ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನದ ಲಾಬಿ: ಕವಲು ದಾರಿಯತ್ತು ರಾಜ್ಯ ಬಿಜೆಪಿ
ಮೂಢನಂಬಿಕೆಯನ್ನು ಬದಿಗಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಬುಧವಾರ (ನ 25) ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿದ ಹೇಳಿಕೆ, ರಾಜ್ಯ ಬಿಜೆಪಿಯಲ್ಲಿ ಮತ್ತೆ ಚಟುವಟಿಕೆ ಆರಂಭಕ್ಕೆ ಕಾರಣವಾಗಿದೆ.
ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರ ಜೊತೆಗೆ, ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿಯೂ ಜೋರಾಗಿ ಬೀಸಲಾರಂಭಿಸಿದೆ. ಆಕಾಂಕ್ಷಿಗಳು ವಿವಿಧ ಮುಖಂಡರಿಂದ ಒತ್ತಡ ಹೇರಲಾರಂಭಿಸಿದ್ದಾರೆ.
ತನ್ನನ್ನು ಕಡೆಗಣಿಸುತ್ತಿರುವ ವರಿಷ್ಠರಿಗೆ ಭರ್ಜರಿ ಸಡ್ಡು ಹೊಡೆದ ಯಡಿಯೂರಪ್ಪ?
ಕೆಲವರು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿ ಕೇಂದ್ರದ ನಾಯಕರನ್ನು ಭೇಟಿಯಾಗಿದ್ದಾರೆ. ಇವೆಲ್ಲದರ ನಡುವೆ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಚಾರದಲ್ಲಿ ರಾಜ್ಯ ಬಿಜೆಪಿ ಕವಲುದಾರಿಯತ್ತ ಸಾಗುತ್ತಿದೆ. ಇವರಿಗೆ ಸಚಿವಸ್ಥಾನ ನೀಡುವುದಕ್ಕೆ ಬಿಜೆಪಿಯ ಒಂದು ಗ್ರೂಪ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದರೆ, ಇವರಿಗೆ ಟಿಕೆಟ್ ನೀಡುವುದಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ, ಪ್ರತ್ಯೇಕ ಪ್ರತ್ಯೇಕ ಸಭೆಯು ನಡೆಯುತ್ತಿದೆ.
ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾನಂತೂ ಸುಮ್ಮನಿರಲ್ಲ: ಶಾಸಕ ರೇಣುಕಾಚಾರ್ಯ!
ರೇಣುಕಾಚಾರ್ಯ ಮತ್ತು ಎಂ.ಟಿ.ಬಿ ನಾಗರಾಜ್
ಯೋಗೇಶ್ವರ್ ಮತ್ತು ಮೂಲ, ವಲಸೆ ಬಿಜೆಪಿಗರು ಎನ್ನುವ ವಿಚಾರ ಹೊಸಹೊಸ ತಿರುವನ್ನು ಪಡೆಯುತ್ತಿದೆ. ಈ ವಿಚಾರದಲ್ಲಿ ಈಗಾಗಲೇ ರೇಣುಕಾಚಾರ್ಯ ಮತ್ತು ಎಂ.ಟಿ.ಬಿ ನಾಗರಾಜ್ ನಡುವೆ ಒಂದು ಸುತ್ತಿನ ಮಾತಿನ ಚಕಮಕಿ ನಡೆದುಹೋಗಿದೆ. ಆಪರೇಶನ್ ಕಮಲದ ಮೂಲಕ ಬಂದ ಹದಿನೇಳು ಶಾಸಕರೂ ಸರಕಾರ ರಚನೆಗೆ ಕಾರಣರು ಎನ್ನುವ ಹೇಳಿಕೆಯನ್ನು ಜಾರಕಿಹೊಳಿ ನೀಡಿದ್ದಾರೆ.
ಯೋಗೇಶ್ವರ್ ನನ್ನ ಗೆಳೆಯ, ರಮೇಶ್ ಜಾರಕಿಹೊಳಿ
ಯೋಗೇಶ್ವರ್ ಗೆ ಮಂತ್ರಿ ಸ್ಥಾನ ಕೊಡಿಸಲು ಆರಂಭದಿಂದಲೂ ಪ್ರಯತ್ನಿಸಿಕೊಂಡು ಬರುತ್ತಿರುವ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಈ ವಿಚಾರವನ್ನು ಜಾರಕಿಹೊಳಿ ಕೂಡ ಒಪ್ಪಿಕೊಂಡಿದ್ದಾರೆ. "ಆತ ನನ್ನ ಗೆಳೆಯ, ಅವರಿಗೆ ಸಚಿವ ಸ್ಥಾನ ಸಿಗುವಂತೆ ಮಾಡುವುದು ನನ್ನ ಕರ್ತವ್ಯ" ಎಂದು ಜಾರಕಿಹೊಳಿ ಹೇಳಿದ್ದಾರೆ.
ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾವಂತೂ ಸುಮ್ಮನೆ ಇರಲ್ಲ
ಇತ್ತ ಸಮಾನ ಮನಸ್ಕರ ಸಭೆ ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದಿದೆ. ಸರಕಾರ ರಚನೆ ಮತ್ತು ಹದಿನೇಳು ಶಾಸಕರು ಬಿಜೆಪಿಗೆ ಬಂದಿರುವ ವಿಚಾರದಲ್ಲಿ ಯೋಗೇಶ್ವರ್ ಕೊಡುಗೆ ಏನೂ ಇಲ್ಲ. "ಮೊದಲು ಬಿಜೆಪಿಯ 105 ಶಾಸಕರು, ಅದಾದ ನಂತರ ವಲಸೆ ಬಂದವರು. ರಾಮ ರಾಮ ಅಂತಾ ಒಬ್ಬರ ಹೆಸರನ್ನು ನಾನು ಜಪ ಮಾಡಲ್ಲ. ಅವರ ಹೆಸರು ಕೂಡ ಹೇಳಲ್ಲ. ಆದರೆ ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾವಂತೂ ಸುಮ್ಮನೆ ಇರಲ್ಲ" ಎಂದು ಯೋಗೇಶ್ವರ್ ಹೆಸರು ಉಲ್ಲೇಖಿಸದೇ, ರೇಣುಕಾಚಾರ್ಯ ವಾರ್ನಿಂಗ್ ನೀಡಿದ್ದಾರೆ.
Recommended Video
ಸಿ.ಪಿ.ಯೋಗೇಶ್ವರ್ ವಿಚಾರದಲ್ಲಿ ಕವಲು ದಾರಿಯತ್ತು ರಾಜ್ಯ ಬಿಜೆಪಿ
ಈ ಎಲ್ಲಾ ಬೆಳವಣಿಗೆಗಳ ನಡುವೆ ರಮೇಶ್ ಜಾರಕಿಹೊಳಿಗೆ ಬಿಜೆಪಿ ವರಿಷ್ಠರು ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಶಿಕಲಾ ಜೊಲ್ಲೆ, ಪ್ರಭಾಕರ ಕೋರೆ ಮುಂತಾದ ನಾಯಕರು ಭಾಗವಹಿಸಿದ್ದರು. ಒಟ್ಟಿನಲ್ಲಿ ಮೂಲ, ವಲಸೆ ಮತ್ತು ಸಿ.ಪಿ.ಯೋಗೇಶ್ವರ್ ವಿಚಾರ, ರಾಜ್ಯ ಬಿಜೆಪಿಯಲ್ಲಿ ಬಿರುಕನ್ನು ಮೂಡಿಸುತ್ತಿದೆ.