ಶಿರಾಡಿಘಾಟ್ ಭೀಕರ ಸರಣಿ ಅಪಘಾತಕ್ಕೆ 3 ಟೆಕ್ಕಿಗಳು ಬಲಿ
ಬೆಂಗಳೂರಿನ ಡೆಲ್ ಕಂಪನಿ ನೌಕರರಾದ ಪ್ರದೀಪ್ (33), ಗೋಪಾಲ ರಾವ್ (28) ಮತ್ತು ಸಿದ್ರಾಮಪ್ಪ ಮೃತಪಟ್ಟ ರ್ದುದೈವಿಗಳು. ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಶ್ರಿನಗರದ ರಾಘವೇಂದ್ರ ಬ್ಲಾಕ್ ನಿವಾಸಿ ನಿತಿನ್ ಚಂದ್ರ ಅತ್ಯಾಶ್ಚರ್ಯಕರ ರೀತಿಯಲ್ಲಿ ಯಾವುದೆ ಗಾಯಗಳಿಲ್ಲದೆ ಪಾರಾಗಿದ್ದಾರೆ!
ಅಪಘಾತದ ವೃತ್ತಾಂತ ಹೀಗಿದೆ: ಅಪಘಾತದ ವೃತ್ತಾಂತ ಕೇಳಿದರೆ ಮೃತಪಟ್ಟವರ ವಿವೇಚನಾರಹಿತ ಪ್ರಯಾಣವೇ ಅವರ ಅಂತಿಮ ಪ್ರಯಾಣಕ್ಕೂ ಕಾರಣವೆನ್ನಬಹುದು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರಿಗೆ ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಜೆಸಿಬಿ ಯಂತ್ರವನ್ನು ಬಳಸಿ ಕಾರು ಹಾಗೂ ಲಾರಿಯನ್ನು ಬೇರ್ಪಡಿಸಲಾಗಿದೆ. ಅಪಘಾತ ಅಷ್ಟೊಂದು ತೀವ್ರವಾಗಿತ್ತು.
ಏನಾಯಿತೆಂದರೆ ವಾರಾಂತ್ಯದ ರಜೆಯಲ್ಲಿ ಮಂಗಳೂರಿನಲ್ಲಿರುವ ಸ್ನೇಹಿತರ ಮನೆಗೆ ಬೆಂಗಳೂರಿನ Dell ಕಂಪನಿಯ ಈ ಮೂರೂ ಟೆಕ್ಕಿಗಳು ಹೊರಟಿದ್ದರು. ಶುಕ್ರವಾರ ಕೆಲಸ ಮುಗಿಸಿಕೊಂಡು ಬೆಂಗಳೂರಿನಿಂದ ರಾತ್ರಿ ಹೊರಟು ಮುಂಜಾನೆ ಮಂಗಳೂರು ತಲುಪುವ ಉದ್ದೇಶವಿತ್ತು.
ಆದರೆ ಹಾಸನ ಗಡಿ ದಾಟಿ ಕೆಂಪುಹೊಳೆ ಸಮೀಪ ಮುಂದೆ ಹೋಗುತ್ತಿದ್ದ ಕಾರೊಂದನ್ನು ಟೆಕ್ಕಿಗಳಿದ್ದ ಕಾರು ಹಿಂದಿಕ್ಕಿ ಮುಂದೆ ಸಾಗುವ ಭರದಲ್ಲಿ ಎದುರಗಡೆಯಿಂದ ಬಂದ ಸಿಮೆಂಟ್ ಮಿಕ್ಸಿಂಗ್ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಅದೇ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಕಾರು ಕೂಡ ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.