ಉಮೇಶ್ ಕತ್ತಿಗೆ ಸಿಹಿ ಸುದ್ದಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 26: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಿಂದಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ನಿರಾಶೆ ಅನುಭವಿಸಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಸಿಹಿ ಸುದ್ದಿ ನೀಡಿದ್ದಾರೆ.
Recommended Video
ಈ ತಿಂಗಳ ಆರಂಭದಲ್ಲಷ್ಟೇ ಸಂಪುಟ ವಿಸ್ತರಣೆ ಮಾಡಿದ್ದ ಯಡಿಯೂರಪ್ಪ, ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಬಜೆಟ್ ನಂತರ ಸಂಪುಟ ವಿಸ್ತರಣೆ ಮಾಡಲಿದ್ದು, ಅದರಲ್ಲಿ ಉಮೇಶ್ ಕತ್ತಿ ಸೇರಿದಂತೆ ಮೂವರಿಗೆ ಸ್ಥಾನ ಸಿಗಲಿದೆ ಎಂದಿದ್ದಾರೆ.
ಎಚ್ಡಿಕೆ ಯನ್ನು ಭೇಟಿ ಮಾಡಿದ ಬಿಜೆಪಿ ಅತೃಪ್ತ ಶಾಸಕರು: ಭಿನ್ನಮತದ ಸೂಚನೆ
ಮಾರ್ಚ್ನಲ್ಲಿ ಬಜೆಟ್ ಮಂಡನೆ ನಂತರ ಸಂಪುಟ ವಿಸ್ತರಣೆ ನಡೆಯಲಿದೆ. ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಇನ್ನೂ ಮೂರು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಅದರಲ್ಲಿ ಮೂಲ ಬಿಜೆಪಿಗರು ಹಾಗೂ ಹಿರಿಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಉಮೇಶ್ ಕತ್ತಿ ಅವರಿಗೆ ಸ್ಥಾನ ನೀಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇನ್ನು ಉಳಿದ ಇಬ್ಬರು ಶಾಸಕರು ಯಾರು ಎಂದು ಅವರು ತಿಳಿಸಿಲ್ಲ. ಮೂಲ ಬಿಜೆಪಿಗರು ಹಾಗೂ ಹಿರಿಯರ ನಡುವೆ ತೀವ್ರ ಪೈಪೋಟಿ ಇದ್ದು, ಬಾಕಿ ಎರಡು ಸ್ಥಾನಗಳಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಬಜೆಟ್ ಬಳಿಕ ಸಂಪುಟ ವಿಸ್ತರಣೆ
ಬಜೆಟ್ ಅಧಿವೇಶನದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ನಂತರ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬಳಿಕವೇ ಸಂಪುಟ ವಿಸ್ತರಣೆ ನಡೆಯಲಿದೆ. ಮಾರ್ಚ್ 25ರ ಯುಗಾದಿ ಹಬ್ಬಕ್ಕೂ ಮುನ್ನವೇ ಬಿಜೆಪಿಯ ಉಮೇಶ್ ಕತ್ತಿ ಸೇರಿದಂತೆ ಮೂವರಿಗೆ ಬೆಲ್ಲ ಸಿಗುವ ನಿರೀಕ್ಷೆಯಿದೆ.
ಉಮೇಶ್ ಕತ್ತಿ ಪ್ರಯತ್ನಕ್ಕೆ ಯಶಸ್ಸು
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಿಂದಲೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಿದ್ದಾರೆ. ಹಲವು ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್, ಹಾಗೂ ಕೇಂದ್ರದ ಅನೇಕ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಈ ಬಾರಿ ಸಂಪುಟ ವಿಸ್ತರಣೆ ನಡೆದಾಗಲೂ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನ ಹೊರಹಾಕಿದ್ದರು. ಕೊನೆಗೂ ಅವರ ಕಸರತ್ತು ಸಫಲವಾಗುತ್ತಿದೆ.
ಸಿಎಂ ಯಡಿಯೂರಪ್ಪ ಕುರ್ಚಿಯ ಮೇಲೆ ಕಣ್ಣು ಹಾಕಿದ ಉಮೇಶ್ ಕತ್ತಿ
ದೆಹಲಿಯಲ್ಲಿ ಯಡಿಯೂರಪ್ಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥ ಮಂಗಳವಾರ ರಾತ್ರಿ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬಂದಿರುವ 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಈಗ ಬಿಜೆಪಿಯಲ್ಲಿರುವ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗುವುದು. ಉಮೇಶ್ ಕತ್ತಿ ಸೇರಿದಂತೆ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಿಎಂ ಸ್ಥಾನವೇ ಸಿಗಬೇಕಿತ್ತು...
'ನನಗಿರುವ ಯೋಗ್ಯತೆಗೆ ಸಚಿವ ಸ್ಥಾನ ಮಾತ್ರವಲ್ಲ, ಸಿಎಂ ಸ್ಥಾನವೇ ಸಿಗಬೇಕಿತ್ತು, ಆ ದಿಸೆಯಲ್ಲಿ ನನ್ನ ಪ್ರಯತ್ನವೂ ಮುಂದುವರೆದಿದೆ. ದೇವರ ಆಶೀರ್ವಾದದಿಂದ ಸಿಎಂ ಆಗಿಯೇ ಆಗುತ್ತೇನೆ. ನನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ನಾನೇನು ಮುನಿಸಿಕೊಂಡಿಲ್ಲ. ನನ್ನ ಹೆಂಡತಿಯೊಂದಿಗೇ ನಾನು ಮುನಿಸಿಕೊಳ್ಳುವುದಿಲ್ಲ. ಇನ್ನು ಯಡಿಯೂರಪ್ಪ ಜೊತೆಗೆ ಏಕೆ ಮುನಿಸಿಕೊಳ್ಳಲಿ' ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು.
ಸಿಗದ ಸಚಿವ ಸ್ಥಾನ; ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿದ ಶಾಸಕರಾರು?
ಇನ್ನೆರಡು ಸ್ಥಾನ ಯಾರಿಗೆ?
ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು ದೊಡ್ಡದಿದೆ. ಆದರೆ ಇರುವುದು ಎರಡು ಸ್ಥಾನ ಮಾತ್ರ. ಅವರಲ್ಲಿ ಯಡಿಯೂರಪ್ಪ ಮತ್ತು ಹೈಕಮಾಂಡ್ ಯಾರಿಗೆ ಆಶೀರ್ವಾದ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಅರವಿಂದ್ ಬೆಲ್ಲದ್, ಅರುಣ್ ಕುಮಾರ್ ಪೂಜಾರ್, ಆರಗ ಜ್ಞಾನೇಂದ್ರ, ಶಿವನಗೌಡ ನಾಯಕ್, ಎ.ಎಸ್. ಪಾಟೀಲ ನಡಹಳ್ಳಿ, ಶಂಕರ ಪಾಟೀಲ ಮುನೇನಕೊಪ್ಪ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ತಡರಾತ್ರಿ ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿ ಅತೃಪ್ತರ ರಹಸ್ಯ ಸಭೆ: ಆತಂಕದಲ್ಲಿ ಯಡಿಯೂರಪ್ಪ