ಕನ್ನಡದಲ್ಲಿ ಸೇವೆ ಕೇಳಿದ್ದಕ್ಕೆ ಹೊರದಬ್ಬಿದ್ದನಂತೆ ಬ್ಯಾಂಕ್ ಮ್ಯಾನೇಜರ್
ಬೆಂಗಳೂರು, ಆಗಸ್ಟ್ 4: ಕರ್ನಾಟಕದ ಬ್ಯಾಂಕುಗಳು ಯಾವ ಭಾಷೆಯಲ್ಲಿ ಸೇವೆ ನೀಡಬೇಕು? ಕನ್ನಡವೇ ಅಥವಾ ಹಿಂದಿ ಭಾಷೆಯಲ್ಲಿಯೇ? ಈಗಾಗಲೇ ಬಹುತೇಕ ಬ್ಯಾಂಕುಗಳಲ್ಲಿ ಹಿಂದಿ ಭಾಷಿಕ ಅಧಿಕಾರಿಗಳು ತುಂಬಿಕೊಳ್ಳುತ್ತಿದ್ದು, ಮುಂದೆ ಕನ್ನಡಿಗರು ಹಿಂದಿ ಕಲಿತು ಬ್ಯಾಂಕ್ ವ್ಯವಹಾರ ನಡೆಸುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.
ರಾಜ್ಯದ ಗ್ರಾಮೀಣ ಪ್ರದೇಶದ ಬ್ಯಾಂಕ್ಗಳಲ್ಲಿಯೂ ಹಿಂದಿ ಭಾಷಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಕನ್ನಡದಲ್ಲಿ ಸೇವೆ ಕೇಳುವವರ ವಿರುದ್ಧ ದಾರ್ಷ್ಟ್ಯ ಪ್ರದರ್ಶಿಸುತ್ತಿದ್ದಾರೆ. ಹಿಂದಿಯಲ್ಲಿ ಮಾತನಾಡುವಂತೆ ದಬ್ಬಾಳಿಕೆ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಹಿಂದಿ ಏರಿಕೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷಿಕರಲ್ಲಿ ಗಣನೀಯ ಇಳಿಕೆ
ಶಿವಮೊಗ್ಗದ ಕೆನರಾ ಬ್ಯಾಂಕ್ನ ಮ್ಯಾನೇಜರ್ ಒಬ್ಬಾತ ಕನ್ನಡದಲ್ಲಿ ಸೇವೆ ಕೇಳಿದ ಗ್ರಾಹಕನನ್ನು ಹೊರದಬ್ಬಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿರುವುದು ಕನ್ನಡಪರ ಹೋರಾಟ ನಡೆಸುವ ಜನರಲ್ಲಿ ಆಕ್ರೋಶ ಮೂಡಿಸಿದೆ.
ಕೋಲ್ಕತಾದ ಬಾರಕ್ಪುರದ ಅರ್ಘ ಸಮಂತ ಎಂಬುವವರು ಕೆನರಾ ಬ್ಯಾಂಕ್ನ ಶಿವಮೊಗ್ಗದ ಶಾಖೆಯೊಂದರಲ್ಲಿ ಮ್ಯಾನೇಜರ್ ಆಗಿದ್ದು, ತಾನು ಕನ್ನಡದಲ್ಲಿ ಸೇವೆ ಕೇಳಿದ ಗ್ರಾಹಕನನ್ನು ಹೊರದಬ್ಬಿದ್ದಾಗಿ ಹೇಳಿಕೊಂಡಿದ್ದಾನೆ.
ಹಿಂದಿಯನ್ನು ಗರಿಷ್ಠ ಸಂಖ್ಯೆಯ ಜನರು ಮಾತನಾಡುತ್ತಾರೆ. ನೀವು ದಕ್ಷಿಣ ಭಾರತೀಯರು ಹಿಂದಿ ವಿರೋಧಿಗಳು. ಕನ್ನಡ ಮಾತನಾಡುವಂತೆ ನನಗೆ ಒತ್ತಾಯ ಮಾಡಿದ ವ್ಯಕ್ತಿಯನ್ನು ನಾನು ಹೊರಗೆ ದಬ್ಬಿದ್ದೆ ಎಂದು ಆತ ಫೇಸ್ಬುಕ್ನಲ್ಲಿ ದರ್ಪದಿಂದ ಹೇಳಿಕೊಂಡಿದ್ದಾನೆ.
'ಮಾಲ್' ಕನ್ನಡ ಓದಿ ನಗುವುದೋ ಅಳುವುದೋ ನೀವೇ ಹೇಳಿ
ಇದು ಕನ್ನಡಪರ ಮನಸ್ಸುಗಳನ್ನು ಕೆರಳಿಸಿದೆ. ಕರ್ನಾಟಕದವರೇ ಸ್ಥಾಪಿಸಿದ ಬ್ಯಾಂಕ್ಗಳಲ್ಲಿ ಉತ್ತರ ಭಾರತೀಯರು ಬಂದು ಸೇರಿಕೊಳ್ಳುತ್ತಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡದಲ್ಲಿ ಕಲಿಯದ ಅವರು, ಹಿಂದಿಯಲ್ಲಿ ಮಾತನಾಡುವಂತೆ ಗ್ರಾಹಕರ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕನ್ನಡದಲ್ಲಿ ಸೇವೆ ಒದಗಿಸಬೇಕಾದ ಕೆನರಾಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಪ್ರಕಾಶ್ ಬೆಳವಾಡಿ
ಇದು ನಿಮ್ಮ ರಾಷ್ಟ್ರೀಯ ಏಕೀಕರಣದ ಯೋಜನೆಯೇ ಎಂದು ಹಿರಿಯ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಕೆನರಾ ಬ್ಯಾಂಕ್ಅನ್ನು ಪ್ರಶ್ನಿಸಿದ್ದಾರೆ.
ವರ್ಷಿಕ್ ಗೌಡ
ಕೆಲವು ಉಡಗಳು ಮೈಯೆಲ್ಲಾ ವಿಷ ತುಂಬಿಕೊಂಡು ಕರ್ನಾಟಕದಲ್ಲಿಯೇ ಚಿಕಿತ್ಸೆ ಪಡೆಯಲು ಬಂದಿರುತ್ತವೆ ಎಂದು ವರ್ಷಿಕ್ ಗೌಡ, ಸಮಂತ ವಿರುದ್ಧ ಕಿಡಿಕಾರಿದ್ದಾರೆ.
ನವೀನ್ ಭಾರತಿ
ಶಿವಮೊಗ್ಗದ ಶಾಖೆಯಲ್ಲಿ ಕನ್ನಡದಲ್ಲಿ ಸೇವೆ ನೀಡುವಂತೆ ಕೋರಿದ ಗ್ರಾಹಕನನ್ನು ಹೊರಹಾಕಿದ್ದಾಗಿ ಕೆನರಾ ಬ್ಯಾಂಕ್ನ ಮ್ಯಾನೇಜರ್ ಅರ್ಘ ಸಮಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಕೆನರಾ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಇದೇ ಏನು? ಎಂದು ನವೀನ್ ಭಾರತಿ ಪ್ರಶ್ನಿಸಿದ್ದಾರೆ.
ವಸಂತ್ ಶೆಟ್ಟಿ
ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಕೇಳಿದ ಕನ್ನಡಿಗನನ್ನು ಬ್ಯಾಂಕಿನಿಂದ ಹೊರದಬ್ಬಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಈತನಿಗೆ ಸಾಧ್ಯ. ಯಾಕೆ ಅಂತೀರಾ? ಯಾಕೆಂದರೆ ನಮಗೆ ಹಿಡಿದಿರುವ ಜಾತಿ, ಧರ್ಮದ ಅಮಲಿನಲ್ಲಿ ಇವೆಲ್ಲ ನಮಗೆ ವಿಷಯಗಳೇ ಅಲ್ಲ ಎಂದು ಅಂಕಣಕಾರ ವಂಸತ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುಹೃತ್ ಯಜಮಾನ್
ಕರ್ನಾಟಕದಲ್ಲಿ, ಕನ್ನಡ ಗ್ರಾಹಕರು, ಕನ್ನಡದಲ್ಲಿ ಸೇವೆ ಕೇಳಿದ್ದಕ್ಕೆ, ಒದ್ದು ಹೊರಗೆ ಹಾಕಿದೆ ಅಂತ ಹೇಳುತ್ತಿರುವುದು ನೋಡಿ.. ಹಿಂದಿ ಇದ್ರೆ ಏನಿವಾಗ ಅಂತ ಬಿಟ್ಟರೆ ಕಡೆಗೆ ಆಗೋದು ಹೀಗೆ.
ಬಂಗಾರಪೇಟೆಯಲ್ಲೂ ಇದೇ ಅನುಭವ
ಕೋಲಾರ ಜಿಲ್ಲೆಯ ಬಂಗಾರ ಪೇಟೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿಯೂ ಹಿಂದಿ ಅಧಿಕಾರಿಗಳು ದರ್ಪ ತೋರಿಸಿದ ಘಟನೆ ವರದಿಯಾಗಿದೆ.
ಬಂಗಾರಪೇಟೆಯ ನಿವಾಸಿ ಪ್ರಸನ್ನಕುಮಾರ್ ಹಣ ಪಾವತಿಸಲು ಬ್ಯಾಂಕ್ಗೆ ತೆರಳಿದ್ದರು. ಅಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಚಲನ್ ಲಭ್ಯವಿತ್ತು. ಕನ್ನಡದಲ್ಲಿ ಚಲನ್ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಕ್ಕೆ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ಇರುವುದು ಕರ್ನಾಟಕದಲ್ಲಿ, ಕನ್ನಡ ಕಲಿಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ.
|
ಕನ್ನಡಿಗರಲ್ಲಿ ಸ್ವಾಭಿಮಾನವಿಲ್ಲವೇ?
ಬ್ಯಾಂಕ್ಗಳಲ್ಲಿ ಕನ್ನಡ ಬಾರದ ಸಿಬ್ಬಂದಿಯೊಂದಿಗೆ ಹರಕು-ಮುರುಕು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ವ್ಯವಹರಿಸಲು ಕನ್ನಡಿಗರು ಬೇಸರಪಟ್ಟುಕೊಳ್ಳುವುದಿಲ್ಲ. ತಾವಿರುವುದು ಕರ್ನಾಟಕದಲ್ಲಿ. ಇಲ್ಲಿ ನಮ್ಮ ಭಾಷೆ ಬಾರದ ವ್ಯಕ್ತಿ ಜತೆ ನಮ್ಮ ಕೆಲಸಕ್ಕಾಗಿ ಹಿಂದಿಯಲ್ಲಿ ಮಾತನಾಡಬೇಕು ಎಂಬ ಪ್ರಶ್ನೆಯೂ ಅವರಲ್ಲಿ ಮೂಡುವುದಿಲ್ಲ.
ಹಿಂದಿಯಲ್ಲಿ ಮಾತನಾಡಿ ಎಂಬ ದರ್ಪದ ಮಾತುಗಳಿಗೆ ಭಾಷಾಭಿಮಾನದಿಂದ ಪ್ರಶ್ನಿಸುವ ಧೈರ್ಯವನ್ನೂ ಮಾಡುವುದಿಲ್ಲ. ನಮಗೇಕೆ ಬೇಕು ಈ ರಗಳೆ ಎಂದು ಸುಮ್ಮನಾಗುವವರೇ ಹೆಚ್ಚು. ಹಾಗೆಯೇ ಕನ್ನಡದಲ್ಲಿ ಕೊಡಿ ಎಂದು ಸಿಟ್ಟಿಗೆದ್ದ ಗ್ರಾಹಕರನ್ನು ಸುಮ್ಮನಾಗಿಸುವುದಕ್ಕೇ ಮುಂದಾಗುತ್ತಾರೆಯೇ ಹೊರತು ಬ್ಯಾಂಕ್ ಸಿಬ್ಬಂದಿಯ ವಿರುದ್ಧ ತಿರುಗಿಬೀಳುವ ಸ್ವಾಭಿಮಾನ ತೋರುವುದಿಲ್ಲ. ಇದಕ್ಕೆ ಬಂಗಾರಪೇಟೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ ಘಟನೆಯೇ ಉದಾಹರಣೆ.
ಹಿಂದಿ ರಾಷ್ಟ್ರಭಾಷೆ ಅಲ್ಲ
ಹಿಂದಿ ರಾಷ್ಟ್ರಭಾಷೆ ಎಂದು ಅನೇಕ ವರ್ಷಗಳಿಂದ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಭಾರತದ ಸಂವಿಧಾನದಲ್ಲಿ ಅಥವಾ ಸರ್ಕಾರಿ ಆಡಳಿತದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಗಣರಾಜ್ಯದಲ್ಲಿ ಪ್ರತಿಯೊಂದು ಭಾಷೆಯೂ ಅಧಿಕೃತ ಮಾನ್ಯತೆ ಪಡೆದುಕೊಂಡಿವೆ.
ಕನ್ನಡದಂತೆಯೇ ಹಿಂದಿ ಕೂಡ ಒಂದು ಭಾಷೆಯಷ್ಟೇ. ಉತ್ತರ ಭಾರತದಲ್ಲಿ ಹೆಚ್ಚಿನ ಜನರು ಹಿಂದಿ ಮಾತನಾಡುತ್ತಾರೆ ಎನ್ನುವುದಷ್ಟೇ ಅದಕ್ಕೆ ಮಾನ್ಯತೆ ಸಿಗಲು ಕಾರಣ ಎಂಬುದನ್ನು ಕನ್ನಡಪರ ಹೋರಾಟಗಾರರು ಮನವರಿಕೆ ಮಾಡುತ್ತಿದ್ದರೂ, ಅನೇಕರು ಹಿಂದಿ ರಾಷ್ಟ್ರಭಾಷೆ ಎಂದೇ ನಂಬಿದ್ದಾರೆ. ಹೀಗಾಗಿ ಕನ್ನಡ ಮಾತನಾಡುವಂತೆ ದನಿ ಎತ್ತುವವರನ್ನು, 'ಹಿಂದಿ ರಾಷ್ಟ್ರಭಾಷೆ. ಅದರಲ್ಲಿ ಮಾತನಾಡಿದರೆ ತಪ್ಪೇನು' ಎಂದು ಕನ್ನಡಿಗರೇ ಪ್ರಶ್ನಿಸುವ ದುರಂತ ಸನ್ನಿವೇಶ ಇದೆ.