ಸಂಪುಟ ಪುನಾರಚನೆ: ಹಾಲಿ ಸಚಿವರಿಗೆ ಆತಂಕ ತಂದ ಕಟೀಲ್ ಹೇಳಿಕೆ
ಬೆಂಗಳೂರು, ಫೆಬ್ರವರಿ 07: ಸಂಪುಟ ವಿಸ್ತರಣೆ ಆಗಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿಕೆ ಹಾಲಿ ಸಚಿವರಿಗೆ ಆತಂಕ ತಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ನಳಿನ್ ಕಟೀಲ್, 'ಶೀಘ್ರದಲ್ಲೇ ಸಂಪುಟ ಪುನಾರಚನೆ ಮಾಡಲಾಗುವುದು' ಎಂದಿದ್ದಾರೆ. ಹಾಲಿ ಇರುವ ಕೆಲವು ಸಚಿವರು ಸ್ಥಾನ ಕಳೆದುಕೊಳ್ಳುವ ಸೂಚನೆಯನ್ನು ಅವರು ನೀಡಿದ್ದಾರೆ.
ಯಡಿಯೂರಪ್ಪ ಸಂಪುಟ: ಎರಡು ಜಿಲ್ಲೆಗೆ ಬೆಣ್ಣೆ, ಹಲವು ಜಿಲ್ಲೆಗೆ ಸುಣ್ಣ
ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ಹಲವು ಹಿರಿಯ ಶಾಸಕರು ಮುನಿಸಿಕೊಂಡಿದ್ದು, ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಸಮಾಧಾನಿತರೆಲ್ಲರೂ ಒಟ್ಟಾಗಿ ಬಂಡಾಯ ಪ್ರಾರಂಭ ಮಾಡುವ ಮುನ್ನಾ ಅವರನ್ನು ಸಮಾನಗೊಳಿಸುವ ಕಾರ್ಯಕ್ಕೆ ಬಿಜೆಪಿ ಕೈಹಾಕಿದೆ.
ಹಿರಿಯರನ್ನು ಸಮಾಧಾನಪಡಿಸಲು ಈ ತಂತ್ರ
ಸಚಿವ ಸ್ಥಾನ ವಂಚಿತ ಕೆಲವು ಹಿರಿಯರನ್ನು ಸಮಾಧಾನಪಡಿಸಲು ಕೆಲವು ಸಚಿವರ ಸ್ಥಾನ ಕಸಿದು ವಂಚಿತರಿಗೆ ಕೊಡುವ ಚಿಂತನೆ ಇದ್ದು, ಬಿಜೆಪಿಯ ಹಾಲಿ ಸಚಿವರಿಗೆ ಈ ಸುದ್ದಿ ಆತಂಕ ತಂದಿದೆ.
ಕೆಲವರಿಗೆ ಸ್ಥಾನ ಮಾಡಿಕೊಡಬಹುದು
6-7 ಮಂದಿ ಹಾಲಿ ಸಚಿವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು, ಉಮೇಶ್ ಕತ್ತಿ, ವಿಶ್ವನಾಥ್, ಅಂಗಾರ ಸೇರಿ ಇನ್ನೂ ಕೆಲವರು ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ.
ಮಿ. ಕಟೀಲ್, ನಿಮ್ಮ ಊರಿನ 8 ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡಿಸಲಾಗಲಿಲ್ಲವೇ?
ಆರು ಸ್ಥಾನಗಳು ಪ್ರಸ್ತುತ ಖಾಲಿ ಇವೆ
ಪ್ರಸ್ತುತ ಇನ್ನೂ ಆರು ಸಚಿವ ಸ್ಥಾನಗಳು ಖಾಲಿ ಇವೆ. ಈಗಿರುವ ಕೆಲವರನ್ನು ತೆರವು ಗೊಳಿಸಿ ಇನ್ನು ಐದಾದರೂ ಸಚಿವ ಸ್ಥಾನ ಪಡೆದುಕೊಂಡರೆ ಹತ್ತು-ಹನ್ನೊಂದು ಮಂದಿಗೆ ಸಚಿವ ಸ್ಥಾನ ನೀಡಿ ಬಂಡಾಯ ಶಮನಮಾಡಿ ಉಳಿದ ಅವಧಿಯನ್ನು ಸುಲಭವಾಗಿ ದಾಟಬಹುದು ಎಂಬುದು ಯಡಿಯೂರಪ್ಪ ಲೆಕ್ಕಾಚಾರ.
ಸಚಿವ ಸ್ಥಾನ ಆಕಾಂಕ್ಷಿಗಳ ಚುಟುಕು ಪಟ್ಟಿ
ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಅಂಗಾರ, ಅರಗ ಜ್ಞಾನೇಂದ್ರ, ಮುರಗೇಶ ನಿರಾಣಿ, ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಸಿಪಿ ಯೋಗೇಶ್ವರ್ ಸೇರಿದಂತೆ ಇನ್ನೂ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ.