ಉಪ ಚುನಾವಣಾ ಪ್ರಚಾರ ಮುಕ್ತಾಯ; ನಡೆದಿದೆ ಕೊನೆ ಕ್ಷಣದ ಕಸರತ್ತು!
ಬೆಂಗಳೂರು, ಡಿಸೆಂಬರ್ 04 : ಆರೋಪ-ಪ್ರತ್ಯಾರೋಪ, ಕಣ್ಣೀರು-ಆಕ್ರೋಶ, ಟೀಕೆ-ಟಿಪ್ಪಣಿ, ಕೆಸರೆರಚಾಟಕ್ಕೆ ಸಾಕ್ಷಿಯಾಗಿದ್ದ ಒಂದು ತಿಂಗಳ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಡಿಸೆಂಬರ್ 5ರ ಗುರುವಾರ ನಡೆಯಲಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧರಿಸುವ ಮಹತ್ವದ ಉಪ ಚುನಾವಣೆಗೆ ಒಂದು ದಿನ ಬಾಕಿ ಇದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮನೆ-ಮನೆ ಪ್ರಚಾರ ನಡೆಸಿ ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ.
15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ
ಡಿಸೆಂಬರ್ 5ರ ಗುರುವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. 15 ಕ್ಷೇತ್ರಗಳಲ್ಲಿ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಇಂದು ಸಂಜೆ ಚುನಾವಣಾಧಿಕಾರಿಗಳು ಮತಕೇಂದ್ರಕ್ಕೆ ತೆರಳಲಿದ್ದಾರೆ.
ಉಪ ಚುನಾವಣೆ ಪ್ರಚಾರ, ಹಲವು ನಾಯಕರಿಂದ ನೀತಿ ಸಂಹಿತೆ ಉಲ್ಲಂಘನೆ
15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಘೋಷಣೆ ಮಾಡಲಾಗಿದೆ. ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪಥ ಸಂಚಲನ ನಡೆಸುವ ಮೂಲಕ ಪೊಲೀಸರು ಮತದಾನ ದಿನದ ಭದ್ರತೆಗೆ ಸಿದ್ಧ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಪುನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಯಾರು, ಏನು ಹೇಳಿದರು?
ಉಪ ಚುನಾವಣಾ ಕದನ
ಬೆಂಗಳೂರು ನಗರದ 4 ಸೇರಿದಂತೆ ಒಟ್ಟು 15 ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದೆ. 9 ಮಹಿಳೆಯರು ಸೇರಿದಂತೆ 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 5ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಶಿವಾಜಿನಗರ ಕ್ಷೇತ್ರದಲ್ಲಿ ಹೆಚ್ಚು ಎಂದರೆ 19, ಹೊಸಕೋಟೆ ಕ್ಷೇತ್ರದಲ್ಲಿ ಕಡಿಮೆ ಎಂದರೆ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾಧಿಕಾರಿಗಳು ಇಂದು ಮತದಾನ ಕೇಂದ್ರಕ್ಕೆ ತೆರಳಿದ್ದಾರೆ.
ಅಭ್ಯರ್ಥಿಗಳಿಂದ ಕೊನೆ ಕ್ಷಣದ ಕಸರತ್ತು
ಬಹಿರಂಗ ಪ್ರಚಾರ ಬುಧವಾರ ಸಂಜೆ ಅಂತ್ಯಗೊಂಡಿದೆ. ಇಂದು ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತದಾರರನ್ನು ಸೆಳೆಯಲು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಒಂದು ತಿಂಗಳ ಕಾಲ ಪ್ರಚಾರಕ್ಕಾಗಿ ವಿವಿಧ ಕ್ಷೇತ್ರಗಳಿಗೆ ತೆರಳಿದ್ದ ನಾಯಕರು ವಾಪಸ್ ಆಗಿದ್ದಾರೆ. ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ನಾಯಕರು ಕ್ಷೇತ್ರದಲ್ಲಿ ಇರುವಂತಿಲ್ಲ. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಮತದಾರರಿಗೆ ಉಡುಗೊರೆ ಕೊಡುವ ಪ್ರಯತ್ನವೂ ನಡೆಯುತ್ತಿದೆ.
7 ಸ್ಥಾನವನ್ನು ಗೆಲ್ಲಲೇಬೇಕು
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಈ ಉಪ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಅನರ್ಹ ಶಾಸಕರಿಗೆ ಟಿಕೆಟ್ ಕೊಟ್ಟಿರುವ ಯಡಿಯೂರಪ್ಪ ಎಲ್ಲಾ ಕ್ಷೇತ್ರಗಳಿಗೆ ತಾವೇ ಖುದ್ದಾಗಿ ಹೋಗಿ ಪ್ರಚಾರ ನಡೆಸಿದ್ದಾರೆ. 15 ಕ್ಷೇತ್ರಗಳ ಪೈಕಿ ಸರ್ಕಾರ ಉಳಿಸಿಕೊಳ್ಳಲು 7 ಸ್ಥಾನಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಪ್ರತಿಪಕ್ಷಗಳು ಸರ್ಕಾರ ಪತನವಾಗಲಿದೆ ಎಂದು ಮೈತ್ರಿ ಮಾತುಕತೆಗೆ ನಾಂದಿ ಹಾಡಿವೆ.
ಅನರ್ಹರನ್ನು ಸೋಲಿಸುವುದೇ ಗುರಿ
15 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 2018ರಲ್ಲಿ ಗೆದ್ದಿದ್ದ ಅವರು ರಾಜೀನಾಮೆ ನೀಡಿ, ಬಿಜೆಪಿಯಿಂದ ಉಪ ಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಎಲ್ಲರನ್ನೂ ಸೋಲಿಸಬೇಕು ಎಂಬುದು ಕಾಂಗ್ರೆಸ್ ಶಪಥ. ಅದಕ್ಕಾಗಿ ಪಕ್ಷ ಹಲವು ತಂತ್ರಗಳನ್ನು ರೂಪಿಸಿದ್ದು, ಮತದಾರ ತನ್ನ ಅಂತಿಮ ತೀರ್ಪನ್ನು ನೀಡಬೇಕಿದೆ.
ಕ್ಷೇತ್ರ ಉಳಿಸಿಕೊಳ್ಳುವ ಹೋರಾಟ
15 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಹೋರಾಟ ಮಾಡುತ್ತಿದೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದ ಮೂವರು ಗೆಲ್ಲಬಾರದು ಎಂದು ಪಕ್ಷ ಪಣ ತೊಟ್ಟಿದೆ. ಬಿರುಸಿನ ಪ್ರಚಾರ ನಡೆಸಿದ್ದು, ಪಕ್ಷವನ್ನು ಬೆಂಬಲಿಸಿ ಎಂದು ಜನತಾ ನ್ಯಾಯಾಲಯದ ಮುಂದೆ ಮನವಿ ಮಾಡಿದೆ.