ಕೈತಪ್ಪಿದ ಸಚಿವ ಸ್ಥಾನ: ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು
ಬೆಂಗಳೂರು, ಆಗಸ್ಟ್ 20: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ವಂಚಿತ ಹಲವು ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇಂದು 17 ಶಾಸಕರು ಮಂತ್ರಿಗಳಾಗಿ ಯಡಿಯೂರಪ್ಪ ಅವರ ಸಂಪುಟ ಸೇರಿದ್ದಾರೆ. ಹಲವು ಹಿರಿಯರು, ಯಡಿಯೂರಪ್ಪ ಆಪ್ತರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ನಿರಾಕರಿಸಲಾಗಿದೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಸಂಪುಟ ವಿಸ್ತರಣೆ ಪ್ರಮಾಣ ವಚನಕ್ಕೆ ಹಲವು ಶಾಸಕರು ಗೈರಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇವಲರು ನೇರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಸೇರಿ ತಪ್ಪು ಮಾಡಿಬಿಟ್ಟೆ; ಕಣ್ಣೀರಿಟ್ಟ ಗೂಳಿಹಟ್ಟಿ ಶೇಖರ್
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೂಳೀಹಟ್ಟಿ ಶೇಖರ್ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 'ಬಿಜೆಪಿ ಪಕ್ಷಕ್ಕೆ ಸೇರಿ ತಪ್ಪು ಮಾಡಿಬಿಟ್ಟೆ' ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಹೈಕಮಾಂಡ್ ಮೊರೆ ಹೋಗುತ್ತೇವೆ: ತಿಪ್ಪಾರೆಡ್ಡಿ
ಯಡಿಯೂರಪ್ಪ ಅವರ ಆಪ್ತ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರೂ ಸಹ ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. 'ಹಿರಿಯ ಶಾಸಕರೆಲ್ಲಾ ಸೇರಿ ಹೈಕಮಾಂಡ್ ಮೊರೆ ಹೋಗುತ್ತೇವೆ' ಎಂದು ಅವರು ಹೇಳಿದ್ದಾರೆ.
ಶಾಸಕ ತಿಪ್ಪಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಚಿತ್ರದುರ್ಗದಲ್ಲಿ ಆಕ್ರೋಶ, ಲಾಠಿ ಚಾರ್ಜ್
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅಸಮಾಧಾನ
ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರೂ ಸಹ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಆದರೆ ಅದು ಹುಸಿಯಾದ ಪರಿಣಾಮ ಅವರೂ ಸಹ ಮಾಧ್ಯಮದವರ ಬಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ನಾಯಕರ ಮೇಲೆ ಅಪ್ಪಚ್ಚು ರಂಜನ್ ಸಿಟ್ಟು
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸಹ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇಪ್ಪತ್ತೆರಡು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ತುರ್ತು ಪರಿಸ್ಥಿತಿ ಸಮಯದಿಂದ ಬಿಜೆಪಿಯ ಜೊತೆಗೆ ಇದ್ದೇನೆ, ಕರಾವಳಿಯಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಿದ್ದೇನೆ ಆದರೆ ನಾಯಕರು ಇಂದು ಪಕ್ಷ ನಿಷ್ಠೆ ಇದ್ದವರನ್ನು ಬಿಟ್ಟು ವ್ಯಕ್ತಿ ನಿಷ್ಠರಿಗೆ ಮಾತ್ರ ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಕೈ ತಪ್ಪಿದ ಸಚಿವ ಸ್ಥಾನ : ಯಾರು, ಏನು ಹೇಳಿದರು?
ಪಟ್ಟಿ ತಯಾರು ಮಾಡಿದ್ದು ರಾಜ್ಯದ ನಾಯಕರು: ಅಪ್ಪಚ್ಚು ರಂಜನ್
ದೆಹಲಿಯಲ್ಲಿ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸಿದೆ ಎಂದು ರಾಜ್ಯದ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದ ಅಪ್ಪಚ್ಚು ರಂಜನ್, ಎಲ್ಲಾ ಪಟ್ಟಿ ಇಲ್ಲಿಯೇ ತಯಾರಾಗಿದೆ ಎಂದರು. ನನಗೆ ಸಚಿವ ಸ್ಥಾನ ನೀಡದಿರುವುದು ಕೊಡಗು ಜಿಲ್ಲೆಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.
ಹಿರಿಯ ಶಾಸಕ ಅಂಗಾರ ಬೇಸರ
ಸುಳ್ಯ ಬಿಜೆಪಿ ಶಾಸಕ ಎಸ್.ಅಂಗಾರ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನವನ್ನು ಅವರು ಪಕ್ಷದ ವಿರುದ್ಧ ಹೊರಹಾಕಿದ್ದಾರೆ. ಅಂಗಾರ ಅವರಿಗೆ ಟಿಕೆಟ್ ಪಕ್ಕಾ ಎನ್ನಲಾಗಿತ್ತು. ಆದರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. 'ತತ್ವ ನಿಷ್ಠೆಗೆ ಗೌರವ ಕೊಡಲಿಲ್ಲ ಆದರೆ ಸಂಘಟನೆ ಬಗ್ಗೆ ನನಗೆ ಅಸಮಾಧಾನವಿಲ್ಲ' ಎಂದ ಅವರು ಪರೋಕ್ಷವಾಗಿ ನಾಯಕತ್ವದ ಮೇಲೆ ಅಸಮಾಧಾನವಿದೆ ಎಂದು ಹೇಳಿದರು.
ನನ್ನ ನಿರೀಕ್ಷೆ ಹುಸಿಯಾಗಿದೆ, ಆದರೂ ಕಾಯುತ್ತೇನೆ: ಕತ್ತಿ
ಸಚಿವ ಸ್ಥಾನ ಕೈತಪ್ಪಿರುವ ಉಮೇಶ್ ಕತ್ತಿ ಮಾತನಾಡಿ, ಎಂಟು ಬಾರಿ ಶಾಸಕನಾಗಿ ಗೆದ್ದಿದ್ದೇನೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು, ಆದರೆ ಸಿಗಲಿಲ್ಲ. ಇನ್ನೂ ಅರ್ಧ ಸಂಪುಟ ವಿಸ್ತರಣೆ ಬಾಕಿ ಇದೆ ಆಗಲಾದರೂ ಸಿಗಬಹುದೆಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ
ಬಾಲಚಂದ್ರ ಜಾರಕಿಹೊಳಿ ಅಸಮಾಧಾನ
ಬಾಲಚಂದ್ರ ಜಾರಕಿಹೊಳಿ ಅವರಿಗೂ ಸಹ ಸಚಿವ ಸ್ಥಾನ ಕೈತಪ್ಪಿದ್ದು, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜಾರಕಿಹೊಳಿ ಕುಟುಂಬಕ್ಕೆ ಕಳೆದ ಹದಿನೈದು ವರ್ಷದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಇಲ್ಲದಾಗಿದೆ. ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಕಾರಣಕ್ಕೆ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಗಿಲ್ಲ ಎನ್ನಲಾಗುತ್ತಿದೆ.
ಕೆಲವು ಶಾಸಕರು ಅಸಮಾಧಾನ ಹೊರಹಾಕಿಲ್ಲ
ಕೆಲವು ಶಾಸಕರು ನೇರವಾಗಿ ಅಸಮಾಧಾನ ಹೊರಹಾಕಿಲ್ಲವಾದರೂ, ಸಚಿವ ಸಂಪುಟ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಹಾಗೂ ಬೆಂಬಲಿಗರು ಪ್ರತಿಭಟನೆಗಳನ್ನು ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಅಸಮಾಧಾನ ಹೊರಹಾಕದ ಶಾಸಕರೂ ಇದ್ದಾರೆ
ಬಹಿರಂಗವಾಗಿ ಅಸಮಾಧಾನ ಹೊರಹಾಕದ ಶಾಸಕರ ಪಟ್ಟಿ ಇಂತಿದೆ. ವಿರೂಪಾಕ್ಷ, ರೇಣುಕಾಚಾರ್ಯ, ಮುರಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ರವಿಂದ್ರನಾಥ್, ರಾಜೂಗೌಡ, ದತ್ತಾತ್ರೆಯ ಪಾಟೀಲ್ ರೇವೂರ, ಕೆ.ಜಿ.ಬೋಪಯ್ಯ.