ಡಿ.ಆರ್ ಪರೀಕ್ಷೆ ಬರೆಯಲು ಮತ್ತೆ ಅವಕಾಶ : ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 05 : ಜಿಲ್ಲಾ ಮೀಸಲು ಪಡೆ (ಡಿ.ಆರ್) ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ರೈಲು ವಿಳಂಬವಾಗಿದ್ದರಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು.
ಈ ಕುರಿತು ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ. ಸೋಮವಾರ ಅಥವ ಮಂಗಳವಾರ ಮರು ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಅಭ್ಯರ್ಥಿಗಳು ಪ್ರತಿಭಟನೆ ನಡೆಸುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಬೆಳಗಾವಿ, ಧಾರವಾಡ ಜಿಲ್ಲೆಗಳಿಂದ ನೂರಾರು ಅಭ್ಯರ್ಥಿಗಳು ಚಿಕ್ಕಮಗಳೂರು, ತುಮಕೂರು, ಬೆಂಗಳೂರಿಗೆ ಡಿ.ಆರ್. ಪರೀಕ್ಷೆ ಬರೆಯಲು ರಾಣಿ ಚೆನ್ನಮ್ಮ ರೈಲಿನಲ್ಲಿ ಆಗಮಿಸುತ್ತಿದ್ದರು. ಆದರೆ, ರೈಲು ಬೆಂಗಳೂರು ತಲುಪಲು ವಿಫಲವಾಗಿದ್ದರಿಂದ ಅಭ್ಯರ್ಥಿಗಳು ಇಂದು ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಲು ಸಾಧ್ಯವಾಗಿಲ್ಲ.
ರೈಲು ವಿಳಂಬ : ಶನಿವಾರ ಮಧ್ಯಾಹ್ನ ಕೊಲ್ಲಾಪುರದಿಂದ ಹೊರಟಿದ್ದ ರಾಣಿ ಚೆನ್ನಮ್ಮ ರೈಲು ಭಾನುವಾರ ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಧಾರವಾಡದ ಕುಂಬಾರಗಣವಿ ಬಳಿ ಗೂಡ್ಸ್ ರೈಲು ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು.
ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಪೊಲೀಸ್ ಡಿಎಆರ್ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಈ ರೀತಿ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೆ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ.
— CM of Karnataka (@CMofKarnataka) August 5, 2018
ಆದ್ದರಿಂದ, ಗೂಡ್ಸ್ ರೈಲನ್ನು ತೆರವುಗೊಳಿಸಲು ರಾಣಿ ಚೆನ್ನಮ್ಮ ರೈಲಿನ ಎಂಜಿನ್ ಬಳಕೆ ಮಾಡಲಾಯಿತು. ಗೂಡ್ಸ್ ರೈಲನ್ನು ಧಾರವಾಡ ಸ್ಟೇಷನ್ಗೆ ಬಿಟ್ಟು ಚೆನ್ನಮ್ಮ ರೈಲಿನ ಬೋಗಿ ವಾಪಸ್ ಬರುವಾಗ ಮುಂಜಾನೆ 4 ಗಂಟೆ ಆಯಿತು.
ಧಾರವಾಡದಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ರೈಲಿಗಾಗಿ ಕಾಯುತ್ತಿದ್ದರು. ರೈಲು ವಿಳಂಬವಾಗಿದ್ದರಿಂದ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗ ಕುಮಾರಸ್ವಾಮಿ ಅವರು ಮರು ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.