ಸಚಿವ ಸಂಪುಟ ವಿಸ್ತರಣೆ: ಯಾರು? ಎಲ್ಲಿ? ಏನಂದ್ರು?
ಕರ್ನಾಟಕ, ಜನವರಿ 11: ಅಂತೂ ಇಂತೂ ಒಂದು ವರ್ಷದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಿಜೆಪಿ ಪಕ್ಷದ ಹಲವು ಹಿರಿಯ ಶಾಸಕರು ನಮಗೂ ಅವಕಾಶ ಸಿಗಬಹುದು ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಇದೇ ಜ.13 ಅಥವಾ 14 ರಂದು 7 ಜನ ಶಾಸಕರು ಸಚಿವರಾಗಿ ಬಡ್ತಿ ಹೊಂದಲಿದ್ದಾರೆ.
ಇಂದು ಅಥವಾ ನಾಳೆ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಲಿದ್ದು, ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಯಾರ ಮೇಲೆ ಕೃಪೆ ತೋರಿದ್ದಾರೆ ಎಂಬುದನ್ನು ಕಾದು ನೋಡಬೇಕು. ಆದರೆ ಸಚಿವ ಸಂಪುಟ ವಿಚಾರವಾಗಿ ಹಲವು ನಾಯಕರು ಹಾಗೂ ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..
ಸಚಿವ ಸ್ಥಾನ ಸಿಗದಿದ್ದರೂ ಬಿಜೆಪಿಗೆ ಬೆಂಬಲ; ಉಚ್ಚಾಟಿತ ಶಾಸಕ
ಗದಗಿನಲ್ಲಿ ಗೋವಿಂದ ಕಾರಜೋಳ ಹೇಳಿದ್ದು
ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿಯಾಗಿದೆ. ಪೂರ್ಣಾವಧಿಗೆ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ಗದಗಿನಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷ ಬಾಕಿ ಉಳಿದಿದ್ದು, ಯಡಿಯೂರಪ್ಪ ಅವರ ಅವಧಿ ಪೂರ್ಣಗೊಳ್ಳುವವರೆಗೆ ಸಿಎಂ ಆಗಿರಲಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ಸಿಎಂ ಈ ಬಗ್ಗೆ ಹೇಳಿದ್ದಾರೆ. ಇನ್ನು ಎರಡು ದಿನ ಕಾಯಿರಿ. ಯಾವುದೇ ಗೊಂದಲವಿಲ್ಲದೇ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.
ರಾಮನಗರದಲ್ಲಿ ಸಿ.ಪಿ.ಯೋಗೀಶ್ವರ್ ಮಾತನಾಡಿದ್ದು
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತಾಡಿದ ಎಂಎಲ್ಸಿ ಸಿ.ಪಿ ಯೋಗೀಶ್ವರ್, ನಾನು ಯಾವುದೇ ಊಹಾಪೋಹ ಸುದ್ದಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಬಹಳಷ್ಟು ಸಾರಿ ಈ ರೀತಿ ನನ್ನ ಹೆಸರು ಬಂದು ಅವಕಾಶ ವಂಚಿತನಾಗಿದ್ದೇನೆ. ಈ ವಿಚಾರದಲ್ಲಿ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲವೆಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ. ನಾನು ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ನಾನು ಇದೀಗ ಶಾಸಕನಾಗಿಕೆಲಸ ಮಾಡುತ್ತಿದ್ದೇನೆ. ಸಚಿವ ಸ್ಥಾನ ಸಿಕ್ಕಿದರೆ ರಾಜ್ಯವ್ಯಾಪಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿ.ಪಿ.ಯೋಗೀಶ್ವರ್ ಅವರು ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಶಿವರಾಮ್ ಹೆಬ್ಬಾರ್ ಹೇಳಿಕೆ
ಬುಧವಾರ ಅಥವಾ ಗುರುವಾರ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ವಿವೇಚನೆಗೆ ಸೇರಿದ್ದು, ಯಡಿಯೂರಪ್ಪ ಕೊಟ್ಟ ಮಾತು ನಡೆಸಿದ್ದು ಎಲ್ಲರಿಗೂ ಗೊತ್ತಿದೆ ಎಂದರು.
ವರಿಷ್ಠರು ಮತ್ತು ಸಿಎಂ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಯಾವುದೇ ಪಕ್ಷದ ಸರ್ಕಾರ ಇರಲಿ, ಯಾರೇ ಸಿಎಂ ಇರಲಿ ಸಂಪುಟ ವಿಸ್ತರಣೆ ಮಾಡುವಾಗ ಬಹಳ ಜನರಿಗೆ ಅಪೇಕ್ಷೆ ಇರುತ್ತದೆ. ಆದರೆ ಶೇ.10ಕ್ಕಿಂತ ಹೆಚ್ಚು ಸಚಿವ ಸ್ಥಾನ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು. ಈ ರಾಜ್ಯಕ್ಕೆ 35 ಶಾಸಕರನ್ನು ಮಾತ್ರ ಸಚಿವರನ್ನಾಗಿ ಮಾಡಬೇಕಾಗುತ್ತದೆ, ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ, ಆದರೆ ಅದು ಸಾಧ್ಯವಿಲ್ಲ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಸಿಎಂ ಬಿಎಸ್ವೈ ಬಳಿ ಇದೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಮೈಸೂರಿನಲ್ಲಿ ಎನ್.ಮಹೇಶ್ ಹೇಳಿದ್ದು
ಸಚಿವ ಸ್ಥಾನದ ಆಕಾಂಕ್ಷೆ ಯಾರಿಗೆ ಇರುವುದಿಲ್ಲ ಹೇಳಿ, ಸಚಿವ ಸ್ಥಾನ ಕೊಟ್ಟರೆ ಉತ್ತಮವಾದ ಕೆಲಸ ಮಾಡುವೆ. ಆದರೆ ಕೊಡುವುದು, ಬಿಡೋದು ಅವರಿಗೆ ಬಿಟ್ಟದ್ದು ಎಂದು ಮೈಸೂರಿನ ಸುತ್ತೂರಿನಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.
ನನಗೆ ಸಚಿವ ಸ್ಥಾನ ಸಿಗುತ್ತದೋ, ಇಲ್ಲವೋ ನನಗೆ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದರೆ ನಾನು ಯಡಿಯೂರಪ್ಪ ಜೊತೆ ಇರುವ ನಿರ್ಧಾರ ಮಾಡಿದ್ದೇನೆ. ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಇದೆ. ಅವಕಾಶ ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ, ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ ಎಂದು ಹೇಳಿ, ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ಶಾಸಕ ಎನ್.ಮಹೇಶ್ ಬೇಡಿಕೆ ಇಟ್ಟರು.
ಮೈಸೂರಿನಲ್ಲಿ ಎಸ್.ಎ ರಾಮದಾಸ್ ಮಾತು
ಯಡಿಯೂರಪ್ಪ ನಮ್ಮ ಕ್ಯಾಪ್ಟನ್, ಮುಂದಿನ ಎರಡೂವರೆ ವರ್ಷವೂ ಅವರೇ ನಮ್ಮ ಕ್ಯಾಪ್ಟನ್. ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರೇ ಮಾಡುತ್ತಾರೆ ಎಂದು ಶಾಸಕ ಎಸ್.ಎ ರಾಮದಾಸ್ ಅಭಿಪ್ರಾಯಪಟ್ಟರು.
ನನಗೂ ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರೂ ನಮಗೆ ಏನು ಬೇಸರ ಇಲ್ಲ. ನಾವು ಯಾವುದೇ ನಿರೀಕ್ಷೆ, ಆಸೆಗಳನ್ನು ಇಟ್ಟುಕೊಂಡಿಲ್ಲ. ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೆ ಇದ್ದರೂ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು.
ಚಿತ್ರದುರ್ಗದಲ್ಲಿ ಆರ್.ಅಶೋಕ ಅಭಿಪ್ರಾಯ
ಚಿತ್ರದುರ್ಗದ ಹಿರಿಯೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಸಿಎಂ ಸಂಪುಟ ವಿಸ್ತರಣೆ ಕುರಿತು ಹೇಳಿದ್ದಾರೆ. ಸರ್ಕಾರ ಬರಲು ಕಾರಣರಾದವರಿಗೆ ಮೊದಲ ಆದ್ಯತೆ ನೀಡುವುದಾಗಿದೆ. ಪಕ್ಷದಲ್ಲಿ ಶಾಸಕರಾಗಿ ಹಿಂದೆ ಕೆಲಸ ಮಾಡಿದ್ದಾರೆ, ಅವರಿಗೂ ಅಧಿಕಾರ ನೀಡುವ ದೃಷ್ಟಿಯಿಂದ ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ನಾಳೆ ಸಚಿವರ ಪಟ್ಟಿಯನ್ನ ಬಿಡುಗಡೆ ಮಾಡಬಹುದು. ಇದೇ ವೇಳೆ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.
ಪದೇ ಪದೇ ನೂರು ಸುಳ್ಳು ಹೇಳಿ ಸತ್ಯ ಮಾಡಲು ವಿಪಕ್ಷ ನಾಯಕರು ಹೊರಟಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಉರುಳಿಲ್ಲ. ಯಡಿಯೂರಪ್ಪನವರು ಸಿಎಂ ಆಗಿ ಮುಂದುವರಿಯಲು ನಮ್ಮ ಆಸೆ ಇದೆ. ಮೊನ್ನೆಯ ಶಾಸಕರ ಸಭೆಯಲ್ಲಿ ನಾವೆಲ್ಲರೂ ಹೇಳಿದ್ದೇವೆ. ಕೇಂದ್ರದ ನಾಯಕರು ಕೂಡಾ ಬದಲಾವಣೆ ಪ್ರಸ್ತಾಪ ಮಾಡಿಲ್ಲ ಎಂದು ಆರ್.ಆಶೋಕ ತಿಳಿಸಿದರು.
ಶಿವಮೊಗ್ಗದಲ್ಲಿ ಹರತಾಳು ಹಾಲಪ್ಪ ಸವಾಲು
ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಮಾನ ರಾಜಕಾರಣಿ ಯಾರಿದ್ದಾರೆ ತೊರಿಸಲಿ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡುವವರಿಗೆ ಸಾಗರ ಶಾಸಕ ಹರತಾಳು ಹಾಲಪ್ಪ ಪರೋಕ್ಷ ಸವಾಲು ಎಸೆದರು.
ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭವದಲ್ಲಿ ಮಾತನಾಡಿದರು.
Recommended Video
ಗದಗನಲ್ಲಿ ಕಳಕಪ್ಪ ಬಂಡಿ ಮಾತು
ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಬೇಡ ಅನ್ನಲ್ಲ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಈ ಕುರಿತು ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಅಂತಾ ಯಾರು ಹೇಳಿದ್ದಾರೆ. ನಾನಂತು ನೋಡಿಲ್ಲಾ ಹಾಗೂ ಕೇಳಿಲ್ಲಾ. ಈ ಬಗ್ಗೆ ನೋಡಿ ಹೇಳುತ್ತೇನೆ ಎಂದರು.
ಸಚಿವ ಸ್ಥಾನ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ನಿಮಗೆ ಅಸಮಾಧನವಿರಬಹುದು ಎಂದು ಮಾಧ್ಯಮದವರನ್ನೆ ಕೇಳಿದರು.