ಸಿಎಜಿ ಬಿಚ್ಚಿಟ್ಟ ಲೆಕ್ಕ; ನಷ್ಟದಲ್ಲಿ ಸಾರ್ವಜನಿಕ ಉದ್ಯಮಗಳು
ಬೆಂಗಳೂರು, ಫೆ. 18: ವಿಧಾನಸಭೆಯಲ್ಲಿ 2018ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಂತೆ ಸಿಎಜಿ ವರದಿ ಮಂಡನೆಯಾಗಿದ್ದು, ಸಾರ್ವಜನಿಕ ಉದ್ಯಮಗಳು ನಷ್ಟದಲ್ಲಿರುವುದು ವರದಿಯಲ್ಲಿ ಕಂಡುಬಂದಿದೆ. ವಿದ್ಯುತ್ ನಿಗಮಗಳು ಸೇರಿದಂತೆ ಸಾರ್ವಜನಿಕ ಉದ್ಯಮಗಳ ಬಗ್ಗೆ ಸ್ಥಿತಿಗತಿಯ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ. ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರು ನೀಡುರುವ ವರದಿಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡನೆ ಮಾಡಿದ್ದಾರೆ.
ಬಹುತೇಕವಾಗಿ ಸಾರ್ವಜನಿಕ ಉದ್ಯಮಗಳು ನಷ್ಠದಲ್ಲಿರುವುದು ಸಿಎಜಿ ವರದಿಯಲ್ಲಿ ಕಂಡುಬಂದಿದೆ. ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಯೋಜನೆ ಅನುಷ್ಠಾನದಲ್ಲಿ ಹಲವು ಹಂತಗಳಲ್ಲಿ ಲೋಪವಾಗಿರುವುದನ್ನು ಲೆಕ್ಕಪರಿಶೋಧಕರ ವರದಿಯಲ್ಲಿ ತೋರಿಸಲಾಗಿದೆ.
ವಿಧಾನಸಭೆ: ನೂತನ ಸಚಿವರನ್ನು ಪರಿಚಯಿಸಲು ಸಿದ್ದರಾಮಯ್ಯ ಆಕ್ಷೇಪ!
ಘಟಕ ನಿರ್ಮಾಣ ಮಾಡಲು ಒಡಂಬಡಿಕೆ ಮಾಡಿಕೊಂಡಿದ್ದ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಸಂಸ್ಥೆಯು ನಿರ್ಮಾಣ ವಿಳಂಬ ಮಾಡಿದ್ದರಿಂದ ಕಾಮಗಾರಿ ವೆಚ್ಚ ನಿಗದಿಗಿಂತ 4,109 ಕೋಟಿ ರೂ.ಗಳಷ್ಟು ಹೆಚ್ಚಿಗೆ ಆಗಿದೆ. ಜೊತೆಗೆ ಬೇರ ಮೂಲಗಳಿಂದ ರಾಜ್ಯ ಸರ್ಕಾರ 11,079 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ಮಾಡಿರುವುದು ಕೂಡ ನಷ್ಟಕ್ಕೆ ಕಾರಣವಾಗಿದೆ.
ಜೊತೆಗೆ ವಿದ್ಯುತ್ ಉತ್ಪಾದನಾ ನಿಗಮಗಳಿಗೆ ಶೇ. 41 ರಷ್ಟು ಹೂಡಿಕೆ ಜಾಸ್ತಿ ಮಾಡಲಾಗಿದೆ. ಆದರೂ ಬೆಸ್ಕಾಂ ನಷ್ಟ ಹೊಂದಿದ್ದು, ಜೆಸ್ಕಾಂನಲ್ಲಿ ನಷ್ಟ ಹೆಚ್ಚಾಗಿದೆ. ಲಾಭದಲ್ಲಿದ್ದ ಕೆಪಿಸಿಎಲ್ ಲಾಭದಲ್ಲಿ ಗಣನೀಯ ಇಳಿಕೆ ಕಂಡಿದೆ. ನಿಗದಿತ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಾಗದ ಕಾರಣ ಖಾಸಗಿಯವರಿಂದ ವಿದ್ಯುತ್ ಖರೀದಿ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರಿಂದಾಗಿ ವಿದ್ಯುತ್ ನಿಗಮಗಳಿಗೆ ಹೆಚ್ಚಿಗೆ ಹೂಡಿಕೆ ಮಾಡಿದ್ದರೂ ಲಾಭವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೈಸೂರು ಕಾಗದ ಕಾರ್ಖಾನೆ ಕಚ್ಛಾ ಸಾಮಾಗ್ರಿಗಳ ವಿಲೇವಾರಿಯಲ್ಲಿ ವಿಫಲವಾಗಿದ್ದರಿಂದ 4.74 ಕೋಟಿ ರೂ.ನಷ್ಠವಾಗಿದೆ. ಜೊತೆಗೆ ರಾಜ್ಯ ಖನಿಜ ನಿಗಮದಿಂದ ಭೂಮಿ ಖರೀದಿಯಲ್ಲಿ ವ್ಯತ್ಯಾಸವಾಗಿದ್ದು, ಸರ್ಕಾರಕ್ಕೆ 46 ಲಕ್ಷ ರೂ. ಗಳ ನಷ್ಟವಾಗಿದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ನಲ್ಲಿ 11.9 ಕೋಟಿ ರೂ. ಬಳಕೆಯೇ ಆಗಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದದಲ್ಲಿ ಅಭಿವೃದ್ಧಿ ಆಗಿಲ್ಲ.
ಕಳೆದ ನಾಲ್ಕು ಆರ್ಥಿಕ ವರ್ಷದಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಅಭಿವೃದ್ಧಿಗೆ ಇರಿಸಲಾಗಿದ್ದ ಒಟ್ಟು 35 ಕೋಟಿ ರೂ. ಅನುದಾನ ಬಳಕೆಯೇ ಆಗಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ತೆಂಗಿನ ನಾರು ಅಭಿವೃದ್ಧಿ ನಿಗಮದಲ್ಲಿ ನಿಯಮಬಾಹಿರವಾಗಿ ಅನುದಾನಗಳ ಮಾರ್ಪಾಟು ಮಾಡಲಾಗಿದೆ. ಉಗ್ರಾಣ ನಿಗಮದಲ್ಲಿ 94 ಲಕ್ಷ ರೂ. ಮೊತ್ತದ ಯೋಜನೆ ಜಾರಿಗೊಳಿಸಿಲ್ಲ. ಎಂಎಸ್ಐಎಲ್ನಲ್ಲಿ ತೆರಿಗೆ ಪಾವತಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ 1.19 ಕೋಟಿ ರೂ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ.