ಮತ್ತೆ ಸಂಪುಟ ವಿಸ್ತರಣೆ ಮುಂದಕ್ಕೆ, ಈ ಬಾರಿ ಏನು ಕಾರಣ?
ಬೆಂಗಳೂರು, ನವೆಂಬರ್ 11: ಉಪಚುನಾವಣೆ ಮುಗಿದ ಕೂಡಲೇ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದ್ದ ಮಾತು ಕೇಳಿಕೊಂಡು ಕೂತಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ.
ಹಲವು ಬಾರಿ ಮುಂದಕ್ಕೆ ಹೋಗಿರುವ ಎರಡನೇ ಹಂತದ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವ ಎಲ್ಲ ಸಂಭವ ಇದೆ. ಚಳಿಗಾಲದ ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವ ಬಗ್ಗೆ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಪ್ರಸವ ವೇದನೆಗೆ ಕೊನೆ ಎಂದು? ಕೂಡ ಬಾರದ ಮುಹೂರ್ತ
ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಪಕ್ಕಾ ಎನ್ನಲಾಗಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಅತ್ಯಂತ ಸನಿಹದಲ್ಲಿದ್ದು, ಈ ಸಮಯದಲ್ಲಿ ಸಂಪುಟ ವಿಸ್ತರಣೆ ಮಾಡಿ ಅತೃಪ್ತರು ಭಿನ್ನಮತ ವ್ಯಕ್ತಪಡಿಸಿದರೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಕಾರಣದಿಂದ ಸಂಪುಟ ವಿಸ್ತರಣೆಯನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ.
ದೆಹಲಿಗೆ ಬರಲೇಬೇಡಿ: ಹೈಕಮಾಂಡ್
ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೆ ದೆಹಲಿಯ ಕಡೆಗೆ ಬರಲೇ ಬೇಡಿ ಎಂದು ಹೈಕಮಾಂಡ್ ಸಚಿವ ಆಕಾಂಕ್ಷಿಗಳಿಗೆ ಹೇಳಿಬಿಟ್ಟಿದೆ. ಪಂಚ ರಾಜ್ಯಗಳ ಚುನಾವಣೆ ಕಡೆಗೆ ಹೈಕಮಾಂಡ್ ಗಮನವಹಿಸಿದೆ ಹಾಗಾಗಿ ಈ ಸಮಯದಲ್ಲಿ ಸಂಪುಟ ವಿಸ್ತರಣೆಯಂತಹಾ ವಿಷಯಗಳ ಕಡೆ ಗಮನವಹಿಸುವುದು ಅಸಾಧ್ಯ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ.
ಅಧಿವೇಶನ ಮುಗಿದುಬಿಡಲಿ
ಮುಂದಿನ ತಿಂಗಳ ಆರಂಭದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತದೆ ಹಾಗಾಗಿ ಅಧಿವೇಶನ ಮುಗಿದ ನಂತರವೇ ಸಂಪುಟ ವಿಸ್ತರಣೆ ಮಾಡಿರೆಂದು ಕೆಲ ಹಿರಿಯ ನಾಯಕರು ಕೆಪಿಸಿಸಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮುಂಚೆಯೇ ಸಂಪುಟ ವಿಸ್ತರಣೆ ಮಾಡಿ ಭಿನ್ನಮತೀಯರು ತಕರಾರು ತೆಗೆದರೆ ಅಧಿವೇಶನದಲ್ಲಿ ಸರ್ಕಾರಕ್ಕೆ ಹಿನ್ನಡೆ ಆಗುತ್ತದೆ ಎಂಬುದು ಅವರ ವಾದ.
ಸಂಪುಟ ವಿಸ್ತರಣೆ : ದೆಹಲಿಗೆ ಹೊರಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ನಿಗಮಮಂಡಳಿಗಳಿಗೂ ನೇಮಕ ಇಲ್ಲ
ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಒಟ್ಟಿಗೆ ಮಾಡಬೇಕೆಂದು ಕೆಪಿಸಿಸಿ ನಿರ್ಣಯಿಸಿದೆ ಹಾಗಾಗಿ ಸಂಪುಟ ವಿಸ್ತರಣೆ ಆಗುವವರೆಗೂ ನಿಗಮ ಮಂಡಳಿಗಳಿಗೂ ನೇಮಕ ಅಸಾಧ್ಯ. ಇದು ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಹುಟ್ಟಿಸಿದೆ ಎನ್ನಲಾಗಿದೆ.
ಆಕಾಂಕ್ಷಿಗಳ ಪಟ್ಟಿ
ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ತುಕಾರಾಂ, ನಾಗೇಂದ್ರ, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ಈಗಾಗಲೇ ದೆಹಲಿ ಮಟ್ಟದಲ್ಲಿ ಲಾಬಿ ಕೂಡ ನಡೆಸಿದ್ದರು. ಜೊತೆಗೆ ಆನಂದ್ ಸಿಂಗ್, ಸುಧಾಕರ್, ಮುನಿಯಪ್ಪ ಇನ್ನೂ ಹಲವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.