ಖಾತೆ ಹಂಚಿಕೆ ಅಸಮಾಧಾನ: ಕೆಲ ಹೊತ್ತಿನಲ್ಲಿ ಆರಂಭವಾಗಲಿದೆ ಮಹತ್ವದ ಸಚಿವ ಸಂಪುಟ ಸಭೆ!
ಬೆಂಗಳೂರು, ಜ 21: ಖಾತೆ ಮರು ಹಂಚಿಕೆ ಅಸಮಾಧಾನದ ಬೆನ್ನಲ್ಲೇ ಇಂದು (ಜ.21) ಸಂಜೆ 4.30ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಯಡಿಯೂರಪ್ಪ ಅವರಿಗೆ ಬಲಗೈಯಂತಿರುವ ಸಚಿವ ಮಾಧುಸ್ವಾಮಿ ಅವರು ಸಂಪುಟ ಸಭೆಗೆ ಗೈರಾಗುತ್ತಾರೆಂಬ ಮಾಹಿತಿಯಿದೆ. ಸಚಿವರ ಅಸಮಾಧಾನದ ಮಧ್ಯೆ ಹಲವು ಮಹತ್ವದ ವಿಷಯಗಳು ಇಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿವೆ.
ಕರ್ನಾಟಕ ಗೃಹ ನಿರ್ಮಾಣದಿಂದ ವಿನ್ಯಾಸ ಮತ್ತು ನಕ್ಷೆಗೆ ಅನುಮೋದನೆ ಪಡೆಯದೆ ನಿರ್ಮಾಣ ಮಾಡಲಾಗಿರುವ 69 ಕಾಮಗಾರಿಗಳಿಗೆ ಮತ್ತು ಪೂರ್ಣಗೊಳಿಸಲು ಬಾಕಿ ಇರುವ 6 ಕಾಮಗಾರಿಗಳು ಸೇರಿ ಒಟ್ಟು 65 ವಸತಿ ಬಡಾವಣೆಗಳಿಗೆ ಯಥಾಸ್ಥಿತಿ ವಿನ್ಯಾಸಕ್ಕೆ ಅನುಮೋದನೆ ನೀಡಲು ಇಂದು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
ಗೃಹ ಮಂಡಳಿ ಅನು ಮೋದನೆ ಪಡೆಯದೆ ನಿರ್ಮಾಣ ಮಾಡಿರುವ ಮತ್ತು ಬಾಕಿ ಇರುವ 134 ಯೋಜನೆಗಳಿಗೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗಿದೆ. ಈ ಬಗ್ಗೆ ಸಂಪುಟದಲ್ಲಿ ಚೆರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಹಲವು ಸಚಿವರ ಗೈರು?
ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಆದರೆ ಇಂದಿನ ಸಂಪುಟ ಸಭೆಗೆ ಬಹಳಷ್ಟು ಸಚಿವರು ಗೈರಾಗುತ್ತಾರೆ ಎಂಬ ಮಾಹಿತಿಯಿದೆ. ತಮ್ಮ ಬಳಿಯಿಂದ ಸಣ್ಣ ನೀರಾವರಿ ಇಲಾಖೆಯನ್ನು ಕಸಿದುಕೊಂಡಿರುವುದು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ತೀವ್ರ ಅಸಮಧಾನವನ್ನುಂಡು ಮಾಡಿದೆ. ಹೀಗಾಗಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿರಲು ಸಚಿವ ಮಾಧುಸ್ವಾಮಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ
ಆರೋಗ್ಯ
ಸಚಿವ
ಸುಧಾಕರ್
ಅವರ
ನೇತೃತ್ವದಲ್ಲಿಯೂ
ಪ್ರತ್ಯೇಕ
ಸಭೆ
ನಡೆಯುತ್ತಿದೆ.
ಹೀಗಾಗಿ
ಪ್ರಮುಖ
ಸಚಿವರು
ಇಂದಿನ
ಸಚಿವ
ಸಂಪುಟ
ಸಭೆಗೆ
ಹಾಜರಾಗುತ್ತಿಲ್ಲ
ಎನ್ನಲಾಗಿದೆ.
ನೀರಾವರಿ ಯೋಜನೆ
2020-21ನೇ ಸಾಲಿನಲ್ಲಿ 1500 ವಿಕಲ ಚೇತನರಿಗೆ ದ್ವಿಚಕ್ರ ವಾಹನಗಳನ್ನು ಖರೀದಿಸಲು 12.75 ಕೋಟಿರೂ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವುದು, ನಂಜನಗೂಡು ತಾಲೂಕಿನ ಹೊಸಪುರ ಗ್ರಾಮದಲ್ಲಿ ಕೆರೆಯಿಂದ ನೀರನ್ನು ಎತ್ತಿ ಗುಂಡ್ಲುಪೇಟೆ ತಾಲೂಕಿನ 9 ಕೆರೆಗಳಿಗೆ, ಸಣ್ಣ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡುವುದು. ಐಸಿಡಿಎಸ್ ಮತ್ತು ಪೋಷನ್ ಅಭಿಯಾನ್ ಅಡಿಯಲ್ಲಿ ಅಂಗನವಾಡಿ ಮತ್ತು ಕಾರ್ಯಕರ್ತೆಯರು, ಸಹಾಯಕರಿಗೆ ಒಂದು ಜೊತೆ ಸಮವಸ್ತ್ರ ನೀಡಲು 10.27 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡುವುದು ಇಂದಿನ ಸಂಪುಟ ಸಭೆಯ ಇತರ ಮಹತ್ವದ ವಿಷಯಗಳಾಗಿವೆ.
ಸಾಲಕ್ಕೆ ಖಾತರಿ ನೀಡಲು ಒಪ್ಪಿಗೆ
ಕರ್ನಾಟಕ ನಗರ ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ 2020ಕ್ಕೆ ಅನುಮೋದನೆ ನೀಡುವುದು. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ನೇಮಕಾತಿ) ನಿಯಮ 2020ಕ್ಕೆ ಅನುಮೋದನೆ. ಕರ್ನಾಟಕ ನಾಗರೀಕ ಸೇವಾ(ಅನುಕಂಪದ ಆಧಾರದ ಮೇಲೆ) ತಿದ್ದುಪಡಿ ನಿಯಮ 2020ಕ್ಕೆ ಅನುಮೋದನೆ ನೀಡುವುದು, ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮಕ್ಕೆ ದುಡಿಯುವ ಬಂಡವಾಳಕ್ಕಾಗಿ ಸಾಲಕ್ಕೆ ಖಾತರಿ ನೀಡುವುದು.
ಹೊನ್ನಾಳಿ ತಾಲೂಕಿಗೆ ವಿಶೇಷ ಯೋಜನೆ
ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ ಅಡಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಸೇವೆಗಳನ್ನು ಜಾರಿಗೊಳಿಸಲು 35 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡುವುದು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ 19 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಬೆನಕನಹಳ್ಳಿ ಏತ ನೀರಾವರಿ ಯೋಜನೆಗೆ 48 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ನೀಡುವುದು ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಳ್ಳಲಿದೆ.
Recommended Video