು ಸಖರಾಯಪಟ್ಟಣದ ನಿವಾಸಿಯದ್ದು ಎನ್ನಲಾಗಿದೆ.
ಸ್ಥಳೀಯ ವ್ಯಕ್ತಿಗಳಲ್ಲಿ ಒಬ್ಬರು ಜೆಸಿಬಿಗೆ ಕಟ್ಟಲಾದ ಹಗ್ಗವನ್ನು ಹಿಡಿದುಕೊಂಡು ಕಾರಿನ ಮೇಲೆ ಹತ್ತಿ ಲೋಹದ ಉಪಕರದಿಂದ ಕಾರಿನ ವಿಂಡ್ಶೀಲ್ಡ್ ಅನ್ನು ಒಡೆದು ಇಬ್ಬರನ್ನು ಹೊರಗೆ ಎಳೆದಿದ್ದಾರೆ.
ಇನ್ನು ನರಸಿಂಹರಾಜಪುರ ತಾಲ್ಲೂಕು ಸಾತ್ಕೋಳಿ ಗ್ರಾಮದ ಬಳಿ ಹಳ್ಳ ಪ್ರದೇಶದಲ್ಲಿ ಕಾರು ಕೊಚ್ಚಿ ಹೋಗಿದೆ. ಕಾರಿನಲ್ಲಿದ್ದ ಕಡಹಿನಬೈಲು ಗ್ರಾಮದ ಅರಶೀನಗೆರೆಯ ಪ್ರಸನ್ನ ಎನ್ನುವವರು ನೀರು ಪಾಲಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಅಲ್ಲಲ್ಲಿ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳ ಸರಣಿ ಮುಂದುವರೆಯುತ್ತಲೇ ಇವೆ.
Recommended Video
ಮಲೆನಾಡು ಭಾಗದಲ್ಲಿ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಇನ್ನು ಕೆಲವು ಕಡೆ ಭೂ ಕುಸಿತದಿಂದಾಗಿ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.