ಆರಗ ಜ್ಞಾನೇಂದ್ರಗೆ ಖಾತೆ ಬದಲಾವಣೆ? ಈ ಎಡವಟ್ಟುಗಳೇ ಕಾರಣವೇ?
ಬೆಂಗಳೂರು, ಮೇ 11: ಸಂಪುಟ ಪುನರ್ ರಚನೆಯ ವೇಳೆ ಗೃಹ ಸಚಿವರ ಕುರ್ಚಿ ಅಲುಗಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಸಂಪುಟ ಪುನರಚನೆ ಮಾಡಲು ಒಪ್ಪಿಗೆ ಸಿಕ್ಕಿದ್ದೆೇ ಆದಲ್ಲಿ ಕೆಲವು ಸಚಿವರ ಸ್ಥಾನಪಲ್ಲಟ ಅಥವಾ ಸಂಪುಟದಿಂದಲೇ ಕೈಬಿಡುವ ಸಾಧ್ಯತೆಗಳಿವೆ. ಸಂಪುಟದ ಸ್ಥಾನಪಲ್ಲಟದ ಲಿಸ್ಟ್ನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರರಿದ್ದಾರೆಯೇ..? ಎಂಬ ಪ್ರಶ್ನೆ ಮೂಡಿದೆ.
ವಯಸ್ಸಿನ ಕಾರಣದಿಂದಾಗಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಬಿಜೆಪಿ ಹೈ ಕಮಾಂಡ್ ಇಳಿಸಿದರು. ಈ ವೇಳೆ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪರ ಕೃಪೆಯಿಂದ ಮುಖ್ಯಮಂತ್ರಿಯ ಗಾದಿಯನ್ನು ಏರಿದರು. ಮುಖ್ಯಮಂತ್ರಿಯವರು ತನ್ನ ಸಚಿವರನ್ನು ಆಯ್ಕೆ ಮಾಡುವ ಬೆರಳೆಣಿಕೆಯ ಸಚಿವರನ್ನು ಹೊರತುಪಡಿಸಿ ಬಹುತೇಕ ಯಡಿಯೂರಪ್ಪರ ಸಂಪುಟವನ್ನೇ ಮುಂದುವರೆಸಿದರು. ಈ ವೇಳೆ ಆರ್ಎಸ್ಎಸ್ ನ ಜೊತೆ ಒಡನಾಟವನ್ನು ಹೊಂದಿದ್ದ ಆರಗ ಜ್ಞಾನೇಂದ್ರರವರಿಗೆ ಖಡಕ್ ಖಾತೆಯಾದ ಗೃಹಮಂತ್ರಿಯಾಗುವ ಅವಕಾಶ ಆರಗ ಜ್ಞಾನೇಂದ್ರರವರಿಗೆ ಒಲಿದು ಬಂತು.
ಹಸನ್ಮುಖಿ ಗೃಹಸಚಿವರ ವೈಫಲ್ಯವೇನು
ಸದಾ ಹಸನ್ಮುಖಿಯಾಗಿರುವ ಗೃಹಸಚಿವರು ಇಲಾಖೆಯ ಬಗ್ಗೆ ಮಾಹಿತಿಯನ್ನು ತಿಳಿದು ಹಿಡಿತ ಸಾಧಿಸಲು ಹಲವಾರು ತಿಂಗಳುಗಳೇ ಬೇಕಾಯ್ತು. ಇದರ ನಡುವೆ ಗೃಹ ಸಚಿವರ ಹೇಳಿಕೆಗಳು ಮತ್ತು ಆಡಳಿತವೈಕರಿ ವಿಪಕ್ಷಗಳ ಟೀಕೆಗೆ ಮತ್ತು ಆಡಳಿತ ವೈಫಲ್ಯದಿಂದಾಗಿ ಗೃಹ ಸಚಿವರ ಸ್ಥಾನಪಲ್ಲಟದ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಪ್ರಾರಂಭವಾಗಿದೆ.
ಮೈಸೂರು ಗ್ಯಾಂಗ್ರೇಪ್, ಗೃಹ ಸಚಿವರ ಹೇಳಿಕೆ:
ಮೈಸೂರಿನ ಗ್ಯಾಂಗ್ ರೇಪ್ ಸಂದರ್ಭದಲ್ಲಿ ಅತ್ಯಾಚಾರಿ ಆರೋಪಿಗಳನ್ನು ಬಂಧಿಸುವ ಹೇಳಿಕೆಯನ್ನು ಕೊಡುವ ಜೊತೆೆಗೆ ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಹೇಳಿದ್ದರು. ಈ ವೇಳೆ ವಿಪಕ್ಷಗಳು ಮತ್ತು ಸ್ವಪಕ್ಷಿಯರು ಗೃಹಸಚಿವರ ಹೇಳಿಕೆಯನ್ನು ಖಂಡಿಸಿದ್ದರು. ಆ ಬಳಿಕ ಆರಗ ಜ್ಞಾನೇಂದ್ರ ಕಾಂಗ್ರೆಸ್ ನವರು ತಮ್ಮನ್ನ ರೇಪ್ ಮಾಡ್ತಿದ್ದಾರೆ ಎಂದು ಹೇಳಿಕೆ ಕೊಟ್ಟು ನಗೆಪಾಟಲಿಗೆ ಈಡಾಗಿದ್ದರು.
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ;
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಗಲಭೆ ಉಂಟಾಗಿತ್ತು. ಸೂಕ್ಷ್ಣ ವಿಚಾರವನ್ನು ಮನಗಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕಿತ್ತು. ಹರ್ಷನ ಶವಯಾತ್ರೆ ಮಾಡಿದ್ದು ಗಲಾಭೆಗೆ ಗೃಹ ಸಚಿವರೇ ಕಾರಣ ಎಂದು ವಿಪಕ್ಷ ಗಂಭೀರವಾದ ಆರೋಪವನ್ನು ಮಾಡಿತ್ತು.
ಉರ್ದು ಮಾತನಾಡಿದ್ದಕ್ಕೆ ಚಂದ್ರು ಕೊಲೆ:
ಗೃಹಸಚಿವ ಮತ್ತು ಕಮಿಷನರ್ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದರು. ಗೃಹ ಸಚಿವರು ಉರ್ದು ಮಾತನಾಡದ ಕಾರಣ ಕೊಲೆಯಾಗಿದೇ ಎಂದಿದ್ದರು. ಇದು ಕೋಮು ಸಂಘರ್ಷಕ್ಕೆ ಕಾರಣವಾಗಿಬಿಡ್ತಿತ್ತು. ಈ ವೇಳೆ ನಗರ ಪೊಲೀಸ್ ಆಯುಕ್ತರು ಗಾಡಿಯ ವಿಚಾರಕ್ಕೆ ಕೊಲೆಯಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದರು. ಇದು ಆಡಳಿತ ಮತ್ತು ವಿಪಕ್ಷಗಳ ಕೆಸರೆರಚಾಟಕ್ಕೂ ನಾಂದಿ ಹಾಡಿತ್ತು. ತಮ್ಮದೇ ಇಲಾಖೆಯ ಸರಿಯಾದ ಮಾಹಿತಿಯನ್ನು ಪಡೆಯದೇ ಗೃಹಸಚಿವರು ಮಾತನಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.
ಹುಬ್ಬಳ್ಳಿಯಲ್ಲಿ ನಡೆದ ಗಲಭೆ:
ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಆಕ್ಷೇಪಾರ್ಹ ಸ್ಟೇಟಸ್ ಹಾಕಿದ್ದ ಎಂಬ ಕಾರಣಕ್ಕೆ ಒಂದು ಕೋಮಿನ ಜನ ಪೊಲೀಸ್ ಠಾಣೆ ಮತ್ತು ಹಳೇ ಹುಬ್ಬಳ್ಳಿಯ ಬೀದಿಯಲ್ಲಿ ಕಲ್ಲು ತೂರಾಟವನ್ನು ಮಾಡಿದ್ದರು. ಈ ವೇಳೆ ದಕ್ಷ ಅಧಿಕಾರಿ ಲಾಬೂರಾಮ್ ಗಲಭೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆಯೂ ಗೃಹ ಸಚಿವರು ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾದವು.
ಪಿಎಸ್ಐ ನೇಮಕಾತಿ ಹಗರಣ:
ಪಿಎಸ್ಐ ನೇಮಕಾತಿ ಹಗರಣದಲ್ಲಿ ಆರಗ ಜ್ಞಾನೇಂದ್ರರವರ ಪಾತ್ರದ ಬಗ್ಗೆ ವಿಪಕ್ಷ ಹೆಚ್ಚು ಟೀಕಿಸುತ್ತಿಲ್ಲ. ಆದರೆ ತಮ್ಮ ಇಲಾಖೆಯಲ್ಲಿ ನಡೆದ ಅವ್ಯವಹಾರ ಮಾಹಿತಿಯನ್ನು ಇಲ್ಲದಂತೆ ಇದ್ದದ್ದು ಗೃಹ ಸಚಿವರ ವೈಫಲ್ಯ ಎನ್ನಲಾಗುತ್ತಿದೆ.
ಗೃಹ ಸಚಿವರಾಗಿಯೇ ಆರಗ ಜ್ಞಾನೇಂದ್ರ ಮುಂದುವರೆದರೆ ಕಾರಣವಾಗುವ ಅಂಶಗಳು:
* ಆರ್ಎಸ್ಎಸ್ ನ ಬೆಂಬಲದಿಂದ ಸಚಿವ ಸ್ಥಾನವನ್ನು ಉಳಿಸಿಕೊಳ್ಳಬಹುದು.
* ಭ್ರಷ್ಟಾಚಾರಿಯಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಬಹುದು.
* ಪೊಲೀಸ್ ಇಲಾಖೆ ತಮ್ಮ ಹಿಡಿತದಲ್ಲಿದೆ ಎಂದು ಹೇಳಬಹುದು.
* ಟ್ರಾನ್ಸ್ಫರ್ ನಲ್ಲಿ ಪಾರದರ್ಶಕತೆಯ ಬಗ್ಗೆ ತಿಳಿಸಬಹುದು.
* ಹಿಜಾಬ್, ಹಲಾಲ್ ಕಟ್, ಧ್ವನಿವರ್ಧಕದ ಸೂಕ್ಷ್ಮ ವಿಚಾರದಲ್ಲಿ ಜವಾಬ್ದಾರಿಯುತ ವರ್ತನೆ.