ಬಿವೈ ವಿಜಯೇಂದ್ರ ಸಂಪುಟಕ್ಕೆ?: ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗ್ತಾರಾ ಬಿಎಸ್ವೈ ಪುತ್ರ?
ಬೆಂಗಳೂರು, ಮೇ11: ರಾಷ್ಟ್ರ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಚುನಾವಣಾ ವರ್ಷದಲ್ಲಿ ಸಂಪುಟ ಪುನಾರಚನೆ ಮಾಡಿರೋದನ್ನು ಗಮನಿಸಬಹುದು. ಕರ್ನಾಟಕದಲ್ಲೂ ಸಾರ್ವತ್ರಿಕ ಚುನಾವಣೆ ಎದುರಾಗುವುದಕ್ಕೆ ಇನ್ನೊಂದು ವರ್ಷ ಬಾಕಿ ಇದೆ. ಈ ವೇಳೆ ಮತವನ್ನು ಸೆಳೆಯವು ಜನನಾಯಕನ ಅವಶ್ಯಕತೆಯೂ ಇದೆ. ಇದಕ್ಕಾಗಿಯೇ ಬೊಮ್ಮಾಯಿ ಸಂಪುಟ ಪುನರ್ ರಚನೆ ವೇಳೆ ಬಿಎಸ್ ಯಡಿಯೂರಪ್ಪರ ಪುತ್ರ ಬಿಜೆಪಿಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ.
ಬಿಜೆಪಿಯನ್ನು ಪ್ರಬಲವಾಗಿ ಕಟ್ಟಿ ಬೆಳೆಸುವಲ್ಲಿ ಬಿಎಸ್ ಯಡಿಯೂರಪ್ಪನವರ ಪಾತ್ರ ಬಹುದೊಡ್ಡದು ಎಂಬುದನ್ನು ಎಲ್ಲರು ಒಪ್ಪುತ್ತಾರೆ. ಬಿಎಸ್ ಯಡಿಯೂಪ್ಪನವರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮತಬ್ಯಾಂಕ್ ಅನ್ನು ಸೆೆಳೆಯಬಲ್ಲ ನಾಯಕ ಕಾಣುತ್ತಿಲ್ಲ. ಬಿಎಸ್ ಯಡಿಯೂರಪ್ಪನವರು ಈಗಲೂ ಮತಬುಟ್ಟಿಗೆ ಕೈ ಹಾಕಬಲ್ಲ ನಾಯಕನಾಗಿದ್ದಾರೆ. ಬಿಜೆಪಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಯಡಿಯೂರಪ್ಪನವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಹೀಗಾಗಿ ಬಿಎಸ್ವೈ ಅವರ ಪುತ್ರ ಬಿ ವೈ ವಿಜಯೇಂದ್ರರವರಿಗೆ ಸಚಿವ ಸ್ಥಾನವನ್ನು ಕೊಟ್ಟು ಯುವ ನಾಯಕನನ್ನಾಗಿ ಬಿಂಬಿಸುವುದು ಮತ್ತು ಬಿಎಸ್ ಯಡಿಯೂರಪ್ಪನವರನ್ನು ಸಕ್ರಿಯ ಸಾರ್ವಜನಿಕ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಇದಕ್ಕಾಗಿಯೇ ಬಿವೈ ವಿಜಯೇಂದ್ರರವರಿಗೆ ಸಚಿವ ಸ್ಥಾನ ಖಚಿತ ಎನ್ನುತ್ತಿರುವುದು.
ಬಿಜೆಪಿಯ ಉಪಾಧ್ಯಕ್ಷರಾಗಿ ಸಾಮರ್ಥ್ಯ ಸಾಬೀತು
ಬಿಎಸ್ ಯಡಿಯೂರಪ್ಪನವರ ಪುತ್ರನಾಗಿದ್ದರು ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದ ಹೆಗ್ಗಳಿಕೆ ಬಿವೈ ವಿಜಯೇಂದ್ರರವರಿಗೆ ಸಲ್ಲುತ್ತದೆ. ಬಿಜೆಪಿ ಸರ್ಕಾರವನ್ನು ತರಲು ಶತಪ್ರಯತ್ನವನ್ನು ಮಾಡುವಾಗಲು ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಕಮಲವೇ ಅರಳುವುದಿಲ್ಲ ಎನ್ನುವಾಗ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡು ನಾರಾಯಣ ಗೌಡರವರ ಪರವಾಗಿ ಓಡಾಡಿ ಗೆಲುವನ್ನು ತಂದುಕೊಟ್ಟಿದ್ದರು. ರಾಜ್ಯದ ಹಲವೆಡೆ ಓಡಾಡಿ ಪಕ್ಷ ಸಂಘಟನೆಯನ್ನು ಮಾಡಿರುವ ವಿಜಯೇಂದ್ರ ಈಗ ಎಲ್ಲರು ಗುರುತಿಸುವಂತ ವ್ಯಕ್ತಿಯಾಗಿ ಬೆಳೆದಿದ್ದಾರೆ. ಇನ್ನು ಬಿಎಸ್ ಯಡಿಯೂರಪ್ಪನವರ ಉತ್ತರಾಧಿಕಾರಿ ಎಂಬಂತೆಯು ಗುರುತಿಸಿಕೊಂಡಿದ್ದಾರೆ.
ವಿಧಾನಪರಿಷತ್ತಿಗೆ ಆಯ್ಕೆ ಮಾಡೋದು
ವಿಧಾನ ಪರಿಷತ್ತಿನಲ್ಲಿ ಜೂನ್ 3ರಂದು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ ತನ್ನ ಶಾಸಕರ ಬಲದೊಂದಿಗೆ 4 ಸ್ಥಾನವನ್ನು ಗೆಲ್ಲಬಹುದಾಗಿದೆ. ಇದರಿಂದಾಗಿ ಬಿವೈ ವಿಜಯೇಂದ್ರರವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟು ವಿಧಾನಪರಿಷತ್ತಿಗೆ ಆಯ್ಕೆ ಮಾಡಿಕೊಳ್ಳುವುದು. ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆ ಬಿಎಸ್ ಯಡಿಯೂರಪ್ಪನವರ ಬದಲಾಗಿ ಬಿವೈ ವಿಜಯೇಂದ್ರರವರಿಗೆ ಶಿಕಾರಿಪುರದಿಂದ ಟಿಕೆಟ್ ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ವಿಜಯೇಂದ್ರರವರಿಗೆ ಗೃಹಖಾತೆ?
ಸಚಿವ ಆರಗ ಜ್ಞಾನೇಂದ್ರ ಗೃಹಖಾತೆಯನ್ನು ನಿಭಾಯಿಸಲು ತಿಣುಕಾಡುತ್ತಿದ್ದಾರೆ ಎಂಬುದ ಹೈಕಮಾಂಡ್ ಗಮನಕ್ಕೆ ಬಂದಿದೆ. ಇದರಿಂದಾಗಿ ಗೃಹಖಾತೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲವರಿಗೆ ಕೊಡಲು ಹೈಕಮಾಂಡ್ ಮತ್ತು ಬೊಮ್ಮಾಯಿ ತೀರ್ಮಾನಿಸಿದ್ದರು. ಗೃಹ ಖಾತೆಯನ್ನು ನಿಭಾಯಿಸಿದ್ದ ಆರ್ ಅಶೋಕ್ ಹೆಸರು ಗೃಹ ಖಾತೆಗೆ ಕೇಳಿಬಂದಿದ್ದರು. ಬಿವೈ ವಿಜಯೇಂದ್ರರವರಿಗೆ ಗೃಹಖಾತೆಯನ್ನು ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಬೊಮ್ಮಾಯಿ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ವಿಜಯೇಂದ್ರರವರಿಗೆ ಗೃಹ ಖಾತೆ ಒಲಿಯುವ ಅದೃಷ್ಟ ಬರಬಹುದಾಗಿದೆ.
ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್
ಇನ್ನು ಬಿಜೆಪಿಯ ಹೈಕಮಾಂಡ್ ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ಆದರೂ ಬಿಜೆಪಿಯ ಹೈಕಮಾಂಡ್ ಎರಡು ದಿನ ಕಾಯುವಂತೆ ಸೂಚಿಸಿರೋದು ಸಚಿವಾಕ್ಷಿಗಳ ಎದೆ ಬಡಿತವನ್ನು ಹೆಚ್ಚಿಸಿದೆ. ವಿಜಯೇಂದ್ರರಿಗೆ ಮಂತ್ರಿ ಭಾಗ್ಯ ಒಲಿಯುತ್ತ ಇಲ್ಲವೋ ಅನ್ನೋದು ಮತ್ತಷ್ಟು ಖಚಿತವಾಗೋದಕ್ಕೆ ಎರಡ್ಮೂರು ದಿನ ಕಾಯಲೇಬೇಕಿದೆ.