ಹೊಸ ವರ್ಷಾಚರಣೆ: ಬೆಂಗಳೂರು ಟೆಕ್ಕಿ, ಪುತ್ರಿ ಸಾವು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಕ್ರಾಸ್ ಬಳಿ (ರಾಷ್ಟ್ರೀಯ ಹೆದ್ದಾರಿ 63) ಗುರುವಾರ ಮಧ್ಯರಾತ್ರಿ ಈ ದುರಂತ ನಡೆದಿದೆ. ಬೆಂಗಳೂರಿನ ಸೆವಿಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿರುವ HSR Layout ನಿವಾಸಿ ವೆಂಕಟ ರಾಮಾನುಜಲು (32) ಹಾಗೂ ಅವರ ಮಗಳು ಶ್ರದ್ಧಾ ಮಹಾಲಕ್ಷ್ಮೀ (4) ದುರ್ಘಟನೆಯಲ್ಲಿ ಮೃತಪಟ್ಟವರು.
ಬೆಂಗಳೂರಿನ ಸಹರಾ ಇಂಡಿಯಾ ಸಾಫ್ಟ್ ವೇರ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಮೃತ ವೆಂಕಟ ರಾಮಾನುಜ ಅವರ ಪತ್ನಿ ವಿದ್ಯಾವೆಂಕಟ (30) ಹಾಗೂ ಈಕೆಯ ಸಹೋದರ ಮೈಸೂರಾರೆಡ್ಡಿ (27) ತೀವ್ರವಾಗಿ ಗಾಯಗೊಂಡಿದ್ದಾರೆ.
ಮೂಲತಹಃ ಆಂಧ್ರದವರಾದ ಇವರು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಗಳಲ್ಲಿ ನೌಕರಿಯಲ್ಲಿದ್ದರು. ನೂತನ ಸಂವತ್ಸರವನ್ನು ಆಚರಿಸುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಟಿದ್ದರು. ಶುಕ್ರವಾರ ಕಾರವಾರಕ್ಕೆ ಆಗಮಿಸಿ ಇಲ್ಲಿನ ಬೀಚ್ಗಳಲ್ಲಿ ವಿಹರಿಸಿ, ನಂತರ ದಕ್ಷಿಣ ಗೋವಾ ಹಾಗೂ ಉತ್ತರ ಗೋವಾದಲ್ಲಿ ಪ್ರವಾಸ ಕೈಗೊಳ್ಳುವ ಯೋಜನೆ ಹೊಂದಿದ್ದರು.
ವೆಂಕಟ ರಾಮಾನುಜಲು ಅವರ ಕುಟುಂಬ ಕಾರಿನಲ್ಲಿ ಹುಬ್ಬಳ್ಳಿ ಮಾರ್ಗವಾಗಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದರು. ಆದರೆ ಕುಂದಾಪುರ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.