ಸಂಪುಟ ರಚನೆಯಲ್ಲಿ ಮತ್ತೆಮತ್ತೆ ಕಡೆಗಣನೆ: ಆದರೂ ಪಕ್ಷ ನಿಯತ್ತಿಗೆ ಹೆಸರಾದ ಈ ಇಬ್ಬರು ಶಾಸಕರು
ಬಸವರಾಜ ಬೊಮ್ಮಾಯಿ ಸರಕಾರದ ನೂತನ 29 ಶಾಸಕರು ಸಚಿವರಾಗಿ ಪ್ರಮಾಣವಚನವನ್ನು ಬುಧವಾರ (ಆ 4) ಸ್ವೀಕರಿಸಲಿದ್ದಾರೆ. ಅಲ್ಲಿಗೆ, ಅವರು ಸಚಿವರಾಗುತ್ತಾರೆ, ಇವರಿಗೆ ಕೊಕ್ ಕೊಡಲಾಗುತ್ತದೆ ಎನ್ನುವ ಅನಧಿಕೃತ ಸುದ್ದಿಗಳಿಗೆ ತೆರೆಬಿದ್ದಂತಾಗಿದೆ.
ನಮ್ಮ ರಾಜ್ಯದಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ, ಲಾಬಿ ನಡೆಸದೇ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದಕ್ಕೆ ಮತ್ತೆ ಬೊಮ್ಮಾಯಿ ನೂತನ ಸಂಪುಟ ರಚನೆ ಉದಾಹರಣೆಯಾಗಬಲ್ಲದು. ಅರ್ಹರನ್ನು, ಪಕ್ಷ ನಿಷ್ಟರನ್ನು ಪಕ್ಷವೇ ಗುರುತಿಸುವ ಕೆಲಸ ನಡೆಯುತ್ತಿಲ್ಲ ಎನ್ನುವುದು ಬಿಜೆಪಿ ಕಾರ್ಯಕರ್ತರ ಬೇಸರಕ್ಕೆ ಮತ್ತೆ ಕಾರಣವಾಗಿದೆ.
ಒಂದೆರಡು ಬಾರಿ ಶಾಸಕರಾದವರು ಸಚಿವರಾಗುತ್ತಾರೆ, ಐದಾರು ಬಾರಿ ಶಾಸಕರಾದರೂ ಅವರಿಗೆ ಸಚಿವ ಸ್ಥಾನ ಮರೀಚಿಕೆಯಾಗುತ್ತದೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಅಂಗಾರ ಅವರನ್ನೇ ತೆಗೆದುಕೊಳ್ಳೋಣ. ಆರು ಬಾರಿ ಶಾಸಕರಾಗಿದ್ದರೂ, ಕಳೆದ ಯಡಿಯೂರಪ್ಪನವರ ಸರಕಾರದಲ್ಲಿ ಕೊನೇ ಕ್ಷಣದಲ್ಲಿ ಅವರ ಹೆಸರು ಸೇರಿಕೊಂಡಿತು.
ಸಂಘ ಪರಿವಾರದ ಮಾತೇ ಅಂತಿಮವಾಗುವ ಬಿಜೆಪಿಯಲ್ಲಿ ಇಂತಹ ಹಲವು ಶಾಸಕರು ಈಗಲೂ ಇದ್ದಾರೆ. ಲಾಬಿ ನಡೆಸದೇ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ಶಿರಸಾ ವಹಿಸಿ ಪಾಲಿಸುವ, ಶಿಸ್ತಿನ ಸಿಪಾಯಿಗಳಾಗಿರುವ ಶಾಸಕರು ಬಿಜೆಪಿಯಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಈ ಎರಡು ಹೆಸರುಗಳು ಸಾಕು.
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ
ಮೈಸೂರು ಜಿಲ್ಲೆ, ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮತ್ತು ಉಡುಪಿ ಜಿಲ್ಲೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಈ ಎರಡು ಶಾಸಕರು ಪಕ್ಷ ನಿಷ್ಠೆಗೆ ಹೆಸರಾದವರು. ಸಚಿವ ಸ್ಥಾನಕ್ಕಾಗಿ ಹೆಚ್ಚಿನ ಲಾಬಿ ನಡೆಸದೇ ಇರುವುದರಿಂದಲೋ ಏನೋ, ಪ್ರತೀ ಸಂಪುಟ ರಚನೆಯ ವೇಳೆಯೂ ಇವರನ್ನು ಕಡೆಗಣಿಸಲಾಗುತ್ತದೆ. ಈ ಬಾರಿ, ರಾಮದಾಸ್ ಅವರು ಬ್ರಾಹ್ಮಣ ಕೋಟಾದಲ್ಲಿ ಸಂಪುಟ ಸೇರುತ್ತಾರೆ ಎಂದೇ ಇತ್ತು. ಆದರೂ, ಕೊನೆಯ ಕ್ಷಣದಲ್ಲಿ ಅದು ಮಿಸ್ ಆಗಿದೆ.
ಕುಂದಾಪುರದ ವಾಜಪೇಯಿ ಎಂದೇ ಹೆಸರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ
ಇನ್ನು, 1999ರಿಂದ ಸತತವಾಗಿ ಗೆದ್ದು ಬರುತ್ತಿರುವ, ಕುಂದಾಪುರದ ವಾಜಪೇಯಿ ಎಂದೇ ಹೆಸರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರದ್ದೂ ಇದೇ ಕಥೆ. ಸತತವಾಗಿ ಐದು ಬಾರಿ ಬಿಜೆಪಿ ಟಿಕೆಟಿನಿಂದ (ಒಮ್ಮೆ ಮಾತ್ರ ಪಕ್ಷೇತರರಾಗಿ) ಗೆದ್ದಿರುವ ಹಾಲಾಡಿಯವರು ಲಾಬಿ ರಾಜಕೀಯಕ್ಕೆ ಬೆಲೆ ಕೊಟ್ಟವರಲ್ಲ. ಜಿಲ್ಲೆಯ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಗೆ ಕೊಕ್ ನೀಡಿ, ಜಿಲ್ಲಾ ಪ್ರಾತಿನಿಧ್ಯತೆಯಲ್ಲಿ ಹಾಲಾಡಿಯವರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಎಸ್.ಎ.ರಾಮದಾಸ್ ಅವರದ್ದೂ ಇದೇ ರೀತಿಯ ರಾಜಕೀಯ ಜೀವನ
ಎಸ್.ಎ.ರಾಮದಾಸ್ ಅವರದ್ದೂ ಇದೇ ರೀತಿಯ ರಾಜಕೀಯ ಜೀವನ. ಕಟ್ಟಾ ಹಿಂದುತ್ವದ ಪ್ರತಿಪಾದಕರು, ಆರ್ ಎಸ್ ಎಸ್ ಹಿಂಬಾಲಕರಾಗಿರುವ ರಾಮದಾಸ್ ಅವರ ಹೆಸರನ್ನು ಈ ಬಾರಿಯೂ ಪರಿಗಣಿಸದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. 1994-2018ರ ವರೆಗಿನ ಆರು ಅಸೆಂಬ್ಲಿ ಚುನಾವಣೆಯಲ್ಲಿ ನಾಲ್ಕು ಬಾರಿ ಬಿಜೆಪಿ ಟಿಕೆಟಿನಿಂದ ಗೆದ್ದಿರುವ ರಾಮದಾಸ್ ಅವರಿಗೆ ಕಳೆದ ಯಡಿಯೂರಪ್ಪನವರ ಸರಕಾರದಲ್ಲೂ ಸಚಿವ ಸ್ಥಾನ ಮಿಸ್ ಆಗಿತ್ತು. ಈಗಲೂ ಅದೇ ಆಗಿದೆ.
Recommended Video
|
ಸಚಿವ ಸ್ಥಾನ ಸಿಗದಿದ್ದರೂ ಎಸ್.ಎ.ರಾಮದಾಸ್ ಮಾಡಿರುವ ಅವರ ಪಕ್ಷದ ಮೇಲಿನ ನಿಯತ್ತಿಗೆ ಸಾಕ್ಷಿ
ಸಚಿವ ಸ್ಥಾನ ಸಿಗದಿದ್ದರೂ ಎಸ್.ಎ.ರಾಮದಾಸ್ ಮಾಡಿರುವ ಟ್ವೀಟ್ ಅವರ ಪಕ್ಷದ ಮೇಲಿನ ನಿಯತ್ತಿಗೆ ಸಾಕ್ಷಿಯಾಗಿದೆ. "ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು. ಕರ್ನಾಟಕವನ್ನು ದೇಶದಲ್ಲಿ ನಂ.1 ಮಾಡಲು ತಾವೆಲ್ಲ ಶ್ರಮಿಸುತ್ತೀರೆಂದು ನಂಬಿರುತ್ತೇನೆ. ತಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಶುಭವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ" ಇದು ರಾಮದಾಸ್ ಮಾಡಿರುವ ಟ್ವೀಟ್.