ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ರಾಜ್ಯ ಬಿಜೆಪಿಗೆ ಕೊಟ್ಟ ಸೂಚನೆ ಏನು ಗೊತ್ತಾ?
ಬೆಂಗಳೂರು, ಜ. 20: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಗಳ ಪರವಾಗಿ ಅಭಿಯಾನ ಮುಂದುವರೆಸಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ. ಎರಡೂ ಕಾಯ್ದೆಗಳ ಪರವಾಗಿ ರಾಜ್ಯದಲ್ಲಿ ಗಣರಾಜ್ಯೋತ್ಸವದ ವರೆಗೆ ಮುಂದುವರೆಸಲು ಬಿಜೆಪಿ ತೀರ್ಮಾನ ಮಾಡಿದೆ.
Recommended Video
ದೇಶದಲ್ಲಿ ಉತ್ತಮ ಬೆಂಬಲ ಸಿಗುತ್ತಿರುವುದರಿಂದ ಅಭಿಯಾನ ಮುಂದುವರೆಸಲು ತೀರ್ಮಾನ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಮಾಹಿತಿ ಕೊಟ್ಟಿದೆ.
ಬಿಜೆಪಿಯ ಸಿಎಎ ಜನ ಜಾಗೃತಿ ಅಭಿಯಾನ ಜ.26ರ ತನಕ ವಿಸ್ತರಣೆ
ಆದರೆ ದೇಶಾದ್ಯಂತ ಕಾಯ್ದೆಗಳನ್ನು ವಿರೋಧಿಸಿ ಹೋರಾಟಗಳು ಮುಂದುವರೆಯುತ್ತಿರುವುದರಿಂದ ಬಿಜೆಪಿ ತನ್ನ ನಿರ್ಧಾರ ಬದಲಿಸಿದೆ ಎಂಬ ಮಾಹಿತಿಯಿದೆ. ಇದಲ್ಲದೆ ರಾಜ್ಯ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ಅಭಿಯಾನ ವಿಸ್ತರಣೆಗೊಂಡಿದೆ ಎಂಬ ಮಾಹಿತಿಯಿದೆ.
ಕನಿಷ್ಠ ಕೋಟಿ ಜನರಿಗೆ ನೇರ ತಿಳಿವಳಿಕೆ ಕೊಡಿ: ಅಮಿತ್ ಶಾ
ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆ ಬಿಜೆಪಿ ಅಭಿಯಾನವನ್ನು ಮುಂದುವರೆಸಿದೆ ಎನ್ನಲಾಗಿದೆ. ದೇಶಾದ್ಯಂತ ಸಿಎಎ ಹಾಗೂ ಎನ್ಆರ್ಸಿ ವಿರುದ್ಧ ಹೋರಾಟಗಳು ಕಡಿಮೆ ಆಗುತ್ತಿಲ್ಲ. ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಎರಡೂ ಕಾಯ್ದೆಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಕೊಳ್ಳುತ್ತಿವೆ. ಹಾಗಾಗಿ ಅಭಿಯಾನವನ್ನು ನಿಲ್ಲಿಸಬೇಡಿ. ಗಣರಾಜ್ಯೋತ್ಸವದ ವೆರೆಗ ಮುಂದುವರೆಸಿ ಎಂದು ಅಮಿತ್ ಶಾ ರಾಜ್ಯ ಬಿಜೆಪಿ ಘಟಕಕ್ಕೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕನಿಷ್ಠ ಒಂದು ಕೋಟಿ ಜನರಿಗೆ ನೇರವಾಗಿ ತಿಳಿವಳಿಕೆ ನೀಡಿ. ಅಲ್ಲಿಯವೆರೆಗೆ ಅಭಿಯಾನ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಬೂತ್ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಅಗತ್ಯ, ಉಳಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಮುಖಂಡರೂ ಕೂಡ ಅಭಿಯಾನದಲ್ಲಿ ಭಾಗವಹಿಸಬೇಕು. ರಾಜ್ಯದ ನಾಯಕರು ಆಗಾಗ ಹೇಳಿಕೆ ಕೊಡುವುದು ಮುಂದುವರೆಸಬೇಕು ಎಂದು ಕೇಂದ್ರಗೃಹ ಸಚಿವರೂ ಆಗಿರುವ ಅಮಿತ್ ಶಾ ರಾಜ್ಯ ಬಿಜೆಪಿಗೆ ಸೂಚಿಸಿದ್ದಾರಂತೆ.
ಅಭಿಯಾನ ಮುಂದುವರೆಸಲು ಬಿಜೆಪಿ ನಿರ್ಧಾರ
ಸಿಎಎ ಹಾಗೂ ಎನ್ಆರ್ಸಿ ಪರವಾಗಿ ಬಿಜೆಪಿ ಆರಂಭಿಸಿದ್ದ ಎರಡನೇ ಹಂತದ ಅಭಿಯಾನ ಇಂದು ಮುಕ್ತಾಯವಾಗಬೇಕಿತ್ತು. ಆದರೆ ದೇಶಾದ್ಯಂತ ಎರಡೂ ಕಾಯ್ದೆಗಳಿಗೆ ಬೆಂಬಲ ಹೆಚ್ಚಾಗುತ್ತಿದೆ ಹಾಗಾಗಿ ಅಭಿಯಾನವನ್ನು ಮುಂದುವರೆಸಲು ತೀರ್ಮಾನ ಮಾಡಿರುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.
ಜನವರಿ 26ರವರೆಗೆ ಅಭಿಯಾನ ಮುಂದುವರೆಸುವ ನಿರ್ಧಾರ ಮಾಡಲಾಗಿದ್ದು, ಗಣರಾಜ್ಯೋತ್ಸವದ ದಿನದಂದು ಅಭಿಯಾನ ಮುಗಿಸಲು ತೀರ್ಮಾನ ಮಾಡಲಾಗಿದೆ. ಗಣರಾಜ್ಯೋತ್ಸವದಂದು ಬೆಳಗ್ಗೆ 8.30 ರಿಂದ 9.30 ಗಂಟೆಯೊಳಗೆ ರಾಜ್ಯದ 58 ಸಾವಿರ ಬಿಜೆಪಿ ಬೂತ್ಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಬೆಂಬಲ ಸೂಚಿಸಲಾಗುತ್ತದೆ ಎಂದು ರವಿಕುಮಾರ್ ಹೇಳಿದ್ದಾರೆ.
ಈ ವರೆಗೆ 70 ಲಕ್ಷ ಜನರನ್ನು ನೇರವಾಗಿ ಸಂಪರ್ಕಿಸಿ ಜಾಗೃತಿ
ರಾಜ್ಯ ಬಿಜೆಪಿಯಿಂದ ಈ ವರೆಗೆ ನಡೆದ ಎರಡು ಹಂತಗಳ ಅಭಿಯಾನದಲ್ಲಿ 61 ಚಿಂತನಾ ಸಭೆಯಲ್ಲಿ 24 ಸಾವಿರ ಜನ ಪಾಲ್ಗೊಂಡಿದ್ರು. ಮನೆ ಮನೆ ಸಂಪರ್ಕದಲ್ಲಿ 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದೇವೆ. 10,15,031 ಜನರು ಮಿಸ್ಡ್ ಕಾಲ್ ನೀಡಿ ಬೆಂಬಲಿಸಿದ್ದಾರೆ. 8065 ಸಭೆಗಳಲ್ಲಿ ಮಹಿಳೆಯರು ಭಾಗವಹಿಸಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. 2,14,705 ಜನರು ಕಾಯ್ದೆ ಬೆಂಬಲಿಸಿ ಅಭಿನಂದನಾ ಪತ್ರ ಬರೆದಿದ್ದಾರೆ. 24 Rallyಗಳು ರಾಜ್ಯದಲ್ಲಿ ನಡೆದಿವೆ. 1,93,000 ಜನರು ರಾಲಿಗಳಲ್ಲಿ ಭಾಗಹಿಸಿದ್ದಾರೆ. 70 ಲಕ್ಷಕ್ಕೂ ಹೆಚ್ಚು ಜನರನ್ನ ಈ ವರೆಗೆ ತಲುಪಿದ್ದೇವೆ. ಒಟ್ಟು ಕನಿಷ್ಠ ಒಂದು ಕೋಟಿ ಜನರನ್ನು ಭೇಟಿ ಮಾಡುವುದು ನಮ್ಮ ಗುರಿ ಎಂದು ರವಿಕುಮಾರ್ ಮಾಹಿತಿ ಕೊಟ್ಟಿದ್ದಾರೆ.
ಕಾಯ್ದೆಯಲ್ಲಿನ ಒಂದಂಶವೂ ಮುಸಲ್ಮಾನರ ವಿರುದ್ಧವಾಗಿಲ್ಲ
ಸಿಎಎ ಬಗ್ಗೆ ಇಡೀ ದೇಶಕ್ಕೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಕಾಯ್ದೆಯಲ್ಲಿನ ಒಂದಂಶವೂ ಮುಸಲ್ಮಾನರ ವಿರುದ್ಧವಾಗಿಲ್ಲ. ಅವರನ್ನ ಪಾಕಿಸ್ತಾನಕ್ಕೆ ಅಥವಾ ಬಾಂಗ್ಲಾಕ್ಕೆ ಕಳುಹಿಸಿ ಬಿಡುತ್ತಾರೆ ಎಂಬ ಅಸತ್ಯವನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಈ ವಿಚಾರಗಳ್ನು ಜನರಿಗೆ ಅಭಿಯಾನದಲ್ಲಿ ತಿಳಿಹೇಳಲಾಗಿದೆ. ಒಟ್ಟಾರೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಿಗೆ ಎರಡೂ ಕಾಯ್ದೆಗಳು ರಾಜಕೀಯವಾಗಿಯೆ ಬಳಕೆ ಆಗುತ್ತಿವೆ ಎಂಬುದು ಜನರ ಅಭಿಪ್ರಾಯ.