ಯೋಗಿಯಾಗಲು ಬಿಎಲ್ ಸಂತೋಷ್ಗೆ ಏಕೆ ಸಾಧ್ಯವಿಲ್ಲ?
ಈ ವಾದವಿವಾದಗಳು, ಒಳಜಗಳ, ಮುಸುಕಿನ ಗುದ್ದಾಟಗಳು, ಆರೋಪಪ್ರತ್ಯಾರೋಪಗಳೇನೇ ಇರಲಿ, ಇವರು ಯಾರು ಎಂದರೇನೇ ಸಾಮಾನ್ಯ ಜನತೆಗೆ ಗೊತ್ತಿರದ ಬಿಎಲ್ ಸಂತೋಷ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಾಧ್ಯವೆ?
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಇಂಥದೊಬ್ಬ ಮುಖ್ಯಮಂತ್ರಿ ಅಥವಾ ನಾಯಕ ಬೇಕು ಎಂಬ ವಾದ ಸಹಜವಾಗಿ ಎದ್ದಿದೆ.
ರೈತರ ಸಾಲ ಮನ್ನಾ ಮಾಡಿದ್ದು, ಅಕ್ರಮ ಗೋಹತ್ಯೆಗೆ ಕಡಿವಾಣ ಹಾಕಿದ್ದು, ಮಂತ್ರಿಗಳು ಕಾರಿನ ಮೇಲಿನ ಕೆಂಪು ದೀಪ ಕಿತ್ತುಹಾಕುವಂತೆ ಮಾಡಿದ್ದು, ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿದ್ದು, ಪಾನ್ ಮಸಾಲಾ ಗುಟ್ಕಾ ರದ್ದು ಮಾಡಿದ್ದು, ಖಾಸಗಿ ಟ್ಯೂಷನ್ ವಿರುದ್ಧ ತಿರುಗಿಬಿದ್ದಿದ್ದು... ಒಂದಾ ಎರಡಾ...[ಸಂತೋಷ್ ಗೆ ಅಧಿಕಾರ ಬೇಕಿಲ್ಲ, ಬಿಜೆಪಿ ಬಿಕ್ಕಟ್ಟಿನ ಅಸಲಿ ಕಾರಣ ಏನು?]
ಯೋಗಿ ಆದಿತ್ಯನಾಥ್ ಅವರನ್ನು ಮೀರಿಸುವಂಥ ನಾಯಕ ಕರ್ನಾಟಕದಲ್ಲಿ ಯಾರಿದ್ದಾರೆ. ಈ ಸಂದರ್ಭದಲ್ಲಿ ಸಹಜವಾಗಿ ಗಮನ ಹೊರಳಿದ್ದು ಕರ್ನಾಟಕದಲ್ಲಿ ಬಿಜೆಪಿ ಸಂಘಟನೆಯ ಹೊಣೆ ಹೊತ್ತಿರುವ ಆರೆಸ್ಸೆಸ್ ಪ್ರಚಾರಕ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಕನ್ನಡಿಗ ಬಿಎಲ್ ಸಂತೋಷ್ ಅವರ ಕಡೆಗೆ.[ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!]
ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದರೂ, ಸಂತೋಷ್ ಅವರ ಹೆಸರು ಕೂಡ ಮುಖ್ಯಮಂತ್ರಿ ಪಟ್ಟಕ್ಕೆ ಚಾಲನೆಯಲ್ಲಿ ಬಂದಿದ್ದು ಯಡಿಯೂರಪ್ಪನವರನ್ನು ಭಾರೀ ಇರುಸುಮುರುಸು ಮಾಡಿದೆ. ತಮ್ಮ ವಿರುದ್ಧ ಈಶ್ವರಪ್ಪ ಅವರನ್ನು ಸಂತೋಷ್ ಅವರೇ ಎತ್ತಿಕಟ್ಟುತ್ತಿದ್ದಾರೆ ಎಂದು ಯಡಿಯೂರಪ್ಪ ನೇರವಾಗಿ ದೂರಿರುವುದು ಭಾರೀ ವಿವಾದಕ್ಕೂ ಕಾರಣವಾಗಿದೆ.[ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ]
ಈ ವಾದವಿವಾದಗಳು, ಒಳಜಗಳ, ಮುಸುಕಿನ ಗುದ್ದಾಟಗಳು, ಆರೋಪಪ್ರತ್ಯಾರೋಪಗಳೇನೇ ಇರಲಿ, ಇವರು ಯಾರು ಎಂದರೇನೇ ಸಾಮಾನ್ಯ ಜನತೆಗೆ ಗೊತ್ತಿರದ ಬಿಎಲ್ ಸಂತೋಷ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಸಾಧ್ಯವೆ? ಆ ವರ್ಚಸ್ಸು ಅವರಲ್ಲಿದೆಯೆ? ಯೋಗಿ ಆದಿತ್ಯನಾಥ್ ಅವರನ್ನು ಮೀರಿಸಲು ಇವರಿಗೆ ಸಾಧ್ಯವೆ? [ಬಿಜೆಪಿ ಬಿಕ್ಕಟ್ಟಿಗೆ ಸಂತೋಷ್ ಜೀ ಮೇಲೆ ಗೂಬೆ ಕೂರಿಸಿದ ಯಡಿಯೂರಪ್ಪ]
ಬಿಎಲ್ ಸಂತೋಷ್ ಯಾರು?
ಬೆಂಗಳೂರಿನ ಆರ್ಬಿಎಎನ್ಎಂಎಸ್ ಹೈಸ್ಕೂಲಿನಲ್ಲಿ ಓದಿ, ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿಪರ ಪದವಿಯನ್ನು ಗಳಿಸಿರುವ ಸಂತೋಷ್ ಅವರು ಕರ್ನಾಟಕ ರಾಜಕಾರಣದಲ್ಲಿ ಎಂದೂ ಸಕ್ರೀಯರಾಗಿ ಭಾಗವಹಿಸಿಲ್ಲ. ತೆರೆಯ ಮರೆಯಲ್ಲಿಯೇ ಉಳಿದು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡವರು.
ಸಂತೋಷ್ ಅವರಿಗೆ ಸಿಟಿ ರವಿ ಬೆಂಬಲ
ಯಾವುದೇ ಸ್ವಾರ್ಥ ರಾಜಕಾರಣ ಮಾಡದ, ದೇಶದ ಔನ್ನತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ, ತೆರೆಯ ಮರೆಯಲ್ಲಿಯೇ ಉಳಿದುಕೊಂಡು ಸಮಾಜಸೇವೆ ಮಾಡುತ್ತಿರುವ ಸಂತೋಷ್ ಅವರ ಬೆಂಬಲಕ್ಕೆ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ನಿಂತಿದ್ದಾರೆ. ಸಂತೋಷ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಅರ್ಹರು ಎಂದು ಸಿಟಿ ರವಿ ಹೇಳಿ ಹಲವರಿಗೆ ಅಚ್ಚರಿ ಮೂಡಿಸಿದ್ದಾರೆ.
ಯಡಿಯೂರಪ್ಪನವರನ್ನು ಕೆಣಕಿರುವುದು ಇದೇ
ಸಂತೋಷ್ ಅವರ ಹೆಸರು ಕೇಳಿಬರುತ್ತಿದ್ದಂತೆ ಕೆಂಡಾಮಂಡಲವಾಗಿರುವ ಯಡಿಯೂರಪ್ಪನವರು ಸಂತೋಷ್ ವಿರುದ್ಧ ಹರಿಹಾಯ್ದಿದ್ದಾರೆ. ಕರ್ನಾಟಕ ಬಿಜೆಪಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಬಿಎಲ್ ಸಂತೋಷ್ ಅವರೇ ನೇರ ಕಾರಣ ಎಂದು ವಾಗ್ದಾಳಿ ಮಾಡಿದ್ದಾರೆ. ಈ ಬಂಡಾಯದ ಹಿಂದಿನ ಮಾಸ್ಟರ್ ಮೈಂಡ್ ಬಿಎಲ್ ಸಂತೋಷ್ ಎಂದು ಯಡಿಯೂರಪ್ಪ ದೂರಿದ್ದಾರೆ.
ಸಂತೋಷ್ ಬೆಂಬಲಕ್ಕೆ ನಿಂತ ಈಶ್ವರಪ್ಪ
ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ, ಸಂತೋಷ್ ಅವರ ಬೆಂಬಲಕ್ಕೆ ಧಾವಿಸಿರುವ ಕೆಎಸ್ ಈಶ್ವರಪ್ಪ ಅವರು, ಇಂಥ ಆರೋಪ ಹೊರಿಸಿದ್ದಕ್ಕೆ ಯಡಿಯೂರಪ್ಪನವರು ಸಂತೋಷ್ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಆಯ್ಕೆ ಮಾಡುವುದು ದೆಹಲಿಯಲ್ಲಿರುವ ಹಿರಿಯರು, ಯಡಿಯೂರಪ್ಪನವರಲ್ಲ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಬದಲಿಗೆ ಸಂತೋಷ್?
ಸಂತೋಷ್ ಅವರ ಸಂಘಟನಾ ಚಾತುರ್ಯದ ಬಗ್ಗೆ ಎರಡು ಮಾತೇ ಇಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ದೊರೆತರೆ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಯಡಿಯೂರಪ್ಪ ಅವರ ಬದಲಿಗೆ ಸೌಮ್ಯ ಸ್ವಭಾವದ ಸಂತೋಷ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ಈಶ್ವರಪ್ಪ ಬಣ ತಿದಿ ಒತ್ತುತ್ತಿದೆ. ಇದನ್ನು ಸಹಿಸಲು ಯಡಿಯೂರಪ್ಪನವರಿಗೆ ಆಗುತ್ತಿಲ್ಲ.
ಸಂತೋಷ್ ಸೂಕ್ತ ಅಭ್ಯರ್ಥಿಯೆ?
ಸಂತೋಷ್ ಯಾರು ಎಂದು ಎಷ್ಟು ಕರ್ನಾಟಕದ ಜನತೆಗೆ ಗೊತ್ತು? ಎಷ್ಟು ಬಹಿರಂಗ ಸಭೆಗಳಲ್ಲಿ ಅವರು ಭಾಗವಹಿಸಿದ್ದಾರೆ? ಸಾರ್ವಜನಿಕರೊಂದಿಗೆ ಎಷ್ಟು ಸಾರಿ ಬೆರೆತು ಮಾತುಕತೆ ನಡೆಸಿದ್ದಾರೆ? ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡರೆ ಉತ್ತರ ಸಿಗುವುದು ಬಲುಕಷ್ಟ. ಪರಿಸ್ಥಿತಿ ಹೀಗಿರುವಾಗ, ಸಂತೋಷ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಾಧ್ಯವೆ? ಅವರನ್ನು ಬಿಂಬಿಸಿ ಚುನಾವಣೆ ಎದುರಿಸಿ ಗೆಲ್ಲಲು ಸಾಧ್ಯವೆ?
ಜಾತಿ ಬೆಂಬಲವೂ ಸಂತೋಷ್ ಅವರಿಗಿಲ್ಲ
ಯಡಿಯೂರಪ್ಪ ಅವರು ಬಹುಸಂಖ್ಯಾತ ಲಿಂಗಾಯತರ ಪ್ರತಿನಿಧಿಯಾಗಿದ್ದರೂ, ಅವರಿಗೆ ಇತರ ಜಾತಿಯ ಬೆಂಬಲವೂ ಇದೆ. ಆದರೆ, ಹುಟ್ಟಾ ಬ್ರಾಹ್ಮಣರಾಗಿರುವ ಸಂತೋಷ್ ಅವರಿಗೆ ಜಾತಿ ಬೆಂಬಲದ ಲೆಕ್ಕದಲ್ಲಿ ತಕ್ಕಡಿಯಲ್ಲಿ ಹಾಕಿ ತೂಗಿದಾಗ ಮೇಲಕ್ಕೇಳುವುದು ಬಲುಕಷ್ಟ. ಕರ್ನಾಟಕದಲ್ಲಿ ಬ್ರಾಹ್ಮಣರ ಸಂಖ್ಯೆ ಶೇ.3ರಷ್ಟು ಮಾತ್ರ!
ಯೋಗಿಗಿರುವ ವಾಕ್ಚಾತುರ್ಯ ಸಂತೋಷ್ ಅವರಿಗಿಲ್ಲ
ಯೋಗಿ ಅವರದು ಡೈನಾಮಿಕ್ ವ್ಯಕ್ತಿತ್ವ. ಹೋರಾಟಗಾರ, ಉತ್ತಮ ವಾಗ್ಮಿ. 26ನೇ ವಯಸ್ಸಿಗೇ ಮೊದಲ ಬಾರಿಗೆ ಸಂಸದರಾಗಿ ಸಂಸತ್ತು ಪ್ರವೇಶಿಸಿದ ಅವರಿಗೆ ಎಲ್ಲ ಜಾತಿಗಳ ಬೆಂಬಲವಿದೆ. ಇಂಥವರೊಂದಿಗೆ ಸಂತೋಷ್ ಅವರನ್ನು ಹೋಲಿಸುವುದು ಎಷ್ಟು ಸರಿ? ಇನ್ನೆರಡು ದಿನಗಳಲ್ಲಿ ಯಾರು ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂಬ ನಿರ್ಧಾರವನ್ನು ಕೇಂದ್ರದ ಹಿರಿಯ ನಾಯಕರು ತೆಗೆದುಕೊಳ್ಳಲಿದ್ದಾರೆ.