ಮೈತ್ರಿ ಸರಕಾರ ಸರಿದೂಗಿಸಲು ದೇಶಪಾಂಡೆ ಅಂಥವರು ಸಿಎಂ ಆಗಬೇಕಾ?
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಮುಂದುವರಿಸಲು ಇನ್ನೇನಾದರೂ ಅವಕಾಶ ಇದೆಯಾ? ಆ ಬಗ್ಗೆ ಒಂದು ವಿಶ್ಲೇಷಣಾತ್ಮಕ ದೃಷ್ಟಿಯಲ್ಲಿ ನೋಡುವ ಲೇಖನವಿದು. ಏಕೆಂದರೆ, ಈ ಮೈತ್ರಿ ಸರಕಾರದ ಮುಖ್ಯ ತಲೆಗಳಾದ ಜೆಡಿಎಸ್ ನ ದೇವೇಗೌಡರು ಹಾಗೂ ಕಾಂಗ್ರೆಸ್ ನ ಸಿದ್ದರಾಮಯ್ಯ ಇಬ್ಬರೂ ಒಪ್ಪಬಹುದಾದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾದರೆ ಸಮಸ್ಯೆ ನಿವಾರಣೆ ಆಗಬಹುದಲ್ಲವೆ?
ಅಷ್ಟೇ ಆದರೆ ಸಾಲದು. ಜತೆಗೆ ಎರಡೂ ಪಕ್ಷಗಳ ಅಸಮಾಧಾನಿತರು ಮುನಿಸು ಕರಗಬೇಕು. ಇನ್ನು ಬಿಜೆಪಿ ಕಡೆಗೆ ಒಲಿದವರಿಗೆ ಈಗಿನ ಮೈತ್ರಿ ಸರಕಾರ ಮುಂದುವರಿಯಬಹುದು ಎಂದು ಪ್ರಬಲವಾಗಿ ಅನ್ನಿಸಬೇಕು. ಹಾಗಿದ್ದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡರಿಂದಲೂ ಒಪ್ಪಿಗೆ ಆಗುವಂಥ ಅಭ್ಯರ್ಥಿಯೊಬ್ಬರು ಮೈತ್ರಿ ಸರಕಾರಕ್ಕೆ ಮುಖ್ಯಮಂತ್ರಿಯಾಗಿ ಸಿಗುತ್ತಾರಾ?
ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?
ಹಾಗೆ ಹುಡುಕಿದರೆ ಆರ್.ವಿ.ದೇಶಪಾಂಡೆಯಂಥವರನ್ನು ಜೆಡಿಎಸ್ -ಕಾಂಗ್ರೆಸ್ ಎರಡರಿಂದಲೂ ಒಪ್ಪಿಕೊಳ್ಳುವ ಸಾಧ್ಯತೆಗಳಿವೆ. ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲು ದೇವೇಗೌಡರು ಒಪ್ಪಬಹುದಾದರೂ ಸಿದ್ದರಾಮಯ್ಯ ಒಪ್ಪಿಕೊಳ್ಳುವುದು ಅಸಾಧ್ಯ. ಏಕೆಂದರೆ, ಇವರಿಬ್ಬರ ಪೈಕಿ ಯಾರೇ ಗಾದಿಗೆ ಬಂದರೂ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಇದ್ದಿದ್ದೇ.
ಇನ್ನು ರಾಮಲಿಂಗಾ ರೆಡ್ಡಿ ಹಿಂದಿರುವ ಶಾಸಕರ ಬೇಡಿಕೆಗಳನ್ನು ಈಡೇರಿಸಿದರೆ ಈಗಿನ ಸಮಸ್ಯೆಗಳ ಪೈಕಿ ಮುಕ್ಕಾಲು ಭಾಗ ನಿವಾರಣೆ ಆದಂತೆಯೇ ಆಗುತ್ತದೆ. ಏಕೆಂದರೆ ಪರಮೇಶ್ವರ್ ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಮೇಲೆ ದೇವೇಗೌಡರಿಗೆ ಮತ್ತು ಅವರ ಕುಟುಂಬಕ್ಕೆ ಬೇಕಾದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಾರೆ ಎಂಬ ಆರೋಪ ಇದೆ.
ಆದರೆ, ಬೆಂಗಳೂರು ಉಸ್ತುವಾರಿ ಸ್ಥಾನ ತ್ಯಾಗ ಮಾಡಲು ಪರಮೇಶ್ವರ್ ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಇದೆ. ಈ ವಿಚಾರದಲ್ಲಿ ಹೈ ಕಮಾಂಡ್ ಸೂಚನೆ ನೀಡಿ, ಪರಮೇಶ್ವರ್ ನ ಒಪ್ಪಿಸಿದರೆ ಸಿದ್ದರಾಮಯ್ಯ ಅವರ ಉದ್ದೇಶ ಅರ್ಧದಷ್ಟು ಈಡೇರಿದಂತಾಗುತ್ತದೆ. ಇನ್ನು ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಿದರೆ ಅಲ್ಲಿಗೆ ಪೂರ್ಣ ಪ್ರಮಾಣದಲ್ಲಿ ಗುರಿ ತಲುಪಿದಂತಾಗುತ್ತದೆ.
ಬಂಡಾಯ ಎದ್ದಿರುವ ಬೆಂಗಳೂರಿನ ಶಾಸಕರನ್ನೇನೋ ಸಮಾಧಾನಪಡಿಸಬಹುದು. ಆದರೆ ರಮೇಶ್ ಜಾರಕಿಹೊಳಿ ಇತರರು ಹಾಗೂ ವಿಶ್ವನಾಥ್ ಮತ್ತಿತರರ ಕಥೆ ಏನು? ಆದ್ದರಿಂದಲೇ ಆರಂಭದಲ್ಲಿ ಹೇಳಿದ್ದು ಎಲ್ಲವನ್ನೂ- ಎರಡೂ ಪಕ್ಷವನ್ನೂ ಸರಿದೂಗಿಸಿಕೊಂಡು ಹೋಗುವವರನ್ನು ಮುಖ್ಯಮಂತ್ರಿ ಮಾಡುವುದು ಉತ್ತಮ. ಆದರೆ ಇದು ಶಾಶ್ವತ ಪರಿಹಾರ ಆಗಬಹುದಾ? ಅದು ಕೂಡ ಅನುಮಾನವೇ.