ಒಕ್ಕಲಿಗ ಸ್ವಾಮೀಜಿ ಸಮ್ಮುಖದಲ್ಲಿ ಇದೇನಿದು ಬಿಎಸ್ವೈ ರಾಜಕೀಯ ತಂತ್ರಗಾರಿಕೆ
ಬೆಂಗಳೂರು, ಡಿಸೆಂಬರ್ 11: ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಅಂತರಿಕ ಕಚ್ಚಾಟ ಹೆಚ್ಚಾದಲ್ಲಿ ಬಾಹ್ಯವಾಗಿ ಜೆಡಿಎಸ್ ಬೆಂಬಲ ಪಡೆಯಲು ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಯತ್ನ ಆರಂಭಿಸಿದ್ದಾರೆ. ನಿನ್ನೆ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಬಿಜೆಪಿ ನಾಯಕರ ಭೇಟಿ ಇದಕ್ಕೆ ಪುಷ್ಟಿಕೊಡುವಂತಿದೆ.
ಒನ್ ಇಂಡಿಯಾಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸ್ಪೋಟವಾಗುವ ಮಾಹಿತಿ ಯಡಿಯೂರಪ್ಪರಿಗೆ ಸಿಕ್ಕಿದೆ. ಹಾಗೇನಾದರೂ ಆದಲ್ಲಿ ಜೆಡಿಎಸ್ ಬೆಂಬಲ ಸರ್ಕಾರಕ್ಕೆ ಸಿಗಲಿದೆ ಎಂಬ ಸಂದೇಶವನ್ನ ಬಿಜೆಪಿಯಲ್ಲಿನ ಶಾಸಕರಿಗೆ ಕೊಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ನಿನ್ನೆ ಪ್ರಮುಖವಾಗಿ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿಯ ನೂತನ ಶಾಸಕರೂ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿದ್ದಾರೆ.
ಕುತೂಹಲ ಮೂಡಿಸಿದ ನಿರ್ಮಲಾನಂದನಾಥ ಸ್ವಾಮೀಜಿ-ದೇವೇಗೌಡರ ಭೇಟಿ:
ಬಿಜೆಪಿ ನಾಯಕರ ಭೇಟಿ ಹಿನ್ನೆಲೆಯಲ್ಲಿಯೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವುದಷ್ಟೇ ಅಲ್ಲ ಮೂಲ ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆತಂಕ ತಂದಿದೆ. ಸಂಪುಟ ವಿಸ್ತರಣೆ ಬಳಿಕ ಆಂತರಿಕ ಕಚ್ಚಾಟ ಹೆಚ್ಚಾದಲ್ಲಿ ಜೆಡಿಎಸ್ ಬಾಹ್ಯ ಬೆಂಬಲ ಪಡೆಯುವುದು ಸಿಎಂ ಬಿ ಎಸ್ ಯಡಿಯೂರಪ್ಪ ನಡೆಯಾಗಿದೆ.
ನಾಳೆ ಆದಿಚುಂನಗಿರಿ ಮಠಕ್ಕೆ ಯಡಿಯೂರಪ್ಪ ಭೇಟಿ
ಇನ್ನು ಈ ಎಲ್ಲ ಬೆಳವಣಿಗೆಗಳಿಗೆ ಸ್ಪಷ್ಟನೆ ಎಂಬಂತೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ನಾಳೆ ಸಿಎಂ ಯಡಿಯೂರಪ್ಪ ಭೇಟಿ ಕೊಡುತ್ತಿದ್ದಾರೆ. ಮೊದಲು ಬಿಜೆಪಿ ನಾಯಕರಿಂದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ, ಬಳಿಕ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಜೆಡಿಎಸ್ ವರಿಷ್ಠ ದೇವೇಗೌಡರ ಭೇಟಿ ಮಾಡಿರುವುದು. ಹಾಗೇ ನಾಳೆ ನಿರ್ಮಲಾನಂದನಾಥ ಸ್ವಾಮೀಜಿಯವರನ್ನ ಸಿಎಂ ಯಡಿಯೂರಪ್ಪ ಭೇಟಿ ಮಾಡಲಿರುವುದು ರಾಜಕೀಯ ಸಂಚಲನ ಮೂಡಿಸಿದೆ.
ನಾಳೆ ಜೆಡಿಎಸ್ ಬಾಹ್ಯ ಬೆಂಬಲ ನಿರ್ಧಾರ?
ಆದಿಚುಂಚಗಿರಿ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿಗೆ ಮಹತ್ವ ಬಂದಿದೆ. ಈಗಾಗಲೇ ಬಿಜೆಪಿಯ ಹಿರಿಯ ಶಾಸಕರು ಬಂಡಾಯ ಏಳಲು ಸಿದ್ಧರಾಗಿದ್ದಾರೆ. ಅದರಲ್ಲೂ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಕಿಡಿ ಹತ್ತಲಿದೆ. ಸಚಿವ ಸ್ಥಾನ ಸಿಗದೆ ಇದ್ದರೆ 'ನನ್ನ ನಡೆ ಊರ ಕಡೆ' ಅಂತಾ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಎಚ್ಚರಿಕೆ ಕೊಟ್ಟಿದ್ದರು. ಉಮೇಶ್ ಕತ್ತಿ ಜೊತೆಗೆ ಇನ್ನೂ ಹಲವು ಶಾಸಕರು ಬಂಡಾಯ ಏಳುವ ಮುನ್ಸೂಚನೆ ಯಡಿಯೂರಪ್ಪ ಅವರಿಗೆ ಇದೆ. ಹಾಗಾಗಿಯೆ ಒಂದು ಖಡಕ್ ಸಂದೇಶವನ್ನ ನಾಳೆ ಯಡಿಯೂರಪ್ಪ ತಮ್ಮ ಪಕ್ಷದ ಶಾಸಕರಿಗೆ ಕೊಡಲಿದ್ದಾರೆ ಎನ್ನಲಾಗಿದೆ.
ಬಾಹ್ಯ ಬೆಂಬಲ ಪಡೆಯಲು ಮುಂದಾಗಿದ್ದೇಕೆ?
ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಿಡಿದು ಇಲ್ಲಿಯವರೆಗೆ ತಮ್ಮನ್ನ ನಂಬಿ ಬಂದವರನ್ನ ಯಡಿಯೂರಪ್ಪ ಕೈಬಿಟ್ಟಿಲ್ಲ. ಹಾಗಾಗಿಯೇ ಯಡಿಯೂರಪ್ಪ ಭರವಸೆ ಕೊಟ್ಟರೆ ರಾಜಕೀಯದಲ್ಲಿ ಭವಿಷ್ಯ ಇರುತ್ತದೆ ಎಂದುಕೊಂಡೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ 16 ಶಾಸಕರು ಬಿಜೆಪಿಗೆ ಬಂದಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೀಳಲು ಕಾರಣರಾದವರನ್ನು ಕೈಬಿಡಲು ಯಡಿಯೂರಪ್ಪ ಸಿದ್ಧರಾಗಿಲ್ಲ.
ಅನರ್ಹರಾಗಿದ್ದ ಎಲ್ಲ 16 ಶಾಸಕರಿಗೆ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನ ಯಡಿಯೂರಪ್ಪ ಕೊಟ್ಟಿದ್ದರು. ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಹಾಗೂ ಪಕ್ಷದಲ್ಲಿನ ಹಿರಿಯ ಶಾಸಕರು ಬಂಡಾಯಕ್ಕೆ ಸಿದ್ದವಾದರೇ ಪರ್ಯಾಯ ಬೆಂಬಲವಿದೆ ಎಂಬುದನ್ನು ತೋರಿಸಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.
2 ಮಂತ್ರಿಸ್ಥಾನಗಳಿಗೆ ಲಾಬಿ
ಬಿಜೆಪಿ ಸೇರಿ ಶಾಸಕರಾದವರಿಗೆ ಸಚಿವಸ್ಥಾನ ಕೊಟ್ಟ ಬಳಿಕ ಉಳಿಯುವ 2 ಮಂತ್ರಿಸ್ಥಾನಗಳಿಗೆ ಲಾಬಿ ತೀವ್ರವಾಗಲಿದೆ. ಹಾಗಾಗಿ ಬಂಡಾಯ ಎದ್ದರೆ ಜೆಡಿಎಸ್ ಬೆಂಬಲವಿದೆ ಎಂಬ ಸಂದೇಶವನ್ನ ಯಡಿಯೂರಪ್ಪ ಬಿಡುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನಡೆದಿದ ರೆಸಾರ್ಟ್ ರಾಜಕೀಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ಪ್ರಯತ್ನ ಆರಂಭಿಸಿದ್ದಾರೆ. ಒಟ್ಟಾರೆ ಅನರ್ಹರಾಗಿದ್ದವರು ಅತಂತ್ರ ಆಗಬಾರದು ಎಂಬುದು ಸೇರಿದಂತೆ ಸ್ಥಿರ ಸರ್ಕಾರಕ್ಕೆ ಯಡಿಯೂರಪ್ಪ ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ.